Saturday, June 30, 2012

ಎರಡು ಪತ್ರಗಳು (ಮೊದಲ ಪತ್ರ)

ಶನಿವಾರದ ದಿನ, ಆರಾಮವಾಗಿ ಹನ್ನೆರಡು ಘಂಟೆಗೆ ಎದ್ದಿದ್ದೆ. ನಿನ್ನೆ ರಾತ್ರಿಯ ನಶೆ ಇನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ಅಡಿಗೆ ಮನೆಯಲ್ಲಿ ಉಳಿದಿದ್ದ ಅರೆ ಬರೆ ತಿಂಡಿಯನ್ನು ತಿಂದು, ಸ್ವಲ್ಪ ನಿಂಬೆ ಶರಬತ್ತು ಕುಡಿಯುತ್ತ ಕುಳಿತ್ತಿದ್ದೆ. ಬೇಗ ನಶೆ ಇಳಿಸದಿದ್ದರೆ ಇವತ್ತಿನ ದಿನವೆಲ್ಲ ಹಾಳಾಗಿ ಹೋಗುವುದು ಖಂಡಿತ. ಕುಡಿಯುವಾಗೆಲ್ಲ ತಪ್ಪಿ ಸಹ ನಾಳೆಯ ಚಿಂತೆ ಬರುವುದಿಲ್ಲ, ಈಗ ಅನುಭವಿಸಬೇಕು. ಮಧ್ಯಾಹ್ನದ ಊಟಕ್ಕೆ ದೀಪಕ್ ಜೊತೆ ಹೊರಗಡೆ ಬೇರೆ ಹೋಗಬೇಕು. ಯಾಕೋ ದೀಪಕ್ ಇತ್ತೀಚಿಗೆ ನಮ್ಮನ್ನೆಲ್ಲ ಆದಷ್ಟು ದೂರ ಇಡುತ್ತ ಇದ್ದಾನೆ, ನಿನ್ನೆ ರಾತ್ರಿ ಸಹ ಪಾರ್ಟಿಗೆ ಬಂದಿರಲಿಲ್ಲ, ಏನೆಂದು ಸರಿಯಾಗಿ ವಿಚಾರಿಸಬೇಕು. ನಿಂಬೆ ಪಾನಕ ಕುಡಿಯುತ್ತ ಟೀವಿ ಆನ್ ಮಾಡಿದೆ, ಸೀದಾ ವಾರ್ತೆಗಳ ಚಾನೆಲ್ ಗೆ ಹೋಗಿತ್ತು. ಹಾಗೆಯೆ ಇಟ್ಟೆ, ಇತ್ತೀಚಿಗೆ ಮಾಮೂಲಿ ಮನರಂಜನ ಚಾನೆಲ್ ಗಳಿಗಿಂತ ಈ ವಾರ್ತೆಗಳಲ್ಲೇ ಜಾಸ್ತಿ ಮನರಂಜನೆ ಸಿಗುತ್ತಿತ್ತು.

ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬಿಸಿ ಬಿಸಿ ಸುದ್ದಿ ಕೆಳಗಡೆ ಮಿನುಗುತ್ತಿತ್ತು. ರಾಜ್ಯದ ಮಂತ್ರಿಯೋರ್ವರ ಬರ್ಬರ ಹತ್ಯೆ, ಇನ್ನಿಬ್ಬರಿಗೆ ಗಂಬೀರ ಪ್ರಮಾಣದ ಗಾಯ. ಆರೋಪಿ ದೀಪಕ್ ಸ್ಥಳದಲ್ಲೇ ಆತ್ಮಹತ್ಯೆ. ಒಂದು ಕ್ಷಣ ನಮ್ಮ ದೀಪಕ್ ಇರಬಹುದೇ ಅನಿಸಿತು. ಮತ್ತೆ ಅಂದುಕೊಂಡೆ, ಕೊಲೆಯಾದರೂ ಮಾಡಿಯಾನು, ಆತ್ಮಹತ್ಯೆಯಂತ ಕೆಲಸ ಖಂಡಿತಾ ಮಾಡಲ್ಲ ಅಂತ. ಕೆಲವೇ ಹೊತ್ತಿನಲ್ಲಿ ಆರೋಪಿಯ ಚಿತ್ರವೂ ಪ್ರಕಟವಾಯಿತು. ನನ್ನ ನಶೆಯಲ್ಲ ಒಮ್ಮೇಲೆ ಇಳಿಯಿತು. ದೀಪಕ್ ರಕ್ತದ ಮಡುವಲ್ಲಿ ಬಿದ್ದಿದ್ದ. ನನ್ನ ಕಣ್ಣುಗಳನ್ನೇ ನನಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ದೀಪಕ್ ನ ನಂಬರಿಗೆ ಡಯಲ್ ಮಾಡತೊಡಗಿದೆ. ಆದರೆ ಮರು ಕ್ಷಣದಲ್ಲಿ ಕರೆಯನ್ನು ತುಂಡರಿಸಿದೆ. ನನ್ನಲ್ಲೂ ಭಯ ಮೂಡತೊಡಗಿತ್ತು . ಖಂಡಿತವಾಗಲೂ ಅದು ದೀಪಕ್, ಅವನ ಫೋನ್ ಈವಾಗ ಪೋಲಿಸ್ ವಶದಲ್ಲಿರಬಹುದು, ಸುಮ್ಮನೆ ಯಾಕೆ ಕೋಲು ಕೊಟ್ಟು ಪೆಟ್ಟು ತಿನ್ನುವುದು. ಬೇರೆ ಯಾರನ್ನು ಕೇಳುವುದು ತಿಳಿಯಲಿಲ್ಲ, ನನ್ನಷ್ಟು ದೀಪಕ್ ಗೆ ಯಾರೂ ಪರಿಚಿತರಲ್ಲ. ದೀಪಕ್ ಹೀಗೆ ಮಾಡಿದ ಎಂದರೆ ನನಗೆ ನಂಬಲೇ ಸಾಧ್ಯವಿರಲಿಲ್ಲ. ಮತ್ತೆ ಕಣ್ಣಲ್ಲಿ ಕಣ್ಣಿಟ್ಟು ವಾರ್ತೆ ನೋಡಲು ಆರಂಬಿಸಿದೆ, ಬಹುಶ ನನಗೆ ಬೇಕಾದ ಮಾಹಿತಿ ಎಲ್ಲ ಅಲ್ಲೇ ಸಿಗಬಹುದೇನೋ.


ಬೆಳಿಗ್ಗೆ ಹತ್ತು ಘಂಟೆಯ ಹೊತ್ತಿಗೆ ನಗರದ ಕಾಲೇಜೊಂದರಲ್ಲಿ ಸಮ್ಮೇಳನವನ್ನು ಉದ್ಘಾಟಿಸಲು ಸಚಿವರು ಬಂದಿದ್ದರಂತೆ. ಸಮಾರಂಭವನ್ನು ಉದ್ಘಾಟಿಸುವ ಸಮಯದಲ್ಲೇ ದೀಪಕನ ಕೈಯಿಂದ ಹಾರಿದ ಪಿಸ್ತೂಲಿನ ಗುಂಡು ಸಚಿವರ ಜೀವವನ್ನು ಬಲಿ ತೆಗೆದುಕೊಂಡಿತ್ತು. ದೀಪಕನನ್ನು  ಬಂಧಿಸಲು ಪೊಲೀಸರು ಬರುವ ಮುಂಚೆಯೇ ಇನ್ನು ಎರಡು ಗುಂಡು ಹಾರಿ ಮತ್ತೀರ್ವ ಸ್ಥಳೀಯ ರಾಜಕಾರಿಣಿಗಳನ್ನು ಗಾಯಗೊಳಿಸಿತ್ತು. ಕೊನೆಯಲ್ಲಿ ಹಾರಿದ ಗುಂಡು ದೀಪಕನ ತಲೆಯನ್ನು ಭೇದಿಸಿ ಅವನನ್ನು ನೆಲಕ್ಕೊರಗಿಸಿತ್ತು. ಯಾವ ಕಾರಣಕ್ಕಾಗಿ ದೀಪಕ್ ಅವರ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರಿಗೂ ತಿಳಿದಿರಲಿಲ್ಲ. ಕ್ಷಣಗಳಲ್ಲಿ ಪೊಲೀಸರು ಇಡೀ ಸಭಾಸ್ತಾನವನ್ನು ಖಾಲಿ ಮಾಡಿಸಿ ತಮ್ಮ ತನಿಖೆ ಆರಂಭಿಸಿದ್ದರು. ಆದರೆ ಮಾಧ್ಯಮದವರಿಗೆ ಯಾವದೇ ಸುದ್ದಿಯನ್ನು ಒದಗಿಸಿರಲಿಲ್ಲ. ಕೊಲೆಗೊಂಡ ಸಚಿವರು ವರ್ಷಗಳಿಂದ ಸಾಲು ಸಾಲು ಹಗರಣಗಳಲ್ಲಿ ಸಿಲುಕಿಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ಯಾವ ಅಪರಾಧವೂ ಸಾಬೀತಾಗಿರಲಿಲ್ಲ, ಕೆಲವು ಕೇಸುಗಳು ಇನ್ನೂ ಚಾಲ್ತಿಯಲ್ಲಿದ್ದವು. ವಾರಗಳ ಹಿಂದಷ್ಟೇ ಮತ್ತೊಮ್ಮೆ ಬಹುಕೋಟಿ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ಯುವಕನಿಂದ ಸಚಿವರ ಕೊಲೆಯಾಗಿರಬಹುದೇ ಎಂದು ಕೆಲವರು ಶಂಕಿಸುತ್ತಿದ್ದರು. ಇನ್ನು ಕೆಲವರು ಸಚಿವರ ಉತ್ತಮ ಕಾರ್ಯಗಳನ್ನು ನೋಡಿ ಸಹಿಸಲಾಗದ ವಿರೋಧಿಗಳು ಈ ಯುವಕನನ್ನು ಮುಂದೆ ತಳ್ಳಿ ಕೊಲೆ ನಡಿಸಿದ್ದಾರೆಂದು ಆರೋಪಿಸುತ್ತಿದ್ದರು. ಯಾವುದು ಸತ್ಯವೋ ಯಾವುದು ಸುಳ್ಳೋ ಒಂದೂ ತಿಳಿಯಲಿಲ್ಲ. ಕೆಲ ದಿನಗಳಿಂದ ದೀಪಕ್ ನಮ್ಮಿಂದ ದೂರವಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದ ಎಂದರೆ ನನಗೆ ಇನ್ನೂ ನಂಬಿಕೆ ಬರಲಿಲ್ಲ. ಕಾರಣವೂ ತಿಳಿಯಲಿಲ್ಲ. ಸಚಿವರ ಭ್ರಷ್ಟಾಚಾರಕ್ಕೂ ಈ ಕೊಲೆಗೂ ಏನೂ ಸಂಬಂಧವಿಲ್ಲವೆಂದು ನನಗೆ ಮನವರಿಕೆಯಿತ್ತು. ಕಳೆದ ತಿಂಗಳಷ್ಟೇ ಭ್ರಷ್ಟಾಚಾರದ ವಿರುಧ್ಧ ನಡೆದ ದೊಡ್ಡ ಮೆರವಣಿಗೆಯ ದಿನ ನಾನೂ ದೀಪಕ ಸೇರಿ ಬಾರೊಂದರಲ್ಲಿ ಕುಡಿಯುತ್ತ ಈ ಸಂಘಟನೆಗಳ ಬಗ್ಗೆ ಜೋಕ್ ಮಾಡುತ್ತಿದ್ದೆವು. ಅಂತಹವನು ಅಷ್ಟು ಬೇಗ ಬದಲಾಗುತ್ತಾನೆ ಅಂದರೆ ನಂಬಲು ಅಸಾಧ್ಯ. ಅದಲ್ಲದೆ ಸಚಿವರ ಬಗ್ಗೆ ಅವನಲ್ಲಿ ಬೇರಾವ ದ್ವೇಷ ಇರುವುದು ನನಗೆ ತಿಳಿಯದ ವಿಚಾರ. ಈ ಹಾಳು ರಾಜಕೀಯ ನಮಗೆ ಹಾಸ್ಯದ ವಿಷಯ ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನೂ ಆಗಿರಲಿಲ್ಲ.  ಮಾಡಲು, ಅನುಭವಿಸಲು ನಮಗೆ ಬೇರೆಯ ಹಲವಾರು ವಿಷಯಗಳಿದ್ದವು.


ಎಲ್ಲ ವಾರ್ತಾ ಚಾನೆಲ್ ಗಳಲ್ಲು ಅದೇ ಸುದ್ದಿ, ಯಾರಿಗೂ ಸರಿಯಾದ ವಿವರ ತಿಳಿದಿರಲಿಲ್ಲ. ಒಂದಿಬ್ಬರು ಸ್ನೇಹಿತರಿಗೆ ಕರೆ ಮಾಡಿದೆ, ಎಲ್ಲರೂ ನನ್ನನ್ನೇ ಕೇಳುವವರು. ಊಟ ಮಾಡುವ ಮನಸ್ಸಾಗಲಿಲ್ಲ. ಏನಾದರೂ ಹೊಸ ಸುದ್ದಿ ಬರಬಹುದೆಂದು ಟೀವಿಗೆ ಆತು ಕುಳಿತ್ತಿದ್ದೆ. ಇದ್ದಕ್ಕಿದ್ದಂತೆಯೇ ಸುದ್ದಿವಾಚಕರಲ್ಲಿ ಬದಲಾವಣೆಯ ಸಂಚಯ, ಮುಖ ನೋಡಿಯೇ ಮಹತ್ವದ ಸುದ್ದಿ ಎಂದು ಹೇಳಬಹುದಿತ್ತು. ಕಾತರದಿಂದ ನೋಡುತ್ತಾ ಹೋದೆ. 'ಇದೀಗ ಬಂದ ಸುದ್ದಿ. ಸಚಿವರನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ ದೀಪಕ್ ನಮ್ಮ ಚಾನೆಲ್ಲಿಗೆ ಆತ್ಮಹತ್ಯೆಯ ಪತ್ರವೊಂದನ್ನು ಕಳಿಸಿರುತ್ತಾರೆ, ಈ ಪತ್ರವನ್ನು ಎಲ್ಲರ ಮುಂದೆ ಇಡುವುದು ಅವನ ಕೊನೆಯ ಆಶೆ ಕೂಡ ಆಗಿತ್ತು. ಹೀಗಿದೆ  ಆ ಪತ್ರದ ಒಕ್ಕಣೆ'. ಪತ್ರ ಓದಲು ಪ್ರಾರಂಭಿಸಿದೊಡನೆ ಮೂಲೆಯಲ್ಲಿ ದೀಪಕನ ಭಾವಚಿತ್ರವೊಂದು ಮೂಡಿತು.

'ಎಲ್ಲರಿಗೂ ನನ್ನ ಕೊನೆಯ ನಮಸ್ಕಾರಗಳು. ನನ್ನ ಮನಸ್ಸಲ್ಲಿ ನಡೆಯುತ್ತಿರುವ ದ್ವಂದ್ವಗಳನ್ನು ನಿಮ್ಮಲ್ಲಿ ಹೇಗೆ ತೆರೆದಿಡುವುದು ಎಂಬುದು ಸರಿಯಾಗಿ ತೋಚುತ್ತಿಲ್ಲ. ಸಾವಿನ ಬರದ ನಿರೀಕ್ಷೆಯಲ್ಲಿ ಮನಸ್ಸು ಕ್ಷಣ ಕ್ಷಣದಲ್ಲೂ ತಲ್ಲಣಗೊಳ್ಳುತ್ತಿದೆ, ಭಂಡ ಬದುಕಿನ ಬಳ್ಳಿಯನ್ನು ಹಿಡಿಯಲು ಮತ್ತೊಮ್ಮೆ ಮನಸ್ಸು ತವಕಿಸುತ್ತಿದೆ, ಆದರೂ ಹೃದಯ ಬಡಿತದ 
ಕೊನೆ ಕ್ಷಣಗಳ ಗಣನೆ ಆರಂಭಿಸಿದೆ. ಸಾಯುವ ಇಚ್ಛೆ ನನದಲ್ಲ, ಸಾಯುವ ವಯಸ್ಸೂ ನನ್ನದಲ್ಲ, ಸಾಯಲು ನನ್ನದಾದ ಯಾವುದೇ ಕಾರಣಗಳೂ ಇಲ್ಲ, ಆದರೂ ನಾನು ಸಾಯಬೇಕಿದೆ, ನಾನು ನಂಬಿಕೊಂಡ ಸಿದ್ಧಾಂತಗಳಿಗಾಗಿ. ನನ್ನ ಸಾವಿನಿಂದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣಬಹುದು ಎಂಬ ದೂರದ ಆಸೆಗಾಗಿ. ನನ್ನ ಸಾವಿನ ನಿಜವಾದ ಕಾರಣ ಈ ಪತ್ರದಿಂದ ನಿಮಗೆ ತಿಳಿಯುವುದಾದರೆ, ಅದುವೇ ಸಾಕ್ಷಿ ನನ್ನ ಅಸಹಾಯಕ ನಡೆಗೆ. ಸಾಯುವಾಗ ಇಟ್ಟ ಇನ್ನೊಂದು ಪತ್ರ ನಿಮ್ಮನ್ನು ತಲುಪುವ ಭರವಸೆ ಇಲ್ಲ, ನಮ್ಮ ರಕ್ಷಕರು ಅಷ್ಟು ನಿಷ್ಟರಾಗಿದ್ದರೆ ನಾನೀ ಕಾರ್ಯಕ್ಕೆ ತೊಡಗುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗಾಗಿ ಮಾಧ್ಯಮಗಳಿಗೆ ಈ ಪತ್ರವನ್ನು ಕಳಿಸುತ್ತಿದ್ದೇನೆ, ನನ್ನ ಬಲಿದಾನ ಕೆಲವರಿಗಾದರೂ ಅರ್ಥವಾಗುತ್ತದೆ ಎಂಬ ಕಾರಣದಿಂದ.'

'ಚಿಕ್ಕಂದಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನೆಲ್ಲ ಓದುವಾಗ ರೋಮಾಂಚನವಾಗುತ್ತಿತ್ತು. ಅವರ ಧೈರ್ಯ, ನಿಸ್ವಾರ್ಥ ಸೇವೆಗಳನ್ನು ನೆನೆಸಿಕೊಂಡು ಮನಸ್ಸು ತುಂಬಿ ಬರುತ್ತಿತ್ತು. ಅವರ ಒಂದೊಂದು ವೀರ ನಡೆಯನ್ನು ನೆನೆಸಿ ಕೊಂಡಾಗಲೆಲ್ಲ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು. ನಾನು ಅವರ ಹಾಗೆ ಆಗಬೇಕೆಂಬ ಮಹದಾಶೆ ಮೂಡಿತ್ತು. ಬೆಳೆಯುತ್ತ ಹೋದಂತೆಲ್ಲ ನಿಧಾನವಾಗಿ ವಾಸ್ತವದ ಅರ್ಥವಾಗತೊಡಗಿತು. ಆ ಹೋರಾಟಗಾರರ ಬಲಿದಾನಕ್ಕೆ ಇಂದು ಯಾವ ಅರ್ಥವೂ ಉಳಿದಿರಲಿಲ್ಲ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಅದು ಬಲಿದಾನವೆನಿಸುತ್ತಿರಲಿಲ್ಲ, ಕೊಲೆಯಂತೆನಿಸುತ್ತಿತ್ತು. ನಮ್ಮನ್ನಾಳುವವರು ಮತ್ತೆ ಮತ್ತೆ ಅವರ ಕೊಲೆ ಮಾಡುತ್ತಿದ್ದರೆ, ನಾವೆಲ್ಲಾ ಮೌನವಾಗಿ ಕುಳಿತು ಅದನ್ನು ಸಮ್ಮತ್ತಿಸುತ್ತಿದ್ದೇವೆ ಅನಿಸುತ್ತಿತ್ತು. ಇಲ್ಲದಿದ್ದರೆ ಮತ್ತೆ ಮತ್ತೆ ಯಾಕೆ ನಾವು ಅವರನ್ನೇ ಆರಿಸುತ್ತೇವೆ, ಅವರಿರುವುದು ಲೂಟಿಗಾಗಿ ಮಾತ್ರ ಎಂದು ತಿಳಿದರೂ ಕೂಡ. ಒಮ್ಮೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮೇಲೆ ಅದನ್ನು ವೈರಿಗಳ ಎದೆಯಾಳಕ್ಕಿಳಿಸಲು ನೂರು ವರ್ಷಗಳು ಹಿಡಿಯಿತು. ಆದರೆ ಅಷ್ಟು ಕಷ್ಟ ಪಟ್ಟು ಗಳಿಸಿದ್ದನ್ನು ಐವತ್ತು ವರ್ಷಗಳೊಳಗೆ ಅಡವಿಟ್ಟು ಪೈಶಾಚಿಕ ನಗೆ ಬೀರುತ್ತಿದ್ದೇವೆ. ಯಾರು ಕೂಡ ಯಾಕೆ ಧೈರ್ಯ ಮಾಡುತ್ತಿಲ್ಲ ಈ ಅತ್ಯಾಚಾರವನ್ನು ಎದುರಿಸಲಿಕ್ಕೆ. ಊಟಕ್ಕಿಲ್ಲದವರಿಗೆ ಊಟದ್ದೆ ಚಿಂತೆ, ಇದ್ದವರಿಗೆ ಇರುವುದೂ ತಪ್ಪಿ ಹೋಗುವುದೋ ಎಂಬ ಹೆದರಿಕೆ. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವ ಧೈರ್ಯ ಯಾರಿಗೂ ಇಲ್ಲ'

'ಕಳೆದ ವಾರದ ನ್ಯಾಯಾಲಯದ ತೀರ್ಪಿನಿಂದ ನನ್ನಲ್ಲಿದ್ದ ತಾಳ್ಮೆ ಎಲ್ಲ ಮುಗಿದು ಹೋಗಿದೆ. ಈ ದೇಶವನ್ನು ಹಾಡು ಹಗಲಲ್ಲೇ ಕೊಳ್ಳೆ ಹೊಡೆಯುತ್ತಾರೆ, ಕೊಳ್ಳೆ ಹೊಡೆದ ಹಣದಲ್ಲಿ ಒಂದು ಪಾಲನ್ನು ಉಳಿದವರಿಗೆ ಬಿಸಾಕಿ ಕಾನೂನನ್ನು ಕಸದ ಬುಟ್ಟಿಯಲ್ಲಿ ತುಂಬುತ್ತಾರೆ. ದಿನ ಹೋದಂತೆ ಈ ಹಾಳು ರಾಜಕೀಯದಲ್ಲಿ ಈ ವೆಂಕಟಯ್ಯನಂತವರೇ ತುಂಬುತ್ತಿದ್ದಾರೆ. ಪ್ರತಿ ದಿನವೂ ಪತ್ರಿಕೆಯಲ್ಲಿ ಓದುತ್ತೇನೆ, ಇವತ್ತು ಹತ್ತು ಆತ್ಮಹತ್ಯೆ, ಐದು ಕೊಲೆ, ಎಂಟು ಅಪಘಾತ ಎಂಬುದಾಗಿ. ಹೀಗೆ ಸಾಯುವವರು ಯಾಕಾದರೂ ಒಂದಿಬ್ಬರು ಇಂತಹವರನ್ನು ಕೊಂದು ಸಾಯುವುದಿಲ್ಲ ಎಂದು ಪ್ರತಿ ದಿನ ಚಿಂತಿಸಿ ಚಿಂತಿಸಿ ಸಾಕಾಗಿದೆ.'

'ನನಗೆ ಸಚಿವ ವೆಂಕಟಯ್ಯನ ಮೇಲಾಗಲಿ, ಉಳಿದವರ ಮೇಲಾಗಲಿ ಯಾವುದೇ ವ್ಯಕ್ತಿಗತ ದ್ವೇಷವಿಲ್ಲ. ಆದರೆ ಅಷ್ಟು ದೊಡ್ಡ ಹಗರಣದ ನಂತರವೂ ರಾಜಾರೋಷವಾಗಿ ನಾಯಕರ ಹಾಗೆ ತಿರುಗುವುದು ನನ್ನಿಂದ ಸಹಿಸಲಾಗುತ್ತಿಲ್ಲ. ನ್ಯಾಯಾಲಯಕ್ಕೆ ಅವರ ತಪ್ಪಿನ ಸಾಕ್ಷಿ ಸಿಗದಿರಬಹುದು. ಆದರೆ ನನಗೆ ಯಾವುದೇ ಸಾಕ್ಷಿಯ ಅಗತ್ಯವಿಲ್ಲ. ಅವರ ಸಾವು ಸಮಸ್ಯೆಯ ಸಂಪೂರ್ಣ ಪರಿಹಾರವಲ್ಲ, ಆದರೆ ಅದರಿಂದ ಉಳಿದವರಲ್ಲಿ ಸ್ವಲ್ಪವಾದರೂ ಭಯ ಮೂಡುತ್ತದೆ. ಆ ಭಯವೇ ಮುಂದೊಮ್ಮೆ ಸಮಸ್ಯೆಯ ಪರಿಹಾರವಾಗಬುದೆಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ. ನನ್ನ ಕೆಲಸ ಒಳ್ಳೆಯ ಮಾರ್ಗದಲ್ಲವೆಂದು ನನಗೂ ತಿಳಿದಿದೆ. ಆದರೆ ಸದ್ಯಕ್ಕೆ ಈ ಮಾರ್ಗ ಬಿಟ್ಟು ಬೇರಾವುದು ನನಗೆ ತೋಚುತ್ತಿಲ್ಲ. ಸ್ವಾತಂತ್ಯ ಬರಿ ಅಹಿಂಸಾ ಮಾರ್ಗದಿಂದ ದೊರೆತಿಲ್ಲ, ಭಗತ್ ಸಿಂಗ್ ರಂತವರ ಕ್ರಾಂತಿ ಕೂಡ ಅದಕ್ಕೆ ಅಷ್ಟೇ ಸಹಕರಿಸಿದೆ. ನನ್ನ ಈ ಮಾರ್ಗಕ್ಕೆ ನನಗ್ಯಾರ ಸಮರ್ಥನೆಯೂ ಬೇಕಿಲ್ಲ. ನನ್ನ ತಪ್ಪಿಗೆ ನನ್ನ ಬಲಿದಾನವೇ ಪ್ರಾಯಶ್ಚಿತ್ತ. ಅದಕ್ಕೂ ನಾನು ಸಿದ್ದನಾಗಿಯೇ ಇದ್ದೇನೆ. 


ಆರಂಭದಲ್ಲಿ ತುಂಬಾ ಭಯವೆನ್ನಿಸಿತು, ಈ ಮೊದಲು ನಡೆಯದ ಹಾದಿ. ಖಾಸಗಿ ಬ್ಯಾಂಕಿನಲ್ಲಿ ಸಿಕ್ಕಿದಷ್ಟು ಸಾಲ ತೆಗೆದೆ, ತೀರಿಸುವ ಪ್ರಮೇಯವೇನೂ ಇರಲಿಲ್ಲ. ಈ ಮೊದಲು ಹೆದರುತ್ತಿದ್ದ, ಅಸಹ್ಯ ಪಟ್ಟುಕೊಳ್ಳುತ್ತಿದ್ದ ಸ್ಥಳಗಳನ್ನು, ಜನರನ್ನು ನೋಡಿದೆ. ವೆಂಕಟಯ್ಯನವರ ಚೇಲಾಗಳಲ್ಲೇ ಗೆಳೆತನ ಸಾಧಿಸಿದೆ. ಹಣವೊಂದಿದ್ದರೆ ಎಲ್ಲವೂ ಸಾಧ್ಯ. ವಿಪರ್ಯಾಸವೆಂಬಂತೆ ನನ್ನ ಕಾರ್ಯಸಾಧನೆಗೆ ಬೇಕಿದ್ದ ಎಲ್ಲವನ್ನೂ ಅವರಿಂದಲೇ ಸಂಪಾದಿಸಿದೆ. ಕೆಲ ದಿನಗಳಲ್ಲಿಯೇ ನನ್ನ ಗುರಿ ನನಗೆ ಸ್ಪಷ್ಟವಾಗಿ ಕಾಣತೊಡಗಿತು. ಇನ್ನೆರಡು ದಿನಗಳಲ್ಲಿ ನಗರದ ಕಾಲೇಜಿನಲ್ಲಿ 'ಭಾರತದ ಭವಿಷ್ಯ:ಯುವಜನರ ಪಾತ್ರ' ಸಮ್ಮೇಳನದ ಉದ್ಘಾಟನೆಗೆ ಬರುವವರಿದ್ದಾರೆ. ಅಂತಹ ಭ್ರಷ್ಟ ಮನುಷ್ಯನನ್ನು ಇಲ್ಲವಾಗಿಸಲು ಅದಕ್ಕಿಂತ ಒಳ್ಳೆಯ ವೇದಿಕೆ ಸಿಗುವುದು ಅಸಾಧ್ಯ. ಹಾಗಾಗಿ ಮನಸ್ಸನ್ನು ಕಲ್ಲಾಗಿಸಿ ನಿರ್ಧಾರ ತೆಗೆದುಕೊಂಡಾಗಿದೆ, ಎಲ್ಲ ಯೋಜನೆಗಳು ಪೂರ್ಣವಾಗಿದೆ.  

ಸಾವಿನ ಭಯ ಏನೆಂಬುದು ಸಾವಿಗೆ ಮುಖ ಮಾಡಿ ನಿಂತವನಿಗೆ ಮಾತ್ರ ತಿಳಿಯಲು ಸಾಧ್ಯ, ಉಳಿದವರ ಕಲ್ಪನೆಗೂ ಅದು ಸಿಗಲಾರದಂತಹುದು. ನನ್ನ ಸಾವು ಅನಿವಾರ್ಯವಲ್ಲವೆಂಬ ಮನಸ್ಸಿನ ಕ್ಷೀಣ ಧ್ವನಿ ಅದರ ಭಯವನ್ನು ಇನ್ನು ಹೆಚ್ಚಿಸಿದೆ. ಈ ವ್ಯವಸ್ಥೆಯ ಮೇಲಿನ ರೋಷ ಎಷ್ಟೇ ತೀವ್ರತರವಾಗಿದ್ದರೂ ಕೂಡ ಸಾವಿನ ಭಯವನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಅದಕ್ಕಿಲ್ಲ. ಆ ಅರಿವು ದೇಶಕ್ಕಾಗಿ ಜೀವವನ್ನೇ ತ್ಯಾಗ ಮಾಡಿದವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ. ಯಾವುದನ್ನಾದರೂ ಅನಿಭವಿಸಿದಾಗಲೇ ಅದರ ನಿಜವಾದ ಮಹತ್ವ ಅರಿವಾಗುವುದು. ಎರಡು ದಿನಗಳ ಅವಧಿಯಲ್ಲಿ ಸಾವಿನ ಭಯ ಮನಸ್ಸನ್ನು ವಿಚಲಿತಗೊಳ್ಳಿಸದಿರಲಿ ಎಂದು ಈ ಪತ್ರವನ್ನು ಈಗಲೇ ಮಾಧ್ಯಮಗಳಿಗೆ ಕಳಿಸುತ್ತಿದ್ದೇನೆ.  ಇದೊಮ್ಮೆ ಹೊರ ಹೋದ ಮೇಲೆ ಹೇಗೂ ನನಗೆ ಸಾವು ಕಟ್ಟಿಟ್ಟ ಬುತ್ತಿ. ಸಾವು ಅನಿವಾರ್ಯವೆಂಬ ಭಾವನೆ ಮನಸ್ಸಿಗೆ ಅರ್ಥವಾಗದ ಶಾಂತಿಯನ್ನು ಕೊಡುತ್ತಿದೆ. ನನ್ನ ಬದುಕು ಅರ್ಥಪೂರ್ಣವಾಗುತ್ತಿದೆ ಎಂಬ ಕಲ್ಪನೆ ಮನಸ್ಸಿಗೆ ಸಾರ್ಥಕತೆಯ ತೃಪ್ತಿಯನ್ನೂ ತರುತ್ತಿದೆ. 

ನಾನು ಮಾಡುತ್ತಿರುವುದೇ ಸರಿ, ಎಲ್ಲರೂ ನನ್ನ ಮಾರ್ಗವನ್ನೇ ಅನುಸರಿಸಲಿ ಎಂಬ ಬಯಕೆ ನನ್ನದಲ್ಲ. ನನ್ನ ಮಾರ್ಗ ಕೆಲವರಿಗೆ ತಪ್ಪೆನಿಸಬಹುದು. ಕೇವಲ ಭ್ರಷ್ಟಾಚಾರ ಮಾಡಿದವನಿಗೆ ಸಾವಿನ ಶಿಕ್ಷೆ ಹೆಚ್ಚು ಎಂದು ವಾದಿಸುವವರಿರಬಹುದು. ಆದರೆ ಆ ಭ್ರಷ್ಟಾಚಾರ ಬೇರೆಯವರ ಸಾವಿಗೆ ಹೇಗೆ ಕಾರಣವಾಗುತ್ತದೆ ಎಂದು ತಿಳಿದಿರುವವರೂ ನನ್ನಂತೆಯೇ ತುಂಬಾ ಜನರಿದ್ದಾರೆ. ನನ್ನ ಅಸಹಾಯಕ ಕೃತ್ಯ ಅವರಿಗಾದರೂ ಅರ್ಥವಾದರೆ ಸಾಕು. ವೆಂಕಟಯ್ಯನ ಸಾವು ಸಮಸ್ಯೆಯ ಪರಿಹಾರವಲ್ಲವೆಂದು ನನಗೂ ತಿಳಿದಿದೆ. ಆದರದು ಪರಿಹಾರದ ನಾಂದಿಯಾದರೂ ಸಹ ನನ್ನ ತ್ಯಾಗಕ್ಕೆ ಒಂದು ಅರ್ಥ ಸಿಗುತ್ತದೆ.'

ದೀಪಕನ ಸುದೀರ್ಘ ಪತ್ರ ಮುಗಿದಿತ್ತು. ನನಗೆ ಏನನ್ನೂ ನಂಬಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟೊಂದು ಬದಲಾವಣೆ ದೀಪಕನಲ್ಲಿ ನಿರೀಕ್ಷಿರಲಿಲ್ಲ. ಏನೂ ಮಾಡಲು ತೋಚದೆ ಟೀವಿಯ ಎದುರಲ್ಲಿಯೇ ಕುಳಿತೆ. ಎಲ್ಲಾ ಚಾನಲ್ಗಳಲ್ಲೂ ದೀಪಕನದೆ ಸುದ್ದಿ. ಈ ಘಟನೆಯನ್ನು ಆದರಿಸಿ ನಾನಾ ತರದ ಕಾರ್ಯ ಕ್ರಮ ಆಯೋಜಿಸಿದ್ದರು. ಘಟನೆಯ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು. ಎಲ್ಲೋ ಕೆಲವು ಬೆರಳೆಣಿಕೆಯ ಜನರನ್ನು ಬಿಟ್ಟರೆ ಬೇರೆ ಎಲ್ಲರು ದೀಪಕನ ಕೃತ್ಯವನ್ನು ಮನಸ್ಸಾರೆ ಅಭಿನಂದಿಸುವವರೇ. ಕೆಲ ಕ್ಷಣಗಳಲ್ಲಿಯೇ ದೀಪಕ್ ಎಲ್ಲರ ಮನಸ್ಸಲ್ಲಿ ಬಹು ದೊಡ್ಡ ನಾಯಕನಾಗಿ ಮೂಡಿದ್ದ. ಎಲ್ಲರೂ ದೀಪಕನ ಧೈರ್ಯವನ್ನು ಮೆಚ್ಚಿ ಅವನ ಕಾರ್ಯವನ್ನು ಸಮರ್ಥಿಸುವವರೇ. ಸ್ವತಹ ದೀಪಕ್ ಕೂಡ ಅವನ ಕಾರ್ಯಕ್ಕೆ ಇಷ್ಟು ಜನ ಬೆಂಬಲ ನಿರೀಕ್ಷಿಸಿರಲಿಕ್ಕಿಲ್ಲ. ಇನ್ನು ಕೆಲ ಸಮಯದಲ್ಲಿ ಮಾಧ್ಯಮದವರು ನನ್ನನ್ನರಸಿ ಬರಬಹುದೇನೋ ಎಂದು ತಿಳಿದು ಹೊರಗಡೆ ಹೊರಟೆ. ನಾನಿನ್ನು ನಡೆದ ಘಟನೆಯಿಂದ ಹೊರ ಬಂದಿರಲಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದಿರುವಾಗ ಉಳಿದವರ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದೆಂದು ತಿಳಿಯದಾಗಿದ್ದೆ.


ಮಾಧ್ಯಮಗಳ ಕೈಯಿಂದ ತಪ್ಪಿಸಿಕೊಳ್ಳುವೆನೆಂಬುದು ಕೇವಲ ನನ್ನ ಕನಸಾಗಿತ್ತು. ಮನೆಯಿಂದ ಹೊರಟು ಗೆಳೆಯನ ಮನೆ ಸೇರಿದ ಕೆಲ ಕ್ಷಣಗಳಲ್ಲಿಯೇ ಮಾಧ್ಯಮಗಳ ಬಂಧಿಯಾಗಿದ್ದೆ. ಒಳ್ಳೆಯತನದ ಮುಖವಾಡ ಧರಿಸಿ ದೀಪಕನ ಪತ್ರಕ್ಕೆ ಅನುಗುಣವಾಗಿ ಕಥೆ ಹೆಣೆದು ಅವರೆಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ. ಕಳೆದ ಕೆಲವು ದಿನಗಳಿಂದ ದೀಪಕ ನಮ್ಮಿಂದ ದೂರವಾಗಿದ್ದುದು ಒಳ್ಳೆಯದೇ ಆಗಿತ್ತು. ಇಲ್ಲದಿದ್ದರೆ ಪೋಲೀಸು, ಅದು ಇದು ಅಂದು ಬೀದಿ ನಾಯಿಯ ತರ ಅಲೆಯಬೇಕಿತ್ತು. ಮಾಧ್ಯಮಗಳ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ದೀಪಕನನ್ನು ಬೆಂಬಲಿಸಿದ್ದರಿಂದ ಹಾಗು ದೀಪಕನೆ ಆತ್ಮಹತ್ಯೆಯ ಪತ್ರದಲ್ಲಿ ಎಲ್ಲವನ್ನು ಸಾಕ್ಷಿ ಸಮೇತ ಬರೆದಿರುವುದರಿಂದ ಅವನ ಅಂತ್ಯ ಕ್ರಿಯೆಗೆ ಹೆಚ್ಚಿನ ತಡೆಯಾಗಲಿಲ್ಲ. ಸಾಕಷ್ಟು ಜನರ ಸಮ್ಮುಖದಲ್ಲಿ ನಡೆದ ಅಂತ್ಯ ಕ್ರಿಯೆ ಮುಗಿಸಿ ಮನೆಗೆ ಬಂದು ಬಾಗಿಲು ತೆರೆದರೆ, ಬಾಗಿಲ ಹತ್ತಿರವೇ ಒಂದು ಪತ್ರ ಕಾಣಿಸಿತು. ನನ್ನ ಹೆಸರಿಗೆ ಬರೆದ ಪತ್ರ, ಅಕ್ಷರ ನೋಡಿದರೆ ದೀಪಕನನೆನ್ನುವುದರಲ್ಲಿ ಸಂದೇಹವಿಲ್ಲ. ಮಾಧ್ಯಮಕ್ಕೆ ಕಳಿಸಿದ ಪತ್ರವನ್ನೇ ನನಗೆ ಕಳಿಸಿರಬಹುದೇ, ಗೊತ್ತಾಗಲಿಲ್ಲ. ಕೂಡಲೇ ಬಾಗಿಲು ಭದ್ರ ಪಡಿಸಿ ಪತ್ರ ಓದಲಾರಂಭಿಸಿದೆ.

5 comments:

Sriram said...

Cant wait for the eradane pathra!

Viji said...

nice one. Is it a fiction?

Kishor said...

Too good Saty, you should publish a short stories book.

Sathisha said...

@Ram, Thanks. Inland letter sikkida koodle next letter ready :)

@Vijay,
Thanks Vijay. Fiction enoo illa, normal one.

@Kishor,
Thanks Kishor. No plans yet, might think if I continue to get the inspiration, time and subject!

Sunil said...

very nice..waiting for that letter now :)