Wednesday, July 11, 2012

ಎರಡು ಪತ್ರಗಳು (ಕೊನೆಯ ಪತ್ರ)


'ಪ್ರಿಯ ಸೂರಜ್, ನಿನಗೆ ನನ್ನ ನಿರ್ಧಾರದ ಮೇಲೆ ಆಶ್ಚರ್ಯವಾಗಿದೆಯೋ, ದುಃಖವಾಗಿದೆಯೋ, ಹೆಮ್ಮೆಯೆನಿಸಿದೆಯೋ ತಿಳಿಯುವ ಕುತೂಹಲ. ಆದರೆ ಏನು ಮಾಡಲಿ, ತಿಳಿಯದ ಲೋಕದ ಪ್ರಯಾಣ ಆರಂಭಿಸಿದ್ದಾಗಿದೆ. ಮೊದಲೇ ನಿನ್ನಲ್ಲಿ ಹೇಳಿದ್ದಿದ್ದರೆ ಈ ಮಾರ್ಗ ಹಿಡಿಯಲು ಬಿಡುವವನಲ್ಲ ಎಂದು ಚೆನ್ನಾಗಿ ಗೊತ್ತಿದೆ. ನಿನ್ನನ್ನೆಂದೂ ನಾನು ವಾದದಲ್ಲಿ ಗೆದ್ದವನಲ್ಲ. ಆದರೆ ನಿನ್ನ ನೆರಳಲ್ಲಿ ನನ್ನತನ ಕಳೆದುಕೊಂಡವನಿಗೆ ನೀನು ಯಾವ ರೀತಿ ಆಲೋಚಿಸುವೆ ಎಂಬ ಅರಿವು ಕೊಂಚವಾದರೂ ಬಂದಿದೆ. ನನ್ನ ಪರಿಸ್ಥಿತಿಯಲ್ಲಿ ನೀನು ಕೂಡ ಇಂತಹುದೇ ಕೆಲಸಕ್ಕೆ ಕೈ ಹಾಕುತ್ತಿ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ಅದಕ್ಕೆ ನಿನ್ನಲ್ಲಿ ಎಲ್ಲವನ್ನು ಮುಚ್ಚಿಟ್ಟು ಮೊದಲ ಬಾರಿ ನಾನು ಏಕಾಂಗಿಯಾಗಿ ಮುನ್ನೆಡೆಯುತ್ತಿದ್ದೇನೆ. ಯಾವತ್ತು ನೆರಳಿನಂತೆ ನಿನ್ನ ಹಿಂದಿದ್ದವನಿಗೆ ಮೊದ ಮೊದಲು ಕಷ್ಟವೆನಿಸಿತು. ದಾರಿ ಕ್ರಮಿಸಿದಂತೆ ಎಲ್ಲ್ಲವೂ ತಾನೇ ತಾನಾಗಿ ತೆರೆದು ಕೊಂಡಿತು. ನನ್ನ ಸಾವು ಯಾರನ್ನೆಲ್ಲಾ ದಾರಿಗೆ ತರುತ್ತದೋ ತಿಳಿದಿಲ್ಲ, ಆದರೆ ನಿನ್ನನಂತೂ ಸರಿ ದಾರಿಗೆ ತರುತ್ತೆಂದು ನಂಬಿರುತ್ತೇನೆ. ಇಲ್ಲದಿದ್ದರೆ ನಿನ್ನನ್ನು ಕೇಳದೆ ನಾನು ಬಹು ದೊಡ್ಡ ತಪ್ಪು ಮಾಡಿದ್ದೆನೆನ್ದುಕೊಳ್ಳುತ್ತೇನೆ. 

ನಿನಗಿನ್ನೂ ನೆನಪಿರಬಹುದು, ನಮ್ಮ ಸ್ನೇಹದ ಆರಂಭದ ದಿನಗಳು. ಹೊಸದಾಗಿ ಕೆಲಸಕ್ಕೆ ಸೇರಿದ ನಾನು ಮನೆಯವರ ಬಂಧನದಿಂದ ಆಗಿನ್ನೂ ಕಳಚಿಕೊಂಡಿರಲಿಲ್ಲ. ನನ್ನ ಕಾಲ ಮೇಲೆ ನಾನು ನಿಂತಿದ್ದರೂ ಕೂಡ ಮನೆಯವರ ಮೇಲಿನ ಭಯ ಒಂದಿನಿತೂ ಕಡಿಮೆಯಾಗಿರಲಿಲ್ಲ. ಬದುಕಿನಲ್ಲಿ ಸರಿ ಯಾವುದು ತಪ್ಪು ಸರಿ ಯಾವುದೆಂದು ಅವರು ಹೇಳಿದ ಹಾದಿಯಲ್ಲೇ ನಡೆಯುತ್ತಿದ್ದೆ. ಅದರಿಂದಾಗಿಯೇ ನಿನ್ನಿಂದ ಹೊಸ ಜಗತ್ತಿಗೆ ತೆರೆದು ಕೊಳ್ಳುವ ಮುನ್ನ ಇನ್ನಿಲ್ಲದಂತೆ ಪ್ರತಿ ಬಾರಿ ಕೂಡ ನಿನ್ನನ್ನು ತಡೆ ಹಿಡಿಯಲು ಪ್ರಯತ್ನಿಸಿದ್ದೆ. ಜೊತೆಗೆ ನಿನ್ನನ್ನು ಬದಲಾಯಿಸುವ ಪ್ರಯತ್ನಕ್ಕೂ ಕೈ ಹಾಕಿದ್ದೆ. ಆದರೆ ನಿನ್ನಲ್ಲಿ ವಾದ ಮಾಡಿ ಗೆಲ್ಲುವ ಶಕ್ತಿ ನನ್ನಲ್ಲಿರಲಿಲ್ಲ. ವಾದ ಮಾಡಲು ನನ್ನದೆನ್ನುವ ಆದರ್ಶಗ ಳಾಗಲಿ, ನಂಬಿಕೆಗಳಾಗಲಿ ಅವಾಗಿರಲಿಲ್ಲ. ಮನೆಯವರು, ಗುರು ಹಿರಿಯರು ಹೇಳಿದ್ದೆಲ್ಲ ನಮ್ಮ ಒಳ್ಳೆಯದಕ್ಕೆಂದು ತಿಳಿದಿದ್ದೆ. ಯಾವತ್ತೂ ಪರಾಮರ್ಶಿಸಿ ನೋಡಿರಲು ಹೋಗಿರಲಿಲ್ಲ್ಲ. ಬೆಂಗಳೂರಿನ ಟ್ರಾಫಿಕ್ ನ ಹೊಗೆಗಿಂತ ಈ ಸಿಗರೇಟಿನ ಹೊಗೆಯೇ ವಾಸಿಯೆಂದು ನೀನು ಅದನ್ನು ಸಮರ್ಥಿಸಿಕೊಂಡಾಗ ಯಾವ ರೀತಿ ಅದನ್ನು ವಿರೋಧಿಸಬೇಕೆಂದು ನನಗೆ ತಿಳಿದಿರಲಿಲ್ಲ. ನನ್ನೆಲ್ಲ ಉತ್ತರಗಳಿಗೂ ನಿನ್ನಲ್ಲಿ ಪ್ರತ್ಯುತ್ತರವೊಂದು ತಯಾರಾಗಿರುತ್ತಿತ್ತು. ನನಗಿಂತ ಬುಧ್ಧಿವಂತನಾದ ನಿನಗೆ ಅದೆಲ್ಲ ತಿಳಿಯದ ವಿಚಾರಗಳಾಗಿರಲಿಲ್ಲ. ಕೊನೆಗೆ ಸರಿ ತಪ್ಪುಗಳ ನಡುವಿನ ರೇಖೆ ಶಿಥಿಲವಾಗಿ ನಾನೂ ನಿನ್ನ ಹಾದಿಗೇ ಬಂದಿದ್ದೆ. ನಿನ್ನಷ್ಟೇ ನಾನು ಕೂಡ ಸಿಗರೇಟಿನ ಹೊಗೆಯನ್ನು ಆಸ್ವ್ವಾದಿಸಿದ್ದೆ. ಪ್ರತಿ ವಾರಾಂತ್ಯದಲ್ಲಿ ಕೂಡ ನಿನಗೆ ಸರಿ ಸಮನಾಗಿ ಕುಡಿಯುವುದರಲ್ಲಿ ತೊಡಗಿದ್ದೆ. ಆದರದು ಅಲ್ಲಿಗೆ ನಿಲ್ಲಲಿಲ್ಲ. ನಿನಗೆ ಪ್ರಪಂಚದ ಪ್ರತಿಯೊಂದು ಸುಖವನ್ನೂ ಅನುಭವಿಸಿ ನೋಡಬೇಕಿತ್ತು. ನಿನ್ನೊಡನೆ ಸೇರಿ ನಾನೂ ಕೂಡ ಮನಸ್ಸಿನ್ನ ವಾಂಚೆಗಳ ಬೆನ್ನತ್ತುವುದನ್ನು ಕಲಿತೆ. ನಾನು ಮಾಡುತ್ತಿರುವುದು ತಪ್ಪು ಎಂದು ಕೆಲವೊಮ್ಮೆ ಅನಿಸುತ್ತಿದ್ದರೂ ಕೂಡ ಅದರಿಂದ ಸಿಗುವ ಆ ಆನಂದ ನನ್ನ ವಿವೇಚನೆಯನ್ನು ಕಟ್ಟಿ ಹಾಕುತ್ತಿತ್ತು. ಒಮ್ಮೊಮ್ಮೆ ಎಲ್ಲವನ್ನು ಮರೆತು ಮೊದಲಿನಂತಾಗುವ ಎಂದರೂ ನಿನ್ನಲ್ಲಿ ವಾದ ಮಾಡಿ ನಾವು ನಡೆಯುತ್ತಿರುವ  ಹಾದಿ ತಪ್ಪು ಎಂದು ನನ್ನನ್ನು ನಂಬಿಸಲೇ ನನ್ನಲ್ಲಾಗುತ್ತಿರಲಿಲ್ಲ. ಇನ್ನು ಮಾಡಿದ ತಪ್ಪೇ ಅರಿವಾಗದೆ ಸರಿಯಾಗುವ ಮಾತಾದರೂ ಎಲ್ಲಿಂದ. ಈ ಕ್ಷಣದಲ್ಲಿ ಅನಿಸುತ್ತಿದೆ, ಆ ಎಲ್ಲ ಸಂದರ್ಭದಲ್ಲೂ ನಾನು ಸರಿಯಾಗಿದ್ದೆ. ನನ್ನ ವಿಚಾರಗಳಿಗೆ ನನ್ನಲ್ಲಿ ಸಮರ್ಥನೆ ಇಲ್ಲದಿದ್ದರೂ ಕೂಡ ಅವು ನನ್ನ ಒಳಿತಿಗೆ ಆಗಿತ್ತು. ವಾದದಿಂದ ಇನ್ನೊಬ್ಬರ ಮನಸ್ಸಿನ ಸರಿ ತಪ್ಪುಗಳ ಕಲ್ಪನೆಯನ್ನು ಬದಲಾಯಿಸಬಹುದು, ಅಷ್ಟೇ. ಆದರೆ ಅದರಿಂದ ಸರಿ ತಪ್ಪುಗಳನ್ನೇ ಬದಲಾಯಿಸಲಾಗುವುದಿಲ್ಲ. ನಿನ್ನಿಂದ ನಾನು ಸಾಯುವ ಹಾಗಾಯ್ತು ಎಂದು ಆರೋಪ ಮಾಡುತ್ತಿಲ್ಲ. ನೀನು ನನ್ನನ್ನು ಕೆಟ್ಟವನಾಗಿಸಿದಿ ಎಂದೂ ಹೇಳುತ್ತಿಲ್ಲ. ನನ್ನಲ್ಲಿ ಮನೆ ಮಾಡಿದ್ದ ದೌರ್ಬಲ್ಯಗಳನ್ನು ಬಡಿದು ಎಬ್ಬಿಸಿದ್ದರೆ ಅದರಲ್ಲಿ ನಿನ್ನನ್ನು ದೋಷಿಯಾಗಿ ಕಾಣಲು ಸಾಧ್ಯವಿಲ್ಲ. ನೀನಲ್ಲದಿದ್ದರೆ ಇನ್ನೊಬ್ಬನಿಂದ ಅವನ್ನೆಲ್ಲ ಕಲಿಯುತ್ತಿದ್ದೆ.


ವರ್ಷದ ಹಿಂದೆ ನೀನು ನನಗೆ ಡ್ಯಾನ್ಸ್ ಬಾರಿನ ಹುಡುಗಿಯರ ಪರಿಚಯ ಮಾಡಿದ ನಂತರ ನಾನು ನನ್ನತನವನ್ನು ಸಂಪೂರ್ಣ ಕಳೆದುಕೊಂಡಿದ್ದೆ. ರಂಗು ರಂಗಿನ ಬೆಳಕಿನಲ್ಲಿ ಆ ಸುಂದರಿಯರು ಮೈಗೆ ಕಿಚ್ಚು ಹಚ್ಚುವಂತೆ ಮಾದಕವಾಗಿ ಹೆಜ್ಜೆಹಾಕುತ್ತಿರುವಾಗ ನಾನು ಹೊಸದೊಂದು ಲೋಕವನ್ನು ಸೇರುತ್ತಿದ್ದೆ. ಆ ಮಾದಕ ವಾತಾವರಣದ ಬಲೆಯಲ್ಲಿ ಸಿಲುಕಿ ಹಿಂತಿರುಗಿ ಬರದಷ್ಟು ಮುಂದೆ ಹೋಗಿದ್ದೆ. ಬಯಕೆಗಳನ್ನು ಯಾವತ್ತೂ ಬಂಧಿಸಿ ಇಡಬಾರದೆಂಬ ನಿನ್ನ ವಿಚಾರಲಹರಿಯಂತೆ ಹಣದ ಹೊಳೆ ಹರಿಸಿ ನನ್ನ ಕಾಮ ತ್ರ್ರಷೆಯನ್ನು ತೀರಿಸಿಕೊಳ್ಳುತ್ತಿದ್ದೆ. ರಾತ್ರಿಯ  ಜಗಮಗಿಸುವ ಬೆಳಕಿನಲ್ಲಿ ಕುಣಿಯುವ ಸುಂದರಿಯರು ನನ್ನ ತೋಳತೆಕ್ಕೆಯಲ್ಲಿ ಬಂಧಿಯಾಗಿರುವಾಗ ಜಗವನ್ನೇ ಜಯಿಸಿದ ಆನಂದ ದೊರೆಯುತ್ತಿತ್ತು. ಆ ಪ್ರತಿ ಕ್ಷಣದಲ್ಲೂ ನಿನಗೆ ಸಾವಿರ ಸಾವಿರ ಕೃತಜ್ಞತೆ ಹೇಳುತ್ತಿದ್ದೆ. ನೀನಲ್ಲದಿದ್ದರೆ ಆ ಸುಖವನ್ನು ನಾನು ಕನಸಿನಲ್ಲೂ ಕಲ್ಪಿಸಲು ಸಾಧ್ಯವಿರಲಿಲ್ಲ. 


ಮೆಲುವಾಗಿ ಮದ್ಯ ಹೀರಿ, ಉರಿಯುವ ಕಾಮವನ್ನು ಅವರ ಮೃದುವಾದ ದೇಹದಿಂದ ನಂದಿಸಿ ಆನಂದದಿಂದ ತುಟಿಗೆ ಸಿಗರೇಟಿನ ಕೊನೆಯ ದಮ್ಮಿನ ಶಾಖ ತಲುಪುವಾಗ, ಯಾವುದೊ ಕನಸಿನ ಲೋಖದಲ್ಲಿ ತೇಲಿದ ಅನುಭವವಾಗುತ್ತಿತ್ತು. ಪ್ರತಿ ಬಾರಿಯ ಅನುಭವ ಸಹ ಹಿಂದಿನದಕ್ಕಿಂತ ಸಿಹಿಯಾದಂತನಿಸುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಎಷ್ಟು ಬಾರಿ ಸುಖದ ಪರಾಕಾಷ್ಟೆ ತಲುಪಿದೇನೋ, ನೆನಪಿನಲ್ಲಿ ಸಹ ಉಳಿದಿಲ್ಲ. ಆದರದು ಬಹುಕಾಲ ಉಳಿಯಲಿಲ್ಲ. ತಿಂಗಳ ಹಿಂದೆ ಆರೋಗ್ಯ ಸ್ವಲ್ಪ ಏರುಪೇರಾದಾಗ ನಿನಗೆ ತಿಳಿಯದಂತೆ ಗುಪ್ತವಾಗಿ ರಕ್ತ ಪರೀಕ್ಷೆ ಮಾಡಿದಾಗ ತಿಳಿಯಿತು, ಆ ಸುಖದೊಂದಿಗೆ ಬರ ಬಾರದ ಖಾಯಿಲೆಯನ್ನೂ ಹೀರಿದ್ದೆನೆಂದು. ಒಮ್ಮೆ ಆಕಾಶವೇ ಕಳಚಿಬಿದ್ದಂತೆ ಅನ್ನಿಸಿತು. ಏನು ಮಾಡುವುದೆಂದೇ ನನಗೆ ತೋಚಲಿಲ್ಲ. ಪ್ರತಿಬಾರಿ ಸಹ ಎಲ್ಲ ರೀತಿಯಲ್ಲಿ ನೋಡಿಕೊಂಡೆ ಮುಂದಿನ ಹೆಜ್ಜೆ ಇಡುತ್ತಿದ್ದೆ. ಎಲ್ಲಿ ಜಾರಿದೇನೋ ತಿಳಿಯಲಿಲ್ಲ. ಬಿದ್ದ ಮೇಲೆ ಎಲ್ಲಿ ಜಾರಿದನೆಂದು ತಿಳಿಯುವುದರಲ್ಲಿ ಸಹ ಅರ್ಥವಿರಲಿಲ್ಲ, ಏಳಲು ಅವಕಾಶವೇ ಇರದಷ್ಟು ಆಳಕ್ಕೆ ನಾನು ಬಿದ್ದಿದ್ದೆ.


ವಿಷಯ ತಿಳಿದ ಮೇಲೆ ಆರೋಗ್ಯ ಇನ್ನಷ್ಟು ಹದಗೆಡಲು ಶುರುವಾಯಿತು. ನಿಜವಾಗಲೂ ಹೀಗೆ ಆಗುತ್ತಿದೆಯೋ ಅಥವಾ ಮಾನಸಿಕವಾಗಿ ನಾನು ನಿಷಕ್ತನಾಗುತ್ತಿದ್ದೇನೋ ತಿಳಿಯಲಿಲ್ಲ. ಖಾಯಿಲೆಯ ಅರಿವೇ ನನ್ನ ಅರ್ಧ ಪ್ರಾಣವನ್ನು ತಿಂದಿತ್ತು. ಕ್ಷಣಿಕ ಸುಖದ ಬೆನ್ನು ಹತ್ತಿ ಮೇಲೆಳದಷ್ಟು ಆಳಕ್ಕೆ ಬಿದ್ದ ನನ್ನ ಮೇಲೆ ಹೇಸಿಗೆಯಾಗಿ ಪ್ರತಿ ಕ್ಷಣಕ್ಷಣವೂ ಸಾವಿನ ನೋವು ಅನುಭವಿಸುತ್ತಿದ್ದೆ. ನನಗೆ ತಿಳಿದಿತ್ತು, ತುಂಬಾ ದಿನಗಳವರೆಗೆ ಬೇರೆಯವರಿಂದ ಇದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದಾಗಿ. ವಿಷಯ ಬೇರೆಯವರಿಗೆ ತಿಳಿದ ಮೇಲೆ ನಾನು ಬದುಕಿ ಉಳಿಯುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಬಹುಷಃ ನೀವು ಕೂಡ ನನ್ನಲ್ಲಿ ಮೊದಲಿನಷ್ಟೇ ಸ್ನೇಹದಿಂದ ಇರಲು ಸಾಧ್ಯವಿರಲಿಲ್ಲ. ಒಮ್ಮೆಲೇ ಎಲ್ಲವನ್ನೂ ಕಳೆದುಕೊಂಡ ಅನುಭವವಾಯಿತು. ಕಳೆದ ಒಂದು ವರ್ಷದಲ್ಲಿ ನಾನು ಅನುಭವಿಸಿದ ಸುಖ ಈ ನೋವನ್ನು ಒಂದು ಕ್ಷಣ ಕೂಡ ಮರೆ ಮಾಡಲು ಸಾಧ್ಯವಿರಲಿಲ್ಲ. ನನ್ನ ಮೇಲೆ ನನಗೆ ಬೇಸರ ಬಂದಿತು. ಎಲ್ಲಾದರೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಮಾರ್ಗವೆನಿಸಿತು. ಆದರೆ ಆತ್ಮಹತ್ಯೆ ಮಾಡಿಕೊಂಡರೂ ಬೇರೆಯವರಿಗೆ ಇದರ ಬಗ್ಗೆ ತಿಳಿಯದಿರದು ಎಂಬ ನಂಬಿಕೆಯಿರಲಿಲ್ಲ. ಆಶ್ಚರ್ಯವೆನಿಸಿತು, ನಾನು ಸತ್ತಮೇಲಿನ ಚಿಂತೆ ನನಗ್ಯಾಕೆ ಎಂದು. ಆದರೆ ನನ್ನ ಸಾವಿಗಿಂತ ನನ್ನ ಹೆಸರಿನ ಸಾವೇ ಹೆಚ್ಚು ನೋವು ಕೊಡುವುದೆಂದು ಆಗ ಅರಿವಾಯಿತು. ಅದಕ್ಕೆ ನನಗೆ ಆ ಖಾಯಿಲೆ ತಡೆಯಲಾರದ ನೋವು ಕೊಡುತ್ತಿದ್ದುದು.

ಎಷ್ಟೋ ಬಾರಿ ನಿನ್ನಲ್ಲೆಲ್ಲಾ ಹೇಳಿಕೊಳ್ಳೋಣ ಎನಿಸಿತು. ಆದರೆ ಗುಣಪಡಿಸಲಾಗದ ರೋಗಕ್ಕೆ ನೀನು ತಾನೇ ಏನು ಔಷಧ ಕೊಡಬಲ್ಲೆ. ನನಗೆ ನಿನ್ನ ಸಾಂತ್ವನದ ಅಗತ್ಯವಿರಲಿಲ್ಲ. ನಿನ್ನಲ್ಲಿ ಹೇಳಿ ನಿನ್ನ ಕಣ್ಣಲ್ಲಿ ಕೆಳಗಿಳಿಯುವುದು ನನಗೆ ಬೇಕಿರಲಿಲ್ಲ. ಹಾಗಾಗಿ ಕೆಲ ರಾತ್ರಿ ಕುಳಿತು ಮುಂದಿನ ದಾರಿ ಯೋಚಿಸತೊಡಗಿದೆ. ನನ್ನ ಸ್ಥಾನದಲ್ಲಿ ನೀನಿದ್ದರೆ ಏನು ಮಾಡುತ್ತಿದ್ದಿ ಎಂದು ಚಿಂತಿಸತೊಡಗಿದೆ. ಈ ನೋವನ್ನು ಅನುಭವಿಸುತ್ತ ಪ್ರತಿ ಕ್ಷಣ ಸಾಯುವುದು ನನಗೆ ಬೇಕಿರಲಿಲ್ಲ, ಆದರೆ ನನ್ನೊಡನೆ ನನ್ನ ಹೆಸರು ಕೂಡ ಹಾಳಾಗುವುದು ಬೇಕಿರಲಿಲ್ಲ. ಬಹುಕಾಲ ಚಿಂತಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಸಾಯುವ ಮೊದಲಾದರೂ ಒಂದೊಳ್ಳೆ ಕೆಲಸ ಮಾಡಿ ಹೆಸರನ್ನು ಉಳಿಸಿಕೊಳ್ಳೋಣ ಎಂದು. ಸಾವಿಗೆ ಮುಖಮಾಡಿ ನಿಂತ ನನಗೆ ಎಲ್ಲ ತಯಾರಿ ಮುಗಿಸಲು ಏನೂ ಹೆದರಿಕೆಯಾಗಲಿಲ್ಲ. ಮೊದಮೊದಲು ಕಷ್ಟವೆನಿಸಿದರೂ ಹೋಗುತ್ತಾ ಹೋಗುತ್ತಾ ದಾರಿ ತಾನೇ ತಾನಾಗಿ ಬಿಚ್ಚಿಕೊಂಡಿತು. ಎಲ್ಲಾ ತಯಾರಿ ಮುಗಿಸಿ ಈ ಪತ್ರ ಬೆರೆಯಲು ಕುಳಿತ್ತಿದ್ದೇನೆ. ನನ್ನ ಇವತ್ತಿನ ಸ್ಥಿತಿ ನಿನ್ನಲ್ಲಾದರೂ ಅರಿವು ಮೂಡಿಸಬಹುದೆಂಬ ಹಂಬಲದಲ್ಲಿ.


ನೀನು ನನಗಿಂತ ಹೆಚ್ಚು ತಿಳಿದವನು, ನಿನಗೆ ನನ್ನ ಸ್ಥಿತಿ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಸಾವಿನ ಭಯ ಮತ್ತು ನೋವು ಇಷ್ಟು ತೀಕ್ಷ್ಣವಾಗಿರುತ್ತದೆ ಎಂದು ತಿಳಿದಿದ್ದರೆ ನಾನು ತಪ್ಪಿ ಸಹ ಈ ಮಾರ್ಗದಲ್ಲಿ ಹೆಜ್ಜೆ ಇಡುತ್ತಿರಲಿಲ್ಲ. ಮಾಡುವ ತಪ್ಪಿಗೆ ಸಮರ್ಥನೆ ಹುಡುಕುವವರಿಗೆ ಅದು ತಮ್ಮನ್ನು ಎಂತಹ ಆಳದಲ್ಲಿ ನೂಕಬಹುದೆಂಬ ಕಲ್ಪನೆ ಸಹ ಇರುವುದಿಲ್ಲ. ಸುಖದ ಆ ಸಾವಿರ ವರುಷಗಳು ಸಾವಿನ ಭಯದ ಒಂದು ದಿನವನ್ನು ಸಹ ಎದುರಿಸಲಾರದು. ಇನ್ನೂ ಬದುಕಬೇಕೆಂಬ ಅದಮ್ಯ ಆಸೆ ಮೂಡುತ್ತಿದೆ ಮನದಲ್ಲಿ, ಆದರೆ ಸಾವು ಬಹು ಸಮೀಪದಲ್ಲಿಯೇ ಕಾಣುತ್ತಿದೆ. ಜೀವನ ಶಾಶ್ವತವಲ್ಲವೆಂದು ನನಗೂ ತಿಳಿದಿದೆ, ರಸ್ತೆಯಲಿ ಹೋಗುವ ಮನುಷ್ಯನೂ ಅಪಘಾತದಿಂದ ಸಾಯಬಹುದೆಂದು ನೀನು ವಾದಿಸಬಹುದು. ಆದರೆ ನನ್ನ ಕೈಯಿಂದ ತಪ್ಪಿಸಬಹುದಿದ್ದ ಸಾವನ್ನು ನಾನೇ ಆಹ್ವಾನಿಸಿ ಕೊರಗುವ ದುಃಖದ ಅರಿವು ನಿನಗಿಲ್ಲ. ಆ ಅರಿವು ನಿನಗಾಗುವಾಗ ಹಿಂತಿರುಗುವ ಯಾವ ಮಾರ್ಗವೂ ಉಳಿದಿರುವುದಿಲ್ಲ.'


ದೀಪಕನ ಪತ್ರ ಮುಗಿದಿತ್ತು. ಸಾಯುವಾಗಿನ ಅವನ ಸ್ಥಿತಿಯನ್ನು ಎಣಿಸಿ ಮನಸ್ಸಲ್ಲಿ ಅತೀವ ನೋವು ಮೂಡಿತು. ದೀಪಕನ ಸಾವಿಗೆ ನಾನೇ ಕಾರಣನಾದೆ ಅನ್ನಿಸಿತು. ದ್ರಿಷ್ಟಿ ಮತ್ತೆ ಟೀವಿಯತ್ತ ಹೊರಳಿತು, ಬ್ರೇಕಿಂಗ್ ನ್ಯೂಸ್ ಕಳಗಡೆ ಮಿಂಚುತ್ತಿತ್ತು. ದೀಪಕನ ಧೈರ್ಯಕ್ಕೆ ಪ್ರೋತ್ಸಾಹದ ಮಹಾಪೂರವೇ ಹರಿದು ಬಂದಿತ್ತು. ಅವನನ್ನೇ ಅನುಕರಿಸಿ ನಗರದಲ್ಲಿ ಇನ್ನು ಕೆಲವು ಘಟನೆಗಳು ನಡೆದು ಬಿಗುವಿನ ವಾತಾವರಣ ಮೂಡಿತ್ತು. ಭ್ರಷ್ಟಾಚಾರದ ಬೇಗುದಿಯಲ್ಲಿ ಬೆಂದವರಲ್ಲಿ ದೀಪಕ್ ಆಶಾಕಿರಣವಾಗಿ ಮೂಡಿದ್ದ. ನನಗೂ ದೀಪಕನ ಮೇಲೆ ಹೆಮ್ಮೆ ಎನಿಸಿತ್ತು. ನಾನು ಬದಲಾಗಲೆಂದು ದೀಪಕ್ ಕಳಿಸಿದ ಪತ್ರದತ್ತ ಇನ್ನೊಮ್ಮೆ ಕಣ್ಣು ಹಾಯಿಸಿದೆ. ದೀಪಕ್ ತನ್ನ ಸಾವಿನಿಂದ ತಿಳಿಸಿದ ಪಾಠದ ಎದುರು ಅದು ಪೇಲವ ವೆನಿಸಿತು. ದೀಪಕನ ಸಾವಿಗೆ ನಾನು ಎಷ್ಟು ಕಾರಣವೋ ಅಷ್ಟೇ ಅವನ ಇಂದಿನ ಬದುಕಿನ ಯಶಸ್ಸಿಗೂ ಕೂಡ ಎಂದೆನಿಸಿ ಖುಷಿಯೆನಿಸಿತು. ದೀಪಕ್ ತನ್ನ ಹಾದಿಯಲ್ಲಿ ಬದುಕಿ ಸಾಧಿಸಲಾರದನ್ನು ನನ್ನ ಹಾದಿಯಲ್ಲಿ ಸತ್ತು ಸಾಧಿಸಿದ್ದ. ನಾನು ನಡೆಯುತ್ತಿರುವ ಹಾದಿ ಸರಿಯೋ ತಪ್ಪೋ ಇನ್ನು ಸಹ ನನಗೆ ತಿಳಿಯದಾಯಿತು. ಬಹುಷಃ ದೀಪಕ್ ಹೇಳಿದಂತೆ ಸಾವಿನ ನೆರಳಲ್ಲಿ ಮಾತ್ರ ನನಗದು ಹೊಳೆಯಲು ಸಾಧ್ಯವೇನೋ.

Saturday, June 30, 2012

ಎರಡು ಪತ್ರಗಳು (ಮೊದಲ ಪತ್ರ)

ಶನಿವಾರದ ದಿನ, ಆರಾಮವಾಗಿ ಹನ್ನೆರಡು ಘಂಟೆಗೆ ಎದ್ದಿದ್ದೆ. ನಿನ್ನೆ ರಾತ್ರಿಯ ನಶೆ ಇನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ಅಡಿಗೆ ಮನೆಯಲ್ಲಿ ಉಳಿದಿದ್ದ ಅರೆ ಬರೆ ತಿಂಡಿಯನ್ನು ತಿಂದು, ಸ್ವಲ್ಪ ನಿಂಬೆ ಶರಬತ್ತು ಕುಡಿಯುತ್ತ ಕುಳಿತ್ತಿದ್ದೆ. ಬೇಗ ನಶೆ ಇಳಿಸದಿದ್ದರೆ ಇವತ್ತಿನ ದಿನವೆಲ್ಲ ಹಾಳಾಗಿ ಹೋಗುವುದು ಖಂಡಿತ. ಕುಡಿಯುವಾಗೆಲ್ಲ ತಪ್ಪಿ ಸಹ ನಾಳೆಯ ಚಿಂತೆ ಬರುವುದಿಲ್ಲ, ಈಗ ಅನುಭವಿಸಬೇಕು. ಮಧ್ಯಾಹ್ನದ ಊಟಕ್ಕೆ ದೀಪಕ್ ಜೊತೆ ಹೊರಗಡೆ ಬೇರೆ ಹೋಗಬೇಕು. ಯಾಕೋ ದೀಪಕ್ ಇತ್ತೀಚಿಗೆ ನಮ್ಮನ್ನೆಲ್ಲ ಆದಷ್ಟು ದೂರ ಇಡುತ್ತ ಇದ್ದಾನೆ, ನಿನ್ನೆ ರಾತ್ರಿ ಸಹ ಪಾರ್ಟಿಗೆ ಬಂದಿರಲಿಲ್ಲ, ಏನೆಂದು ಸರಿಯಾಗಿ ವಿಚಾರಿಸಬೇಕು. ನಿಂಬೆ ಪಾನಕ ಕುಡಿಯುತ್ತ ಟೀವಿ ಆನ್ ಮಾಡಿದೆ, ಸೀದಾ ವಾರ್ತೆಗಳ ಚಾನೆಲ್ ಗೆ ಹೋಗಿತ್ತು. ಹಾಗೆಯೆ ಇಟ್ಟೆ, ಇತ್ತೀಚಿಗೆ ಮಾಮೂಲಿ ಮನರಂಜನ ಚಾನೆಲ್ ಗಳಿಗಿಂತ ಈ ವಾರ್ತೆಗಳಲ್ಲೇ ಜಾಸ್ತಿ ಮನರಂಜನೆ ಸಿಗುತ್ತಿತ್ತು.

ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬಿಸಿ ಬಿಸಿ ಸುದ್ದಿ ಕೆಳಗಡೆ ಮಿನುಗುತ್ತಿತ್ತು. ರಾಜ್ಯದ ಮಂತ್ರಿಯೋರ್ವರ ಬರ್ಬರ ಹತ್ಯೆ, ಇನ್ನಿಬ್ಬರಿಗೆ ಗಂಬೀರ ಪ್ರಮಾಣದ ಗಾಯ. ಆರೋಪಿ ದೀಪಕ್ ಸ್ಥಳದಲ್ಲೇ ಆತ್ಮಹತ್ಯೆ. ಒಂದು ಕ್ಷಣ ನಮ್ಮ ದೀಪಕ್ ಇರಬಹುದೇ ಅನಿಸಿತು. ಮತ್ತೆ ಅಂದುಕೊಂಡೆ, ಕೊಲೆಯಾದರೂ ಮಾಡಿಯಾನು, ಆತ್ಮಹತ್ಯೆಯಂತ ಕೆಲಸ ಖಂಡಿತಾ ಮಾಡಲ್ಲ ಅಂತ. ಕೆಲವೇ ಹೊತ್ತಿನಲ್ಲಿ ಆರೋಪಿಯ ಚಿತ್ರವೂ ಪ್ರಕಟವಾಯಿತು. ನನ್ನ ನಶೆಯಲ್ಲ ಒಮ್ಮೇಲೆ ಇಳಿಯಿತು. ದೀಪಕ್ ರಕ್ತದ ಮಡುವಲ್ಲಿ ಬಿದ್ದಿದ್ದ. ನನ್ನ ಕಣ್ಣುಗಳನ್ನೇ ನನಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ದೀಪಕ್ ನ ನಂಬರಿಗೆ ಡಯಲ್ ಮಾಡತೊಡಗಿದೆ. ಆದರೆ ಮರು ಕ್ಷಣದಲ್ಲಿ ಕರೆಯನ್ನು ತುಂಡರಿಸಿದೆ. ನನ್ನಲ್ಲೂ ಭಯ ಮೂಡತೊಡಗಿತ್ತು . ಖಂಡಿತವಾಗಲೂ ಅದು ದೀಪಕ್, ಅವನ ಫೋನ್ ಈವಾಗ ಪೋಲಿಸ್ ವಶದಲ್ಲಿರಬಹುದು, ಸುಮ್ಮನೆ ಯಾಕೆ ಕೋಲು ಕೊಟ್ಟು ಪೆಟ್ಟು ತಿನ್ನುವುದು. ಬೇರೆ ಯಾರನ್ನು ಕೇಳುವುದು ತಿಳಿಯಲಿಲ್ಲ, ನನ್ನಷ್ಟು ದೀಪಕ್ ಗೆ ಯಾರೂ ಪರಿಚಿತರಲ್ಲ. ದೀಪಕ್ ಹೀಗೆ ಮಾಡಿದ ಎಂದರೆ ನನಗೆ ನಂಬಲೇ ಸಾಧ್ಯವಿರಲಿಲ್ಲ. ಮತ್ತೆ ಕಣ್ಣಲ್ಲಿ ಕಣ್ಣಿಟ್ಟು ವಾರ್ತೆ ನೋಡಲು ಆರಂಬಿಸಿದೆ, ಬಹುಶ ನನಗೆ ಬೇಕಾದ ಮಾಹಿತಿ ಎಲ್ಲ ಅಲ್ಲೇ ಸಿಗಬಹುದೇನೋ.


ಬೆಳಿಗ್ಗೆ ಹತ್ತು ಘಂಟೆಯ ಹೊತ್ತಿಗೆ ನಗರದ ಕಾಲೇಜೊಂದರಲ್ಲಿ ಸಮ್ಮೇಳನವನ್ನು ಉದ್ಘಾಟಿಸಲು ಸಚಿವರು ಬಂದಿದ್ದರಂತೆ. ಸಮಾರಂಭವನ್ನು ಉದ್ಘಾಟಿಸುವ ಸಮಯದಲ್ಲೇ ದೀಪಕನ ಕೈಯಿಂದ ಹಾರಿದ ಪಿಸ್ತೂಲಿನ ಗುಂಡು ಸಚಿವರ ಜೀವವನ್ನು ಬಲಿ ತೆಗೆದುಕೊಂಡಿತ್ತು. ದೀಪಕನನ್ನು  ಬಂಧಿಸಲು ಪೊಲೀಸರು ಬರುವ ಮುಂಚೆಯೇ ಇನ್ನು ಎರಡು ಗುಂಡು ಹಾರಿ ಮತ್ತೀರ್ವ ಸ್ಥಳೀಯ ರಾಜಕಾರಿಣಿಗಳನ್ನು ಗಾಯಗೊಳಿಸಿತ್ತು. ಕೊನೆಯಲ್ಲಿ ಹಾರಿದ ಗುಂಡು ದೀಪಕನ ತಲೆಯನ್ನು ಭೇದಿಸಿ ಅವನನ್ನು ನೆಲಕ್ಕೊರಗಿಸಿತ್ತು. ಯಾವ ಕಾರಣಕ್ಕಾಗಿ ದೀಪಕ್ ಅವರ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರಿಗೂ ತಿಳಿದಿರಲಿಲ್ಲ. ಕ್ಷಣಗಳಲ್ಲಿ ಪೊಲೀಸರು ಇಡೀ ಸಭಾಸ್ತಾನವನ್ನು ಖಾಲಿ ಮಾಡಿಸಿ ತಮ್ಮ ತನಿಖೆ ಆರಂಭಿಸಿದ್ದರು. ಆದರೆ ಮಾಧ್ಯಮದವರಿಗೆ ಯಾವದೇ ಸುದ್ದಿಯನ್ನು ಒದಗಿಸಿರಲಿಲ್ಲ. ಕೊಲೆಗೊಂಡ ಸಚಿವರು ವರ್ಷಗಳಿಂದ ಸಾಲು ಸಾಲು ಹಗರಣಗಳಲ್ಲಿ ಸಿಲುಕಿಕೊಂಡಿದ್ದರು. ಆದರೆ ನ್ಯಾಯಾಲಯದಲ್ಲಿ ಯಾವ ಅಪರಾಧವೂ ಸಾಬೀತಾಗಿರಲಿಲ್ಲ, ಕೆಲವು ಕೇಸುಗಳು ಇನ್ನೂ ಚಾಲ್ತಿಯಲ್ಲಿದ್ದವು. ವಾರಗಳ ಹಿಂದಷ್ಟೇ ಮತ್ತೊಮ್ಮೆ ಬಹುಕೋಟಿ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ಯುವಕನಿಂದ ಸಚಿವರ ಕೊಲೆಯಾಗಿರಬಹುದೇ ಎಂದು ಕೆಲವರು ಶಂಕಿಸುತ್ತಿದ್ದರು. ಇನ್ನು ಕೆಲವರು ಸಚಿವರ ಉತ್ತಮ ಕಾರ್ಯಗಳನ್ನು ನೋಡಿ ಸಹಿಸಲಾಗದ ವಿರೋಧಿಗಳು ಈ ಯುವಕನನ್ನು ಮುಂದೆ ತಳ್ಳಿ ಕೊಲೆ ನಡಿಸಿದ್ದಾರೆಂದು ಆರೋಪಿಸುತ್ತಿದ್ದರು. ಯಾವುದು ಸತ್ಯವೋ ಯಾವುದು ಸುಳ್ಳೋ ಒಂದೂ ತಿಳಿಯಲಿಲ್ಲ. ಕೆಲ ದಿನಗಳಿಂದ ದೀಪಕ್ ನಮ್ಮಿಂದ ದೂರವಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದ ಎಂದರೆ ನನಗೆ ಇನ್ನೂ ನಂಬಿಕೆ ಬರಲಿಲ್ಲ. ಕಾರಣವೂ ತಿಳಿಯಲಿಲ್ಲ. ಸಚಿವರ ಭ್ರಷ್ಟಾಚಾರಕ್ಕೂ ಈ ಕೊಲೆಗೂ ಏನೂ ಸಂಬಂಧವಿಲ್ಲವೆಂದು ನನಗೆ ಮನವರಿಕೆಯಿತ್ತು. ಕಳೆದ ತಿಂಗಳಷ್ಟೇ ಭ್ರಷ್ಟಾಚಾರದ ವಿರುಧ್ಧ ನಡೆದ ದೊಡ್ಡ ಮೆರವಣಿಗೆಯ ದಿನ ನಾನೂ ದೀಪಕ ಸೇರಿ ಬಾರೊಂದರಲ್ಲಿ ಕುಡಿಯುತ್ತ ಈ ಸಂಘಟನೆಗಳ ಬಗ್ಗೆ ಜೋಕ್ ಮಾಡುತ್ತಿದ್ದೆವು. ಅಂತಹವನು ಅಷ್ಟು ಬೇಗ ಬದಲಾಗುತ್ತಾನೆ ಅಂದರೆ ನಂಬಲು ಅಸಾಧ್ಯ. ಅದಲ್ಲದೆ ಸಚಿವರ ಬಗ್ಗೆ ಅವನಲ್ಲಿ ಬೇರಾವ ದ್ವೇಷ ಇರುವುದು ನನಗೆ ತಿಳಿಯದ ವಿಚಾರ. ಈ ಹಾಳು ರಾಜಕೀಯ ನಮಗೆ ಹಾಸ್ಯದ ವಿಷಯ ಬಿಟ್ಟರೆ ಅದಕ್ಕಿಂತ ಹೆಚ್ಚಿನದೇನೂ ಆಗಿರಲಿಲ್ಲ.  ಮಾಡಲು, ಅನುಭವಿಸಲು ನಮಗೆ ಬೇರೆಯ ಹಲವಾರು ವಿಷಯಗಳಿದ್ದವು.


ಎಲ್ಲ ವಾರ್ತಾ ಚಾನೆಲ್ ಗಳಲ್ಲು ಅದೇ ಸುದ್ದಿ, ಯಾರಿಗೂ ಸರಿಯಾದ ವಿವರ ತಿಳಿದಿರಲಿಲ್ಲ. ಒಂದಿಬ್ಬರು ಸ್ನೇಹಿತರಿಗೆ ಕರೆ ಮಾಡಿದೆ, ಎಲ್ಲರೂ ನನ್ನನ್ನೇ ಕೇಳುವವರು. ಊಟ ಮಾಡುವ ಮನಸ್ಸಾಗಲಿಲ್ಲ. ಏನಾದರೂ ಹೊಸ ಸುದ್ದಿ ಬರಬಹುದೆಂದು ಟೀವಿಗೆ ಆತು ಕುಳಿತ್ತಿದ್ದೆ. ಇದ್ದಕ್ಕಿದ್ದಂತೆಯೇ ಸುದ್ದಿವಾಚಕರಲ್ಲಿ ಬದಲಾವಣೆಯ ಸಂಚಯ, ಮುಖ ನೋಡಿಯೇ ಮಹತ್ವದ ಸುದ್ದಿ ಎಂದು ಹೇಳಬಹುದಿತ್ತು. ಕಾತರದಿಂದ ನೋಡುತ್ತಾ ಹೋದೆ. 'ಇದೀಗ ಬಂದ ಸುದ್ದಿ. ಸಚಿವರನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ ದೀಪಕ್ ನಮ್ಮ ಚಾನೆಲ್ಲಿಗೆ ಆತ್ಮಹತ್ಯೆಯ ಪತ್ರವೊಂದನ್ನು ಕಳಿಸಿರುತ್ತಾರೆ, ಈ ಪತ್ರವನ್ನು ಎಲ್ಲರ ಮುಂದೆ ಇಡುವುದು ಅವನ ಕೊನೆಯ ಆಶೆ ಕೂಡ ಆಗಿತ್ತು. ಹೀಗಿದೆ  ಆ ಪತ್ರದ ಒಕ್ಕಣೆ'. ಪತ್ರ ಓದಲು ಪ್ರಾರಂಭಿಸಿದೊಡನೆ ಮೂಲೆಯಲ್ಲಿ ದೀಪಕನ ಭಾವಚಿತ್ರವೊಂದು ಮೂಡಿತು.

'ಎಲ್ಲರಿಗೂ ನನ್ನ ಕೊನೆಯ ನಮಸ್ಕಾರಗಳು. ನನ್ನ ಮನಸ್ಸಲ್ಲಿ ನಡೆಯುತ್ತಿರುವ ದ್ವಂದ್ವಗಳನ್ನು ನಿಮ್ಮಲ್ಲಿ ಹೇಗೆ ತೆರೆದಿಡುವುದು ಎಂಬುದು ಸರಿಯಾಗಿ ತೋಚುತ್ತಿಲ್ಲ. ಸಾವಿನ ಬರದ ನಿರೀಕ್ಷೆಯಲ್ಲಿ ಮನಸ್ಸು ಕ್ಷಣ ಕ್ಷಣದಲ್ಲೂ ತಲ್ಲಣಗೊಳ್ಳುತ್ತಿದೆ, ಭಂಡ ಬದುಕಿನ ಬಳ್ಳಿಯನ್ನು ಹಿಡಿಯಲು ಮತ್ತೊಮ್ಮೆ ಮನಸ್ಸು ತವಕಿಸುತ್ತಿದೆ, ಆದರೂ ಹೃದಯ ಬಡಿತದ 
ಕೊನೆ ಕ್ಷಣಗಳ ಗಣನೆ ಆರಂಭಿಸಿದೆ. ಸಾಯುವ ಇಚ್ಛೆ ನನದಲ್ಲ, ಸಾಯುವ ವಯಸ್ಸೂ ನನ್ನದಲ್ಲ, ಸಾಯಲು ನನ್ನದಾದ ಯಾವುದೇ ಕಾರಣಗಳೂ ಇಲ್ಲ, ಆದರೂ ನಾನು ಸಾಯಬೇಕಿದೆ, ನಾನು ನಂಬಿಕೊಂಡ ಸಿದ್ಧಾಂತಗಳಿಗಾಗಿ. ನನ್ನ ಸಾವಿನಿಂದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣಬಹುದು ಎಂಬ ದೂರದ ಆಸೆಗಾಗಿ. ನನ್ನ ಸಾವಿನ ನಿಜವಾದ ಕಾರಣ ಈ ಪತ್ರದಿಂದ ನಿಮಗೆ ತಿಳಿಯುವುದಾದರೆ, ಅದುವೇ ಸಾಕ್ಷಿ ನನ್ನ ಅಸಹಾಯಕ ನಡೆಗೆ. ಸಾಯುವಾಗ ಇಟ್ಟ ಇನ್ನೊಂದು ಪತ್ರ ನಿಮ್ಮನ್ನು ತಲುಪುವ ಭರವಸೆ ಇಲ್ಲ, ನಮ್ಮ ರಕ್ಷಕರು ಅಷ್ಟು ನಿಷ್ಟರಾಗಿದ್ದರೆ ನಾನೀ ಕಾರ್ಯಕ್ಕೆ ತೊಡಗುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗಾಗಿ ಮಾಧ್ಯಮಗಳಿಗೆ ಈ ಪತ್ರವನ್ನು ಕಳಿಸುತ್ತಿದ್ದೇನೆ, ನನ್ನ ಬಲಿದಾನ ಕೆಲವರಿಗಾದರೂ ಅರ್ಥವಾಗುತ್ತದೆ ಎಂಬ ಕಾರಣದಿಂದ.'

'ಚಿಕ್ಕಂದಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನೆಲ್ಲ ಓದುವಾಗ ರೋಮಾಂಚನವಾಗುತ್ತಿತ್ತು. ಅವರ ಧೈರ್ಯ, ನಿಸ್ವಾರ್ಥ ಸೇವೆಗಳನ್ನು ನೆನೆಸಿಕೊಂಡು ಮನಸ್ಸು ತುಂಬಿ ಬರುತ್ತಿತ್ತು. ಅವರ ಒಂದೊಂದು ವೀರ ನಡೆಯನ್ನು ನೆನೆಸಿ ಕೊಂಡಾಗಲೆಲ್ಲ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು. ನಾನು ಅವರ ಹಾಗೆ ಆಗಬೇಕೆಂಬ ಮಹದಾಶೆ ಮೂಡಿತ್ತು. ಬೆಳೆಯುತ್ತ ಹೋದಂತೆಲ್ಲ ನಿಧಾನವಾಗಿ ವಾಸ್ತವದ ಅರ್ಥವಾಗತೊಡಗಿತು. ಆ ಹೋರಾಟಗಾರರ ಬಲಿದಾನಕ್ಕೆ ಇಂದು ಯಾವ ಅರ್ಥವೂ ಉಳಿದಿರಲಿಲ್ಲ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಅದು ಬಲಿದಾನವೆನಿಸುತ್ತಿರಲಿಲ್ಲ, ಕೊಲೆಯಂತೆನಿಸುತ್ತಿತ್ತು. ನಮ್ಮನ್ನಾಳುವವರು ಮತ್ತೆ ಮತ್ತೆ ಅವರ ಕೊಲೆ ಮಾಡುತ್ತಿದ್ದರೆ, ನಾವೆಲ್ಲಾ ಮೌನವಾಗಿ ಕುಳಿತು ಅದನ್ನು ಸಮ್ಮತ್ತಿಸುತ್ತಿದ್ದೇವೆ ಅನಿಸುತ್ತಿತ್ತು. ಇಲ್ಲದಿದ್ದರೆ ಮತ್ತೆ ಮತ್ತೆ ಯಾಕೆ ನಾವು ಅವರನ್ನೇ ಆರಿಸುತ್ತೇವೆ, ಅವರಿರುವುದು ಲೂಟಿಗಾಗಿ ಮಾತ್ರ ಎಂದು ತಿಳಿದರೂ ಕೂಡ. ಒಮ್ಮೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮೇಲೆ ಅದನ್ನು ವೈರಿಗಳ ಎದೆಯಾಳಕ್ಕಿಳಿಸಲು ನೂರು ವರ್ಷಗಳು ಹಿಡಿಯಿತು. ಆದರೆ ಅಷ್ಟು ಕಷ್ಟ ಪಟ್ಟು ಗಳಿಸಿದ್ದನ್ನು ಐವತ್ತು ವರ್ಷಗಳೊಳಗೆ ಅಡವಿಟ್ಟು ಪೈಶಾಚಿಕ ನಗೆ ಬೀರುತ್ತಿದ್ದೇವೆ. ಯಾರು ಕೂಡ ಯಾಕೆ ಧೈರ್ಯ ಮಾಡುತ್ತಿಲ್ಲ ಈ ಅತ್ಯಾಚಾರವನ್ನು ಎದುರಿಸಲಿಕ್ಕೆ. ಊಟಕ್ಕಿಲ್ಲದವರಿಗೆ ಊಟದ್ದೆ ಚಿಂತೆ, ಇದ್ದವರಿಗೆ ಇರುವುದೂ ತಪ್ಪಿ ಹೋಗುವುದೋ ಎಂಬ ಹೆದರಿಕೆ. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವ ಧೈರ್ಯ ಯಾರಿಗೂ ಇಲ್ಲ'

'ಕಳೆದ ವಾರದ ನ್ಯಾಯಾಲಯದ ತೀರ್ಪಿನಿಂದ ನನ್ನಲ್ಲಿದ್ದ ತಾಳ್ಮೆ ಎಲ್ಲ ಮುಗಿದು ಹೋಗಿದೆ. ಈ ದೇಶವನ್ನು ಹಾಡು ಹಗಲಲ್ಲೇ ಕೊಳ್ಳೆ ಹೊಡೆಯುತ್ತಾರೆ, ಕೊಳ್ಳೆ ಹೊಡೆದ ಹಣದಲ್ಲಿ ಒಂದು ಪಾಲನ್ನು ಉಳಿದವರಿಗೆ ಬಿಸಾಕಿ ಕಾನೂನನ್ನು ಕಸದ ಬುಟ್ಟಿಯಲ್ಲಿ ತುಂಬುತ್ತಾರೆ. ದಿನ ಹೋದಂತೆ ಈ ಹಾಳು ರಾಜಕೀಯದಲ್ಲಿ ಈ ವೆಂಕಟಯ್ಯನಂತವರೇ ತುಂಬುತ್ತಿದ್ದಾರೆ. ಪ್ರತಿ ದಿನವೂ ಪತ್ರಿಕೆಯಲ್ಲಿ ಓದುತ್ತೇನೆ, ಇವತ್ತು ಹತ್ತು ಆತ್ಮಹತ್ಯೆ, ಐದು ಕೊಲೆ, ಎಂಟು ಅಪಘಾತ ಎಂಬುದಾಗಿ. ಹೀಗೆ ಸಾಯುವವರು ಯಾಕಾದರೂ ಒಂದಿಬ್ಬರು ಇಂತಹವರನ್ನು ಕೊಂದು ಸಾಯುವುದಿಲ್ಲ ಎಂದು ಪ್ರತಿ ದಿನ ಚಿಂತಿಸಿ ಚಿಂತಿಸಿ ಸಾಕಾಗಿದೆ.'

'ನನಗೆ ಸಚಿವ ವೆಂಕಟಯ್ಯನ ಮೇಲಾಗಲಿ, ಉಳಿದವರ ಮೇಲಾಗಲಿ ಯಾವುದೇ ವ್ಯಕ್ತಿಗತ ದ್ವೇಷವಿಲ್ಲ. ಆದರೆ ಅಷ್ಟು ದೊಡ್ಡ ಹಗರಣದ ನಂತರವೂ ರಾಜಾರೋಷವಾಗಿ ನಾಯಕರ ಹಾಗೆ ತಿರುಗುವುದು ನನ್ನಿಂದ ಸಹಿಸಲಾಗುತ್ತಿಲ್ಲ. ನ್ಯಾಯಾಲಯಕ್ಕೆ ಅವರ ತಪ್ಪಿನ ಸಾಕ್ಷಿ ಸಿಗದಿರಬಹುದು. ಆದರೆ ನನಗೆ ಯಾವುದೇ ಸಾಕ್ಷಿಯ ಅಗತ್ಯವಿಲ್ಲ. ಅವರ ಸಾವು ಸಮಸ್ಯೆಯ ಸಂಪೂರ್ಣ ಪರಿಹಾರವಲ್ಲ, ಆದರೆ ಅದರಿಂದ ಉಳಿದವರಲ್ಲಿ ಸ್ವಲ್ಪವಾದರೂ ಭಯ ಮೂಡುತ್ತದೆ. ಆ ಭಯವೇ ಮುಂದೊಮ್ಮೆ ಸಮಸ್ಯೆಯ ಪರಿಹಾರವಾಗಬುದೆಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ. ನನ್ನ ಕೆಲಸ ಒಳ್ಳೆಯ ಮಾರ್ಗದಲ್ಲವೆಂದು ನನಗೂ ತಿಳಿದಿದೆ. ಆದರೆ ಸದ್ಯಕ್ಕೆ ಈ ಮಾರ್ಗ ಬಿಟ್ಟು ಬೇರಾವುದು ನನಗೆ ತೋಚುತ್ತಿಲ್ಲ. ಸ್ವಾತಂತ್ಯ ಬರಿ ಅಹಿಂಸಾ ಮಾರ್ಗದಿಂದ ದೊರೆತಿಲ್ಲ, ಭಗತ್ ಸಿಂಗ್ ರಂತವರ ಕ್ರಾಂತಿ ಕೂಡ ಅದಕ್ಕೆ ಅಷ್ಟೇ ಸಹಕರಿಸಿದೆ. ನನ್ನ ಈ ಮಾರ್ಗಕ್ಕೆ ನನಗ್ಯಾರ ಸಮರ್ಥನೆಯೂ ಬೇಕಿಲ್ಲ. ನನ್ನ ತಪ್ಪಿಗೆ ನನ್ನ ಬಲಿದಾನವೇ ಪ್ರಾಯಶ್ಚಿತ್ತ. ಅದಕ್ಕೂ ನಾನು ಸಿದ್ದನಾಗಿಯೇ ಇದ್ದೇನೆ. 


ಆರಂಭದಲ್ಲಿ ತುಂಬಾ ಭಯವೆನ್ನಿಸಿತು, ಈ ಮೊದಲು ನಡೆಯದ ಹಾದಿ. ಖಾಸಗಿ ಬ್ಯಾಂಕಿನಲ್ಲಿ ಸಿಕ್ಕಿದಷ್ಟು ಸಾಲ ತೆಗೆದೆ, ತೀರಿಸುವ ಪ್ರಮೇಯವೇನೂ ಇರಲಿಲ್ಲ. ಈ ಮೊದಲು ಹೆದರುತ್ತಿದ್ದ, ಅಸಹ್ಯ ಪಟ್ಟುಕೊಳ್ಳುತ್ತಿದ್ದ ಸ್ಥಳಗಳನ್ನು, ಜನರನ್ನು ನೋಡಿದೆ. ವೆಂಕಟಯ್ಯನವರ ಚೇಲಾಗಳಲ್ಲೇ ಗೆಳೆತನ ಸಾಧಿಸಿದೆ. ಹಣವೊಂದಿದ್ದರೆ ಎಲ್ಲವೂ ಸಾಧ್ಯ. ವಿಪರ್ಯಾಸವೆಂಬಂತೆ ನನ್ನ ಕಾರ್ಯಸಾಧನೆಗೆ ಬೇಕಿದ್ದ ಎಲ್ಲವನ್ನೂ ಅವರಿಂದಲೇ ಸಂಪಾದಿಸಿದೆ. ಕೆಲ ದಿನಗಳಲ್ಲಿಯೇ ನನ್ನ ಗುರಿ ನನಗೆ ಸ್ಪಷ್ಟವಾಗಿ ಕಾಣತೊಡಗಿತು. ಇನ್ನೆರಡು ದಿನಗಳಲ್ಲಿ ನಗರದ ಕಾಲೇಜಿನಲ್ಲಿ 'ಭಾರತದ ಭವಿಷ್ಯ:ಯುವಜನರ ಪಾತ್ರ' ಸಮ್ಮೇಳನದ ಉದ್ಘಾಟನೆಗೆ ಬರುವವರಿದ್ದಾರೆ. ಅಂತಹ ಭ್ರಷ್ಟ ಮನುಷ್ಯನನ್ನು ಇಲ್ಲವಾಗಿಸಲು ಅದಕ್ಕಿಂತ ಒಳ್ಳೆಯ ವೇದಿಕೆ ಸಿಗುವುದು ಅಸಾಧ್ಯ. ಹಾಗಾಗಿ ಮನಸ್ಸನ್ನು ಕಲ್ಲಾಗಿಸಿ ನಿರ್ಧಾರ ತೆಗೆದುಕೊಂಡಾಗಿದೆ, ಎಲ್ಲ ಯೋಜನೆಗಳು ಪೂರ್ಣವಾಗಿದೆ.  

ಸಾವಿನ ಭಯ ಏನೆಂಬುದು ಸಾವಿಗೆ ಮುಖ ಮಾಡಿ ನಿಂತವನಿಗೆ ಮಾತ್ರ ತಿಳಿಯಲು ಸಾಧ್ಯ, ಉಳಿದವರ ಕಲ್ಪನೆಗೂ ಅದು ಸಿಗಲಾರದಂತಹುದು. ನನ್ನ ಸಾವು ಅನಿವಾರ್ಯವಲ್ಲವೆಂಬ ಮನಸ್ಸಿನ ಕ್ಷೀಣ ಧ್ವನಿ ಅದರ ಭಯವನ್ನು ಇನ್ನು ಹೆಚ್ಚಿಸಿದೆ. ಈ ವ್ಯವಸ್ಥೆಯ ಮೇಲಿನ ರೋಷ ಎಷ್ಟೇ ತೀವ್ರತರವಾಗಿದ್ದರೂ ಕೂಡ ಸಾವಿನ ಭಯವನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಅದಕ್ಕಿಲ್ಲ. ಆ ಅರಿವು ದೇಶಕ್ಕಾಗಿ ಜೀವವನ್ನೇ ತ್ಯಾಗ ಮಾಡಿದವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ. ಯಾವುದನ್ನಾದರೂ ಅನಿಭವಿಸಿದಾಗಲೇ ಅದರ ನಿಜವಾದ ಮಹತ್ವ ಅರಿವಾಗುವುದು. ಎರಡು ದಿನಗಳ ಅವಧಿಯಲ್ಲಿ ಸಾವಿನ ಭಯ ಮನಸ್ಸನ್ನು ವಿಚಲಿತಗೊಳ್ಳಿಸದಿರಲಿ ಎಂದು ಈ ಪತ್ರವನ್ನು ಈಗಲೇ ಮಾಧ್ಯಮಗಳಿಗೆ ಕಳಿಸುತ್ತಿದ್ದೇನೆ.  ಇದೊಮ್ಮೆ ಹೊರ ಹೋದ ಮೇಲೆ ಹೇಗೂ ನನಗೆ ಸಾವು ಕಟ್ಟಿಟ್ಟ ಬುತ್ತಿ. ಸಾವು ಅನಿವಾರ್ಯವೆಂಬ ಭಾವನೆ ಮನಸ್ಸಿಗೆ ಅರ್ಥವಾಗದ ಶಾಂತಿಯನ್ನು ಕೊಡುತ್ತಿದೆ. ನನ್ನ ಬದುಕು ಅರ್ಥಪೂರ್ಣವಾಗುತ್ತಿದೆ ಎಂಬ ಕಲ್ಪನೆ ಮನಸ್ಸಿಗೆ ಸಾರ್ಥಕತೆಯ ತೃಪ್ತಿಯನ್ನೂ ತರುತ್ತಿದೆ. 

ನಾನು ಮಾಡುತ್ತಿರುವುದೇ ಸರಿ, ಎಲ್ಲರೂ ನನ್ನ ಮಾರ್ಗವನ್ನೇ ಅನುಸರಿಸಲಿ ಎಂಬ ಬಯಕೆ ನನ್ನದಲ್ಲ. ನನ್ನ ಮಾರ್ಗ ಕೆಲವರಿಗೆ ತಪ್ಪೆನಿಸಬಹುದು. ಕೇವಲ ಭ್ರಷ್ಟಾಚಾರ ಮಾಡಿದವನಿಗೆ ಸಾವಿನ ಶಿಕ್ಷೆ ಹೆಚ್ಚು ಎಂದು ವಾದಿಸುವವರಿರಬಹುದು. ಆದರೆ ಆ ಭ್ರಷ್ಟಾಚಾರ ಬೇರೆಯವರ ಸಾವಿಗೆ ಹೇಗೆ ಕಾರಣವಾಗುತ್ತದೆ ಎಂದು ತಿಳಿದಿರುವವರೂ ನನ್ನಂತೆಯೇ ತುಂಬಾ ಜನರಿದ್ದಾರೆ. ನನ್ನ ಅಸಹಾಯಕ ಕೃತ್ಯ ಅವರಿಗಾದರೂ ಅರ್ಥವಾದರೆ ಸಾಕು. ವೆಂಕಟಯ್ಯನ ಸಾವು ಸಮಸ್ಯೆಯ ಪರಿಹಾರವಲ್ಲವೆಂದು ನನಗೂ ತಿಳಿದಿದೆ. ಆದರದು ಪರಿಹಾರದ ನಾಂದಿಯಾದರೂ ಸಹ ನನ್ನ ತ್ಯಾಗಕ್ಕೆ ಒಂದು ಅರ್ಥ ಸಿಗುತ್ತದೆ.'

ದೀಪಕನ ಸುದೀರ್ಘ ಪತ್ರ ಮುಗಿದಿತ್ತು. ನನಗೆ ಏನನ್ನೂ ನಂಬಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟೊಂದು ಬದಲಾವಣೆ ದೀಪಕನಲ್ಲಿ ನಿರೀಕ್ಷಿರಲಿಲ್ಲ. ಏನೂ ಮಾಡಲು ತೋಚದೆ ಟೀವಿಯ ಎದುರಲ್ಲಿಯೇ ಕುಳಿತೆ. ಎಲ್ಲಾ ಚಾನಲ್ಗಳಲ್ಲೂ ದೀಪಕನದೆ ಸುದ್ದಿ. ಈ ಘಟನೆಯನ್ನು ಆದರಿಸಿ ನಾನಾ ತರದ ಕಾರ್ಯ ಕ್ರಮ ಆಯೋಜಿಸಿದ್ದರು. ಘಟನೆಯ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು. ಎಲ್ಲೋ ಕೆಲವು ಬೆರಳೆಣಿಕೆಯ ಜನರನ್ನು ಬಿಟ್ಟರೆ ಬೇರೆ ಎಲ್ಲರು ದೀಪಕನ ಕೃತ್ಯವನ್ನು ಮನಸ್ಸಾರೆ ಅಭಿನಂದಿಸುವವರೇ. ಕೆಲ ಕ್ಷಣಗಳಲ್ಲಿಯೇ ದೀಪಕ್ ಎಲ್ಲರ ಮನಸ್ಸಲ್ಲಿ ಬಹು ದೊಡ್ಡ ನಾಯಕನಾಗಿ ಮೂಡಿದ್ದ. ಎಲ್ಲರೂ ದೀಪಕನ ಧೈರ್ಯವನ್ನು ಮೆಚ್ಚಿ ಅವನ ಕಾರ್ಯವನ್ನು ಸಮರ್ಥಿಸುವವರೇ. ಸ್ವತಹ ದೀಪಕ್ ಕೂಡ ಅವನ ಕಾರ್ಯಕ್ಕೆ ಇಷ್ಟು ಜನ ಬೆಂಬಲ ನಿರೀಕ್ಷಿಸಿರಲಿಕ್ಕಿಲ್ಲ. ಇನ್ನು ಕೆಲ ಸಮಯದಲ್ಲಿ ಮಾಧ್ಯಮದವರು ನನ್ನನ್ನರಸಿ ಬರಬಹುದೇನೋ ಎಂದು ತಿಳಿದು ಹೊರಗಡೆ ಹೊರಟೆ. ನಾನಿನ್ನು ನಡೆದ ಘಟನೆಯಿಂದ ಹೊರ ಬಂದಿರಲಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದಿರುವಾಗ ಉಳಿದವರ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದೆಂದು ತಿಳಿಯದಾಗಿದ್ದೆ.


ಮಾಧ್ಯಮಗಳ ಕೈಯಿಂದ ತಪ್ಪಿಸಿಕೊಳ್ಳುವೆನೆಂಬುದು ಕೇವಲ ನನ್ನ ಕನಸಾಗಿತ್ತು. ಮನೆಯಿಂದ ಹೊರಟು ಗೆಳೆಯನ ಮನೆ ಸೇರಿದ ಕೆಲ ಕ್ಷಣಗಳಲ್ಲಿಯೇ ಮಾಧ್ಯಮಗಳ ಬಂಧಿಯಾಗಿದ್ದೆ. ಒಳ್ಳೆಯತನದ ಮುಖವಾಡ ಧರಿಸಿ ದೀಪಕನ ಪತ್ರಕ್ಕೆ ಅನುಗುಣವಾಗಿ ಕಥೆ ಹೆಣೆದು ಅವರೆಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ. ಕಳೆದ ಕೆಲವು ದಿನಗಳಿಂದ ದೀಪಕ ನಮ್ಮಿಂದ ದೂರವಾಗಿದ್ದುದು ಒಳ್ಳೆಯದೇ ಆಗಿತ್ತು. ಇಲ್ಲದಿದ್ದರೆ ಪೋಲೀಸು, ಅದು ಇದು ಅಂದು ಬೀದಿ ನಾಯಿಯ ತರ ಅಲೆಯಬೇಕಿತ್ತು. ಮಾಧ್ಯಮಗಳ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ದೀಪಕನನ್ನು ಬೆಂಬಲಿಸಿದ್ದರಿಂದ ಹಾಗು ದೀಪಕನೆ ಆತ್ಮಹತ್ಯೆಯ ಪತ್ರದಲ್ಲಿ ಎಲ್ಲವನ್ನು ಸಾಕ್ಷಿ ಸಮೇತ ಬರೆದಿರುವುದರಿಂದ ಅವನ ಅಂತ್ಯ ಕ್ರಿಯೆಗೆ ಹೆಚ್ಚಿನ ತಡೆಯಾಗಲಿಲ್ಲ. ಸಾಕಷ್ಟು ಜನರ ಸಮ್ಮುಖದಲ್ಲಿ ನಡೆದ ಅಂತ್ಯ ಕ್ರಿಯೆ ಮುಗಿಸಿ ಮನೆಗೆ ಬಂದು ಬಾಗಿಲು ತೆರೆದರೆ, ಬಾಗಿಲ ಹತ್ತಿರವೇ ಒಂದು ಪತ್ರ ಕಾಣಿಸಿತು. ನನ್ನ ಹೆಸರಿಗೆ ಬರೆದ ಪತ್ರ, ಅಕ್ಷರ ನೋಡಿದರೆ ದೀಪಕನನೆನ್ನುವುದರಲ್ಲಿ ಸಂದೇಹವಿಲ್ಲ. ಮಾಧ್ಯಮಕ್ಕೆ ಕಳಿಸಿದ ಪತ್ರವನ್ನೇ ನನಗೆ ಕಳಿಸಿರಬಹುದೇ, ಗೊತ್ತಾಗಲಿಲ್ಲ. ಕೂಡಲೇ ಬಾಗಿಲು ಭದ್ರ ಪಡಿಸಿ ಪತ್ರ ಓದಲಾರಂಭಿಸಿದೆ.

Sunday, June 3, 2012

ಗೋಪಾಲ

ಮಾಮೂಲಿನಂತೆ ಬೆಳಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದಿದ್ದೆ. ಮೊದಲಿನಂತೆ ಹೆಚ್ಚಿನ ಕೆಲಸವೇನೂ ಇರಲಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಎಲ್ಲ ಅಂದುಕೊಂಡಂತೆ ನಡೆಯುತ್ತಿತ್ತು. ಎಲ್ಲ ನಮ್ಮ ಗೋಪಾಲಣ್ಣನ ಕೃಪೆ. ಮೂರು ವರ್ಷಗಳ ಹಿಂದೆ ಅವರ ತಂದೆಯೇ ಗ್ಯಾರೇಜ್ ನಡೆಸುತ್ತಿದ್ದರು. ಆವಾಗ ಬೆಳಿಗ್ಗೆ ಎಂಟು ಘಂಟೆಗೆ ಗ್ಯಾರೇಜಿಗೆ ಬಂದರೆ ಸಂಜೆ ಎಂಟು ಘಂಟೆಯ ತನಕ ಕತ್ತೆ ಹಾಗೆ ದುಡಿಯಬೇಕಿತ್ತು. ಕೆಲಸವೇನೋ ಚೆನ್ನಾಗೆ ತಲೆಗೆ ಹತ್ತಿತ್ತು, ಆದರೆ ಘಳಿಗೆ ಘಳಿಗೆಗೂ ಅವರ ಬಯ್ಗಳ ಕೇಳಿ ತಲೆ ಚಿಟ್ಟು ಹಿಡಿಯುತ್ತಿತ್ತು. ಮನೆ ತಲುಪುವ ತನಕ ಅವರಿಗೆ ಮನಸ್ಸೊಳಗೆ ಹಿಡಿ ಶಾಪ ಹಾಕುವುದು ಬಿಟ್ಟರೆ ಬೇರೇನೂ ಮಾಡಲಾಗುತ್ತಿರಲಿಲ್ಲ. ಈ ಗ್ಯಾರೇಜು ಬಿಟ್ಟರೆ ಬೇರೆ ಕೆಲಸ ಕೊಡುವವರು ಯಾರೂ ಇರಲಿಲ್ಲ. ಅಂತೂ ಅವರು ಮೂಲೆ ಸೇರಿ ಎಲ್ಲ ಗೋಪಾಲಣ್ಣನೆ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಕೆಲಸ ಕೆಲಸದಂತೆಯೇ ಅನಿಸುತ್ತಿರಲಿಲ್ಲ. ಬೆಳಿಗ್ಗೆ ಸ್ವಲ್ಪ ಹೊತ್ತು ಗೋಪಾಲಣ್ಣನ ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ ಗ್ಯಾರೇಜಿಗೆ ಬಂದರೆ, ಸಂಜೆ ಆರರ ಒಳಗಡೆ ಕೆಲಸ ಮುಗಿಸಿ ರೈಲ್ವೆ ಸ್ಟೇಷನ್ ಹತ್ತಿರ ಎಲ್ಲ ಸೇರಿ ಆಡಲು ಶುರು ಮಾದುತ್ತಿದ್ವಿ. ಎಲ್ಲಕ್ಕೂ ಗೋಪಾಲಣ್ಣನದೆ ಮುಂದಾಳುತನ. ಗೋಪಾಲಣ್ಣ ಏನಾದರೂ ಹೇಳಿದರೆ ಇಲ್ಲ ಎನ್ನುವ ಧೈರ್ಯ ನಮ್ಮ ಗುಂಪಿನಲ್ಲಿ ಯಾರಿಗೂ ಇರಲಿಲ್ಲ, ಯಾರಾದರೂ ಅಡ್ಡಗಾಲು ಹಾಕಿದರೂ, ಅವರನ್ನು ದಾರಿಗೆ ತರುವುದು ದೊಡ್ಡ ಕಷ್ಟದ ಕೆಲಸವೇನೂ ಆಗಿರಲಿಲ್ಲ, ನಮ್ಮ ಗೋಪಾಲಣ್ಣನಿಗೆ.


ಹೋದ ವರ್ಷ ಹೊಸ ಸರಕಾರ ಬಂದ ಮೇಲಂತೂ ಗೋಪಾಲಣ್ಣ ಆಡಿದ್ದೆ ಮಾತು. ನಮ್ಮ ಗ್ಯಾರೇಜಿನ ಹುಡುಗರಲ್ಲದೇ ಗೋಪಾಲಣ್ಣ ಇನ್ನು ಕೆಲವು ಹುಡುಗರಿಗೆ ಬೇರೆ ಬೇರೆ ಕೆಲಸ ಕೊಡಿಸಿದ್ದರು. ಅವರನ್ನೆಲ್ಲ ಸೇರಿಸಿಕೊಂಡು ಚುನಾವಣಾ ಸಮಯದಲ್ಲಿ ಸಹ ಸಾಕಷ್ಟು ಓಡಾಡಿ ನಮ್ಮ ಏರಿಯಾವೆಲ್ಲ ಅವರದೇ ಹಿಡಿತದಲ್ಲಿದೆಯೆಂಬ ನಂಬಿಕೆ ಶಾಸಕರಲ್ಲಿ ತಂದಿದ್ದರು. ಹಾಗಾಗಿ ಶಾಸಕರಿಗೆ ತುಂಬಾ ಹತ್ತಿರದವರು ಎಂದು ಎಲ್ಲರಲ್ಲೂ ಏನೋ ಒಂತರ ಹೆದರಿಕೆ ಇತ್ತು. ಆ ಸಮಯದಲ್ಲೇ ಎಲ್ಲ  ಹುಡುಗರನ್ನು ಸೇರಿಸಿ 'ಶ್ರೀ ಮಾರುತಿ ಹಿಂದೂ ಸಭಾ' ಎಂಬ ಹೊಸ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದರು. ಮಾರುತಿ ಸಂಘದ ಕಾರ್ಯವ್ಯಾಪ್ತಿಯೇನೋ ಬಲು ಸೀಮಿತವಾಗಿತ್ತು. ಪ್ರತಿ ಭಾನುವಾರ ಅವರ ವ್ಯಾಯಾಮ ಶಾಲೆಯಲ್ಲೇ ಸಭೆ ಸೇರುತ್ತಿದ್ದೆವು. ಅದು ಹೇಗೋ ಊರಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳ ವರದಿಗಳೂ ಗೋಪಾಲಣ್ಣನಿಗೆ ಎಲ್ಲರಿಗೂ ಮೊದಲೇ ತಿಳಿಯುತ್ತಿತ್ತು. ದಾರಿಯಲ್ಲಿ ಹೋಗುವ ಹೆಣ್ಣುಮಕ್ಕಳಿಗೆ ಚೇಡಿಸುವವರಿಗೆ, ಸಂಜೆ ಹೊತ್ತು ಕುಡಿದು ಜೋರಾಗಿ ರಂಪ ಮಾಡುವವರಿಗೆಲ್ಲ ಮಾರುತಿ ಸಂಘದ ಹೆದರಿಕೆ ನಿಧಾನವಾಗಿ ಹುಟ್ಟಲು ಶುರುವಾಗಿತ್ತು. ಹೆಚ್ಚಿನ ದಿನಗಳಲ್ಲಿ ನಮ್ಮ ಸಮಾಜ ಸೇವೆ ಮುಗಿದ ಮೇಲೆ ಗೋಪಾಲಣ್ಣ ಅವರದೇ ಖರ್ಚಲ್ಲಿ ಸಂಜೆ ಹೊಟ್ಟೆ ತುಂಬಾ ಕುಡಿಯಲು ವ್ಯವಸ್ಥೆ ಮಾಡಿಸುತ್ತಿದ್ದರು. ಹಾಗಾಗಿ ನಮ್ಮೆಲ್ಲರಿಗೆ 'ಸಮಾಜ ಸೇವೆಯ' ಮೇಲೆ ಸ್ವಲ್ಪ ಜಾಸ್ತಿಯೇ ಒಲವು ಶುರುವಾಗಿತ್ತು.


ಇವತ್ತು ಘಂಟೆ ಹನ್ನೊಂದಾದರೂ ಗ್ಯಾರೇಜಿನ ಹತ್ತಿರ ಗೋಪಾಲಣ್ಣನ ಸುಳಿವೇ ಇರಲಿಲ್ಲ, ಬೇರೆ ದಿನಗಳಲ್ಲಿ ಹತ್ತು ಘಂಟೆಯೊಳಗೆ ಒಮ್ಮೆಯಾದರೂ ಬಂದು ಮುಖ ತೋರಿಸಿ ಹೋಗುವವರು. ನಮ್ಮ ಪಾಡಿಗೆ ನಾವು ಕೆಲಸ ಮಾಡಿ ಕೊಂಡಿದ್ದೆವು. ಅಷ್ಟರಲ್ಲಿ ನನ್ನ ಮೊಬೈಲಿಗೆ ಕರೆ ಬಂದಿತು, ನೋಡಿದರೆ ಗೋಪಾಲಣ್ಣನದೆ. ಹಾಗೆಲ್ಲ ಕರೆ ಮಾಡುವವರಲ್ಲ ಅವರು. ಏನೋ ಅಗತ್ಯದ ಕೆಲಸವೇ ಇರಬೇಕು. 'ಕೃಷ್ಣ, ಬೇಗ ವ್ಯಾಯಾಮ ಶಾಲೆ ಹತ್ತಿರ ಬಂದು ಬಿಡು. ಹುಡುಗರ ಹತ್ತಿರ ಎಲ್ಲಿಗೆಂದು ಹೇಳೋದು ಬೇಡ. ಗ್ಯಾರೇಜ್ ಕಡೆ ಸ್ವಲ್ಪ ನೋಡಿಕೊಳ್ಳಲಿಕ್ಕೆ ಹೇಳು, ಬರುವುದು ಒಂದೆರಡು ಘಂಟೆ ಆಗಬಹುದು' ಅಂದರು. ಕೂಡಲೇ ಬೈಕ್ ಹಿಡಿದು ಹೊರಟೆ, ಹತ್ತು ನಿಮಿಷದ ದಾರಿಯಷ್ಟೇ ಗ್ಯಾರೇಜಿನಿಂದ. 


ವ್ಯಾಯಾಮ ಶಾಲೆ ಹತ್ತಿರ ಅವಾಗಲೇ ಎಲ್ಲ ಹುಡುಗರು ಸೇರಿದ್ದರು, ಹೆಚ್ಚು ಕಡಿಮೆ ಹತ್ತು ಜನರಿದ್ದರು.  'ಬಾ ಬಾ, ನಿನಗೊಸ್ಕರವೇ ಎಲ್ಲ ಕಾಯ್ತಾ ಇದ್ದೆವು' ಗೋಪಾಲಣ್ಣ ಸ್ವಲ್ಪ ಜಾಸ್ತಿಯೇ ಉತ್ಸಾಹದಿಂದಿದ್ದರು. 'ನಿಮಗೆಲ್ಲ ಈವಾಗಲೇ ಗೊತ್ತಿರಬಹುದು, ಇತ್ತೀಚಿಗೆ ನಮ್ಮ ಊರಿನಲ್ಲಿ ದನಗಳನ್ನು ಬೇರೆ ಕಡೆ ಮಾಂಸಕ್ಕಾಗಿ ಸಾಗಿಸುವುದು ಜಾಸ್ತಿಯಾಗಿದೆ.  ನಾವೆಲ್ಲಾ ಹೀಗೆ ಕೈ ಕಟ್ಟಿ ಕುಳಿತರೆ ಕೊನೆಗೆ ಹಾಲು ಕರೆಯಲಿಕ್ಕೆ ಒಂದು ದನ ಕೂಡ ಸಿಗುವುದೂ ಕಷ್ಟವಾಗುತ್ತದೆ. ಯಾರಾದರೂ ಒಬ್ಬರಿಗೆ ಈ ಹೀನ ಕೆಲಸ ಮಾಡುವಾಗ ನಾಲ್ಕು ತದುಕಿ ಬುಧ್ಧಿ ಕಲಿಸಿದರೆ, ಉಳಿದವರಿಗೆಲ್ಲ ಒಂದು ಪಾಠವಾಗುತ್ತದೆ'. ಗೋಪಾಲಣ್ಣ ಎಲ್ಲರನ್ನು ಕರೆಸಿದ್ದ ಕಾರಣ ಹೇಳುತ್ತಾ ಹೋದರು. 'ಹೌದು ಹೌದು, ಹೋದ ವಾರ ಆ ಅಬ್ದುಲ್ ಸಾಯಿಬರು ಎರಡು ಗುಡ್ಡ(ಗೂಳಿ) ಮತ್ತು ಒಂದು ದನ ಟೆಂಪೋದಲ್ಲಿ ಹಾಕಿಕೊಂಡು ಹೋಗುವುದನ್ನು ನಾನೇ ನೋಡಿದ್ದೆ. ಎಲ್ಲ ತೆಗೆದುಕೊಂಡು ಪೇಟೆಯ ಮಾಂಸಾಹಾರಿ ಹೋಟಲಿಗೆ ಮಾರುತ್ತಾರಂತೆ. ಗೋವುಗಳೆಂದರೆ ನಮ್ಮ ದೇವರೆಂಬ ಪ್ರಜ್ಞೆ ಸಹ ಇವರಿಗೆ ಇಲ್ಲ'. ನಾನು ಗೋಪಾಲಣ್ಣನಿಗೆ ಸಾಥ್ ನೀಡಲು ಹೋದೆ. ಅಬ್ದುಲ್ ಸಾಬಿಯನ್ನು ನೋಡಿದರೆ ನನಗೆ ಮೊದಲಿಂದಲೂ ಆಗುತ್ತಿರಲಿಲ್ಲ. ಪ್ರೈಮರಿ ಶಾಲೆಗೆ ಹೋಗುವಾಗ ಅವರ ಮನೆಯ ಹತ್ತಿರವೇ ಹೋಗಬೇಕಿತ್ತು. ಅವಾಗೆಲ್ಲ ಕೆಳಗಡೆ ಬಿದ್ದ ಅವರ ಮಾವಿನಮರದ ಹಣ್ಣು ಹೆಕ್ಕಿದರೂ ಕೋಲು ಹಿಡಿದುಕೊಂಡು ಬರುತ್ತಿದ್ದರು. ದೊಡ್ಡವರಾದ ಮೇಲೂ ಕೆಲವು ಬಾರಿ ಅವರೊಡನೆ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತಲೇ ಇತ್ತು. ಗೋಪಾಲಣ್ಣ ದನ ಸಾಗಾಣಿಕೆ ವಿಷಯ ತೆಗೆದಾಗ ಇವರ ಕುರಿತೇ ತೆಗೆದಿರಬಹುದೆಂದು ಯೋಚಿಸಿದ್ದೆ.  ಒಮ್ಮೆ ಕೈಗೆ ಸಿಕ್ಕಿದರೆ ಚೆನ್ನಾಗಿ ತದುಕಿ ಅವರ ಮೇಲಿನ ಸಿಟ್ಟನ್ನೆಲ ತೀರಿಸಿಕೊಳ್ಳಬೇಕಿತ್ತು.


'ಹೌದು ಹೌದು, ಇಂತಹವರದ್ದೆಲ್ಲ ಒಂದು ದೊಡ್ಡ ಗುಂಪೇ ಇದೆ, ನಾನು ಕೆಲವು ದಿನಗಳಿಂದ ಅದರ ಬಗ್ಗೆಯೇ ಯೋಚಿಸುತ್ತಿದ್ದೆ. ಆದರೆ ಯಾವುದೇ ಸರಿಯಾದ ಮಾಹಿತಿ ಇರದೇ ಸುಮ್ಮನಿದ್ದೆ. ಇವತ್ತು ಕೂಡ ನಮ್ಮೂರಿಂದ ಕೆಲವು ದನಗಳನ್ನು ಹಾಡು ಹಗಲೇ ಸಾಗಿಸುತ್ತಿದ್ದರೆಂಬ ಸುದ್ದಿ ನನಗೆ ಬಂದಿದೆ. ಅದೂ ಕೂಡ ನಮ್ಮದೇ ಕೋಮಿಗೆ ಸೇರಿದ ಪಾಟಲಿ ಅನಂತ ಎಂಬುವವನು. ನನಗೆ ಗೊತ್ತಿದ್ದ ಹಾಗೆ ಮಧ್ಯಾಹ್ನ ಹನ್ನೆರಡು-ಹನ್ನೆರಡುವರೆಗೆ ಅವನ ಗಾಡಿ ಏರು ರಸ್ತೆ ಹತ್ತಿರ ಬರಬಹುದು. ಜನರ ಓಡಾಟ ಸಹ ಕಮ್ಮಿಯೇ ಇರುತ್ತದೆ. ಕೈ ಕಾಲು ಮುರಿಯುವ ಹಾಗೆ ಒಮ್ಮೆ ಬಾರಿಸಿದರೆ ಇನ್ಯಾರು ಸಹ ಮುಂದೆ ನಮ್ಮೂರಿನಲ್ಲಿ ದನ ಸಾಗಿಸೋ ಕೆಲಸ ಮಾಡುವುದಿಲ್ಲ' ಗೋಪಾಲಣ್ಣ ಎಲ್ಲ ಪ್ಲಾನ್ ಮಾಡಿಕೊಂಡೆ ಬಂದಿದ್ದರು. ನಮ್ಮ ಗುರಿ ಅಬ್ದುಲ್ ಸಾಬಿ ಅಲ್ಲ ಅಂದ ಕೂಡಲೇ ನನ್ನ ಉತ್ಸಾಹವೆಲ್ಲ ಒಮ್ಮೆಲೇ ಇಳಿಯಿತು. ಅದು ಬೇರೆ ಅನಂತಣ್ಣನನ್ನು ಒಂದೆರಡು ಬಾರಿ ನೋಡಿದ ನೆನಪು. ಅಮ್ಮನಿಗೆ ಸ್ವಲ್ಪ ಒಳ್ಳೆಯ ಪರಿಚಯವಿದ್ದವರು ಬೇರೆ. ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಹಾಗಾಯಿತು. ನಿದಾನವಾಗಿ ಹೇಳಿದೆ, 'ಅನಂತಣ್ಣನಿಗೆ ಹೊಡೆಯುವುದು ಅಷ್ಟು ಸರಿ ಕಾಣುವುದಿಲ್ಲ ನನಗೆ, ನಮ್ಮದೇ ಕೋಮಿನವರು ಬೇರೆ, ಅದು ಬೇರೆ ಜಾತಿಯಲ್ಲಿ ಬ್ರಾಹ್ಮಣರು. ಅವರಿಗೆ ಹೊಡೆಡದು ಗೊತ್ತಾದರೆ ಊರಲ್ಲಿ ಎಲ್ಲ ನಮ್ಮೆದುರು ಬೀಳಬಹುದು. ಇನ್ನು ಸ್ವಲ್ಪ ದಿನ ಬಿಟ್ಟರೆ ಅಬ್ದುಲ್ ಸಾಬಿಯೇ ದನ ತೆಗೆದುಕೊಂಡು ಹೋಗುವಾಗ ಸಿಗಬಹುದು'. ಕೆಲವರು ತಲೆಯಾಡಿಸಿದರು, ನನ್ನ ಮಾತು ಸ್ವಲ್ಪ ಸರಿಯೆನ್ನಿಸಿತಿರಬೇಕು. 'ನಾನು ಅದೆಲ್ಲ ಆಲೋಚಿಸಿಯೇ ಈ ನಿರ್ಧಾರಕ್ಕೆ ಬಂದಿರುವುದು. ನಮ್ಮ ಮುಖ್ಯ ಉದ್ದೇಶ ಈ ದನ ಸಾಗಣಿಕೆ ತಡೆಯುವುದು ಮಾತ್ರ. ಆದರೆ ಅದಕ್ಕೆ ಅಬ್ದುಲ್ ಸಾಬಿಯನ್ನು ಹೊಡೆದರೆ ಸುಮ್ಮನೆ ರಾಜಕೀಯ ಮೈಗೆ ಎಳೆದುಕೊಂಡ ಹಾಗೆ ಆಗುತ್ತೆ. ಸುಮ್ಮನೆ ಕೋಮು ಗಲಭೆ ಎಲ್ಲ ಸೃಷ್ಟಿಸಿ ಇಲ್ಲ ಸಲ್ಲದ್ದು ಮಾಡುವುದು ಬೇಡ. ಅಲ್ಲದೆ ಈ ಅನಂತ ಏನೂ ಪೂಜೆ ಮಾಡುವ ಭಟ್ಟರ ಜಾತಿ ಅಲ್ಲ, ಬ್ರಾಹ್ಮಣರಲ್ಲಿ ಯಾವುದೋ ತುಂಬಾ ಕೆಳ ಜಾತಿ. ಅದೂ ಬೇರೆ ನಮ್ಮ ಕೊಮಿನವರಾಗಿ ಪೂಜೆ ಮಾಡೋ ದನವನ್ನು ಕೊಲ್ಲುವುದು ಮಹಾ ಪಾಪ. ಕಳೆದ ವಾರ ಗದ್ದೆಯಲ್ಲಿ ಮೇಯುತ್ತಿದ್ದ ನಮ್ಮ ಮನೆಯ ಗುಡ್ಡವನ್ನು ಯಾರಿಗೂ ಗೊತ್ತಾಗದ ಹಾಗೆ ಸಾಗಿಸಲು ನೋಡುತ್ತಿದ್ದನಂತೆ. ಮತ್ತೆ ಸುದ್ದಿ ತಿಳಿದು ದಬಾಯಿಸಿದ ಮೇಲೆ ಸುಳ್ಳು ಹೇಳಿ ತಪ್ಪಿಸಿಕೊಂಡ. ಹಾಗಾಗಿ ಅವನಿಗೆ ಬುಧ್ಧಿ ಕಲಿಸುವುದೇ ಸಮ. ಅದೂ ಬೇರೆ ಈ ಸಮಯದಲ್ಲಿ ಅಲ್ಲಿ ಯಾವ ನರಪಿಳ್ಳೆಯೂ ಇರುವುದಿಲ್ಲ. ಮುಖಕ್ಕೆ ಒಂದು ಬಟ್ಟೆ ಹಾಕಿಕೊಂಡರೆ ಯಾರಿಗೂ ತಿಳಿಯುವುದಿಲ್ಲ ಇದು ನಮ್ಮ ಕೆಲಸವಂತ. ಹಾಗೊಮ್ಮೆ ತಿಳಿದರೂ ಹೆದರುವ ಅಗತ್ಯವೇನೂ ಇಲ್ಲ. ಇಲ್ಲಿನ ಸಬ್ ಇನ್ಸ್ ಪೆಕ್ಟರ್ ನನಗೆ ಒಳ್ಳೆಯ ಪರಿಚಯದವೆರೆ'. ಗೋಪಾಲಣ್ಣ ಎಲ್ಲ ಪ್ರಶ್ನೆಗಳಿಗೆ ಮೊದಲೇ ಉತ್ತರ ಸಿಧ್ಧಪಡಿಸಿಕೊಂಡ ಹಾಗಿತ್ತು. ಅವರೊಡನೆ ಮಾತನಾಡಿ ಗೆಲ್ಲುವುದು ನಮ್ಮಲ್ಲಿ ಯಾರಿಗೂ ಸಾಧ್ಯವಿರಲಿಲ್ಲ. ಮುಂದೆ ಮಾತನಾಡದೆ ಸುಮ್ಮನಾದೆ. ಯಾರಿಗಾದರೂ ಇನ್ನೇನಾದರು ಪ್ರಶ್ನೆ ಇದ್ದರೆ ಹೇಳಿ. ನಮ್ಮ ಸಂಘದಲ್ಲಿ ಏನೂ ಮಾಡುವುದಿದ್ದರೂ ನಿಮ್ಮೆಲ್ಲರ ಒಪ್ಪಿಗೆ ಪಡೆದೆ ಮಾಡುವುದು'. ಗೋಪಾಲಣ್ಣನ ಮಾತಿಗೆ ಎಲ್ಲರದೂ ಸಮ್ಮತ ಕಂಡು ಬಂದಿತು.


ಗೋಪಾಲಣ್ಣ ಒಂದು ವಾರದಿಂದ ಇದಕ್ಕಾಗಿ ಕಾಯುತ್ತಿದ್ದರನಿಸುತ್ತದೆ. ಎಲ್ಲ ಸಿಧ್ಧತೆ ಮಾಡಿಕೊಂಡೆ ನಮ್ಮನ್ನೆಲ್ಲ ಬರಹೇಳಿದ್ದರು. ಮೂಲೆಯಲ್ಲಿ ಕೆಲ ಹಾಕಿ ದಾಂಡುಗಳು ಬಿದ್ದಿದ್ದವು. ನಿನ್ನೆ ಅವನ್ನೆಲ್ಲ ನೋಡಿದ ನೆನಪು ಬರಲಿಲ್ಲ. ಮತ್ತೆ ಸ್ವಲ್ಪ ಹೊತ್ತು ಅದು ಇದು ಮಾತನಾಡಿ ಎಲ್ಲ ಹೊರಟೆವು, ಎರಡು ಮಾರುತಿ ವ್ಯಾನ್ ಗಳಲ್ಲಿ. ಎಲ್ಲರು ಒಂದೊಂದು ಹಾಕಿ ದಾಂಡು ಹಿಡಿದಿದ್ದರು. ಇಷ್ಟು ದಿನ ಬರಿ ಕೈಯಲ್ಲಿ ಹೊಡೆಯುವುದೋ, ಅಥವಾ ಬಾಯಲ್ಲಿ ಗದರಿಸುವುದೋ ಮಾಡುತ್ತಿದ್ದೆವು. ನನ್ನ ಕೈ ನಿಧಾನವಾಗಿ ನಡುಗುತ್ತಿದ್ದರೆ, ಉಳಿದವರಿಗೆ ಏನೋ ಮೇಲ್ಮಟ್ಟಕ್ಕೆ ಏರಿದ ಅನುಭವ . ಹನ್ನೆರಡು ಘಂಟೆಗೆ ಸರಿಯಾಗಿ ಏರು ರಸ್ತೆಯ ಬಳಿ ಬಂದು, ಅಲ್ಲೇ ಮರದ ಹತ್ತಿರ ಗಾಡಿ ನಿಲ್ಲಿಸಿ ರಸ್ತೆಗೆ ಕಲ್ಲು ಹಾಕಿ ಕಾಯುತ್ತ ನಿಂತೆವು. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ, ಬಿಸಿಲು ಜೋರಾಗಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ  ಕೆಳಗಡೆ ಇಳಿಜಾರಿನಲ್ಲಿ ಯಾವುದೇ ಚಿಕ್ಕ ಸಾಮಾನಿನ ಗಾಡಿ ಬಂದಂತನಿಸಿತು. ಗೋಪಾಲಣ್ಣ ಕೂಡಲೇ ಕಾರ್ಯಪ್ರವ್ವತ್ತರಾದರು. 'ಎಲ್ಲ ರೆಡಿಯಾಗಿ, ಅದು ಆ ಬೊ... ಮಗನದೇ ಗಾಡಿ' ವ್ಯಾನ್ ನಿಂದ ಇಳಿದು ರಸ್ತೆಯತ್ತ ನಡೆದರು. ಪ್ಯಾಂಟಿನಲ್ಲಿದ್ದ ದೊಡ್ಡ ಕರವಸ್ತ್ ತೆಗೆದು ಸ್ವಲ್ಪ ಮುಖ ಮರೆಯಾಗುವ ಹಾಗೆ ಕಟ್ಟಿಕೊಂಡೆ.  


ಅನಂತಣ್ಣನ ಗಾಡಿ ಏರು ಹತ್ತಿದ ಕೂಡಲೇ ನಿಂತಿತು. ಅವರೇ ಕೆಳಗಡೆ ಇಳಿದುದು ಕಾಣಿಸಿತು, ಬಹುಶ ರಸ್ತೆಯಲ್ಲಿದ್ದ ಕಲ್ಲುಗಳನ್ನು ಸರಿಸಲು ನೋಡಿದರು ಅನ್ನಿಸುತ್ತದೆ. ಇನ್ನೊಂದು ಕಡೆಯಿಂದ ಬರುತ್ತಿದ್ದ ನಮ್ಮ ಗುಂಪನ್ನು ನೋಡಲಿಲ್ಲ. ಚಾಲಕ ನಮ್ಮನ್ನು ನೋಡಿ ಗಾಬರಿ ಬಿದ್ದು ಕೂಗಿ ಕೊಳ್ಳ ತೊಡಗಿದ. ಅಷ್ಟರಲ್ಲಿ ಹುಲಿಯಂತೆ ಓಡಿ ಗೋಪಾಲಣ್ಣ ಹಿಂದಿನಿಂದ ಒಂದು ಬಲವಾದ ಏಟನ್ನು ಹಾಕಿದ್ದರು, ಅನಂತಣ್ಣನ ಬೆನ್ನಿಗೆ. ಒಂದಿಬ್ಬರು ಚಾಲಕನನ್ನು ಕೆಳಗೆಳೆದು ನಾಲ್ಕೇಟು ಬಿಗಿದು ಬಾಯಿ ಮುಚ್ಚಿ ನಿಲ್ಲಲು ಸೂಚಿಸಿದರು. ಹಿಂದಿನಿಂದ ಬಿದ್ದ ಬಲವಾದ ಪೆಟ್ಟಿಗೆ ಸಾವರಿಸಿಕೊಳ್ಳಲು ಅನಂತಣ್ಣನಿಗೆ ಆಗಲಿಲ್ಲ. ಪೆಟ್ಟಿಗಿಂತ ಹೆಚ್ಚಾಗಿ ಎಣಿಸದ  ಘಟನೆಯ ಆಘಾತವೇ ಹೆಚ್ಚಾಗಿತ್ತನಿಸುತ್ತದೆ. ಬೀಳುತ್ತಿದ್ದ ಅವರ ಶರ್ಟಿನ ಕಾಲರ್ ಹಿಡಿದು ಎಳೆಯುತ್ತಿದ್ದ ಗೋಪಾಲಣ್ಣನ ಮುಖದಲ್ಲಿ ರೋಷ ಮನೆ ಮಾಡಿತ್ತು. 'ಬೊ.. ಮಗನೆ, ದನ ಸಾಗಿಸಿ ಮಾಂಸಕ್ಕಾಗಿ ಮಾರುತ್ತೀಯ. ಅದು ಸಾಲದೇ ನಮ್ಮ ಮನೆ ಆಕಳಿಗೆ ಕೈ ಹಾಕ್ತೀಯ. ಹೋದ ವಾರ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಿಯಲ್ಲ, ಈಗ ಮಾತಾಡು ಬೊ..ಮಗನೆ'. ಮಾತನಾಡಲು ಹೊರಟ ಅನಂತಣ್ಣನಿಗೆ ಮಾತಾಡುವ ಅವಕಾಶವನ್ನೇ ಕೊಡದೆ 'ಕೃಷ್ಣ, ಗಾಡಿಯಲ್ಲಿರೋ ದನಗಳನ್ನೆಲ್ಲ ಬೇಗ ಬಿಚ್ಚಿ ಬಿಡು,  ಎಲ್ಲ ಸೇರಿ ಹಾಕಿರೋ ಬೊ.. ಮಗನಿಗೆ, ಇನ್ನು ಮೇಲೆ ಇವನು ಇಂತಹ ಹಲ್ಕಾ ಕೆಲಸಕ್ಕೆ ಕೈ ಹಾಕಬಾರದು, ಹಾಗೆ ಮಾಡಿ'. ಗೋಪಾಲಣ್ಣನ ಮಾತು ಮುಗಿಯುವ ಮುಚೆಯೇ ನಾಲ್ಕೈದು ಬಲವಾದ ಏಟು ಬಿತ್ತು, ಬೆನ್ನಿಗೆ ಹೆಗಲಿಗೆ ಎಲ್ಲ ಕಡೆ. ನೋವಿನಿಂದ ಅನಂತಣ್ಣ ಕೂಗಲು ಶುರುಮಾಡಿದರು. ನಾನು ಗಾಡಿಯ ಹಿಂದೆ ಹೋಗಿ ಕಟ್ಟಿದ ದನಗಳನ್ನು ಬಿಚ್ಚಲು ಹೋದೆ. ಒಂದನ್ನೆಲ್ಲೋ ನೋಡಿದ ನೆನಪಾಯಿತು, ನಮ್ಮ ಮನೆಯದ್ದೆ ಅನಿಸಿತು. ನಾನು ಕೊಟ್ಟಿಗೆಗೆ ಹೋಗುವುದೇ ಅಪರೂಪ, ಹಾಗಾಗಿ ನಮ್ಮ ದನದ ಪರಿಚಯವೇ ಸರಿಯಾಗಿರಲಿಲ್ಲ. ಗೋಪಾಲಣ್ಣ ಹೇಳಿದ ಹಾಗೆ ನಮ್ಮ ಮನೆಯ ದನವನ್ನೂ ಕದ್ದು ಬಂದಿರುವನೆ ಅನಿಸಿತು. ಕೈಯಲ್ಲಿದ್ದ ಹಾಕಿ ದಾಂಡು ಇದು ತನಕ ಸುಮ್ಮನಿತ್ತು. ಮೊದಲ ಬಾರಿ ಹಾಕಿ ದಾಂಡು ಕೈಯಲ್ಲಿ ಸೇರಿದ್ದ ಉಳಿದವರೆಲ್ಲ ಮನಸಾರೆ ಎತ್ತಿ ಅದರ ಆನಂದ ಪಡೆಯುತ್ತಿದ್ದರು. ಅದನ್ನು ಕೈಯಲ್ಲಿ ಹಿಡಿದಾಗಲೇ ಏನೋ ವಿಚಿತ್ರ ಅನುಭೂತಿಯಾಗಿತ್ತು. ಲೋಕದ ತಪ್ಪನ್ನೆಲ್ಲ ತಿದ್ದುವ ಸಾಮರ್ಥ್ಯ ನಮಗೆ ಮಾತ್ರ ಇದೆ ಅನ್ನುವ ಅಹಂ. ಗಾಡಿಯ ಹಿಂದುಗಡೆ ದನಗಳನ್ನು ನೋಡಿದ ಮೇಲೆ ನನಗೂ ತಡೆಯಲಾಗಲಿಲ್ಲ, ಅನಂತಣ್ಣ ನೋವಿನ  ಕೂಗು ನನ್ನ ಕಿವಿಯಿಂದ ಮರೆಯಾಯಿತು. ಆ ನೋವು ನನ್ನ ಮನಸ್ಸಿಗೆ ವಿಕೃತ ಆನಂದ ನೀಡತೊಡಗಿತು. ಹಾಕಿ ದಾಂಡು ಮೇಲೆತ್ತಿ ಬಲವಾಗಿ ಅನಂತಣ್ಣನ ಭುಜಕ್ಕೆ ಒಂದೇಟು ಹಾಕಿದೆ. ಅದಾಗಲೇ ಮೂರು ಜನರ ಹಾಕಿ ದಾಂಡು ಸಹ ಮೇಲೆ ಹೋಗಿತ್ತು. ಭುಜಕ್ಕೆ ಬಿದ್ದ ಏಟಿಗೆ ಅನಂತಣ್ಣ ಒಂದು ಬದಿಗೆ  ಕುಸಿದರು. ಉಳಿದವರು ಅದನ್ನು ನಿರೀಕ್ಷಿಸಿರಲಿಲ್ಲ ಅನಿಸುತ್ತೆ, ಸಮಯ ಮೀರಿತ್ತು. ಮೂರು ಬಲವಾದ ಏಟುಗಳು ಅವರ ತಲೆಯ ಮೇಲೆಯೇ ಬಿತ್ತು.


ರಕ್ತ ಚಿಲ್ಲನೆ ಚಿಮ್ಮಿತು, ಅನಂತಣ್ಣನ ತಲೆಯಿಂದ. ಎಲ್ಲರಿಗೂ ಒಮ್ಮೇಲೆ ಗಾಬರಿಯಾಯಿತು. ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ, ಗೋಪಾಲಣ್ಣನು ಗಾಬರಿ ಬಿದ್ದರು. ನಾಲ್ಕೇಟು ಹಾಕಿ ಹೋಗುವುದು ಮಾತ್ರ ನಮ್ಮ ಯೋಜನೆಯಾಗಿತ್ತು, ಈಗ ನೋಡಿದರೆ ಅವರ ತಲೆಯಲ್ಲಿ ರಕ್ತ ಸುರಿಯುತ್ತಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿದರೆ ಪೋಲಿಸ್ ಕೇಸಾಗುವುದು ಗ್ಯಾರಂಟಿ. ಬೇಡದ ಉಸಾಬರಿ ಎನಿಸಿತು. ಎಲ್ಲರ ಮುಖ ಹೆದರಿಕೆಯಿಂದ ಬಿಳಿಚಾಗಿತ್ತು, ಏನು ಮಾಡುವುದೆಂದು ಯಾರಿಗೂ ತೋಚಲಿಲ್ಲ. ಗೋಪಾಲಣ್ಣನೆ ಬೇಗ ವಾಸ್ತವಕ್ಕೆ ಬಂದರು. ಚಾಲಕನನ್ನು ಕರೆದು ಬೇಗನೆ ಅನಂತಣ್ಣನನು ಆಸ್ಪತ್ರೆಗೆ ಕೊಂಡೊಯ್ಯಲು ಹೇಳಿದರು. ಯಾರ ಹತ್ತಿರವಾದರೂ ನಮ್ಮ ವಿಷಯ ಬಾಯಿ ಬಿಟ್ಟರೆ ನಿನಗೂ ಇದೆ ಗತಿ ಎಂದು ಎಚ್ಚರಿಸಿಯೇ ಕಳಿಸಿದರು. ಎಲ್ಲ ತಡ ಮಾಡದೆ ವ್ಯಾನ್ ನಲ್ಲಿ ಕುಳಿತು ವಾಪಸ್ ತೆರಳಿದೆವು.


ವಾಪಸ್ ಗ್ಯಾರೇಜಿಗೆ ಬಂದರೂ ಕೂಡ ತಲೆ ಎಲ್ಲ ಮಧ್ಯಾಹ್ನದ ಘಟನೆಯ ಮೇಲೆಯೇ ಇತ್ತು. ಉಳಿದ ಹುಡುಗರ ಹತ್ತಿರ ಏನೂ ಬಾಯಿ ಬಿಟ್ಟಿರಲಿಲ್ಲ. ಮನದಲ್ಲೆಲ್ಲ ಭಯ ಆವರಿಸಿಕೊಂಡಿತ್ತು. ಎಲ್ಲಾದರೂ ಅನಂತಣ್ಣ ಪೊಲೀಸರಲ್ಲಿ ಬಾಯಿ ಬಿಟ್ಟರೆ ಗತಿ ಏನು ಎಂದು. ಅಮ್ಮನಿಗೆ ಗೊತ್ತಾದರೆ ಮನೆಯಿಂದಲೇ ಓಡಿಸಿಯಾರು. ದೇವರೇ, ಯಾರಿಗೂ ಗೊತ್ತಾಗದಿರಲಿ ಗೊತ್ತಾಗದಿರಲಿ ಎಂದು ಮಧ್ಯಾಹ್ನವೆಲ್ಲ ಪ್ರಾರ್ಥಿಸುತ್ತ ಕುಳಿತೆ. ಸಂಜೆ ಮನೆಗೆ ಹೋಗುವ ಮುಂಚೆ ಒಮ್ಮೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೋದೆ.  


ಮನೆ ಹತ್ತಿರ ಬರುತ್ತಿದಂತೆಯೇ ಅಮ್ಮನ ಸ್ವರ ಜೋರಾಗಿ ಕೇಳಿಸುತ್ತಿತ್ತು. ಅಮ್ಮ ಅಷ್ಟು ಕೋಪದಲ್ಲಿ ಇದ್ದದ್ದನ್ನು ಮುಂಚೆ ನೋಡಿರಲಿಲ್ಲ. ಮಧ್ಯಾಹ್ನ ಬಿಡಿಸಿದ ಅದೇ ದನ ಪಕ್ಕದಲ್ಲಿದ್ದ ಮರದ ಕಟ್ಟೆಯ ಹತ್ತಿರ ಸುತ್ತುತ್ತಿತ್ತು. 'ಬೋ.. ಮಕ್ಕಳು, ಅನ್ಯಾಯವಾಗಿ ದೇವರಂತ ಮನುಷ್ಯನನ್ನು ಕೊಂದು ಹಾಕಿದರು, ತಲೆಗೆ ಬಿದ್ದ ಪೆಟ್ಟಿಗೆ ಆಸ್ಪತ್ರೆಗೆ ಹೋಗುವ ಮೊದಲೇ ಪ್ರಾಣ ಹೋಗಿತ್ತಂತೆ. ಬೆಳಿಗ್ಗೆಯಷ್ಟೇ ಅರ್ಧ ಘಂಟೆ ನನ್ನ ಹತ್ತಿರ ಸುಖ ಕಷ್ಟ ಮಾತಾಡಿದ್ದರು. ನಿಮಗೆ ಗೊತ್ತಲ್ಲ, ಈ ಗೊಡ್ಡು ದನ ಮೂರು ವರ್ಷದಿಂದ ಕರು ಹಾಕಿರಲಿಲ್ಲ, ನಾನಾದರೂ ಎಷ್ಟು ದಿನ ಅಂತ ಇದರ ಚಾಕರಿ ಮಾಡುವುದು, ಹಾಗಾಗಿ ತಗೊಂಡು ಯಾರಿಗಾದರೂ ಕೊಡಿ ಅಂತ ಅನಂತಯ್ಯನ ಹತ್ತಿರ ಹೇಳಿದ್ದೆ. ಬೇಡ ಬೇಡ ಅಂದರೂ  ಗೊಡ್ಡು ದನಕ್ಕೆ ಇನ್ನೂರು ರುಪಾಯಿ ಕೊಟ್ಟಿದ್ದರು. ಈಗ ಈ ದನ ಸಹ ವಾಪಾಸು ಬಂದಿದೆ. ಅಯ್ಯನ ಹತ್ತಿರ ಹಣವೂ ತಗೊಂಡು ದನವನ್ನು ಕೊಡದಿದ್ದರೆ ಪಾಪ ತಟ್ಟದೆ ಇರುತ್ತದ ನನಗೆ' ಪಕ್ಕದ ಮನೆಯ ಗುಬ್ಬಕ್ಕನಲ್ಲಿ ಅಮ್ಮ ಅವಳ ಗೋಳು ಹೇಳಿಕೊಳ್ಳುತ್ತಿದ್ದಳು. 'ಬೆಳಿಗ್ಗೆ ಸೌದೆಗೆ ಹೋದಾಗ ಎರಡು ಕಾರಲ್ಲಿ ಸ್ವಲ್ಪ ಜನ ಬಂದು ಏರು ರಸ್ತೆ ಹತ್ತಿರ ಕಲ್ಲು ಹಾಕುವುದು ನೋಡಿದೆ, ಗ್ಯಾರೇಜ್ ಗೋಪಾಲನ ನೋಡಿದ ಹಾಗಾಯಿತು, ನನಗೂ ಸರಿಯಾಗಿ ಕಣ್ಣು ತೋರುವುದಿಲ್ಲ' ಗುಬ್ಬಕ್ಕ ಏನೋ ಜ್ಞಾಪಿಸಿಕೊಂಡು ಹೇಳಿದಳು. ಅಮ್ಮನಿಗೆ ಕೂಡಲೇ ಏನೋ ಹೊಳೆದಂತಾಯಿತು. 'ಆ ಬೋ..ಮಗನೆ ಹೊಡೆದು ಹಾಕಿದ್ದರೂ ಇರಬಹುದು, ಇತ್ತೀಚೆಗಂತೂ ಅವನ ಕಾಲು ಭೂಮಿ ಮೇಲೆ ನಿಲ್ಲುತ್ತಾನೆ ಇಲ್ಲ. ಅನಂತಯ್ಯನೆ  ಹೇಳುತ್ತಿದ್ದರು. ಹೋದ ವಾರ ಗೋಪಾಲನ ಅಮ್ಮ ಬರಲು ಹೇಳಿದ್ದರಂತೆ, ಅವರ ಮನೆಯ ಗುಡ್ಡವನ್ನು ತೆಗೆದುಕೊಂಡು ಹೋಗಲು. ನಿಮಗೆ ಗೊತ್ತಲ್ಲ, ಉಳಿದವರ ಹಾಗೆ ಅನಂತಯ್ಯ ಹಾಗೆಲ್ಲ ಗೋವುಗಳನ್ನು ಮಾಂಸದ ಅಂಗಡಿಗೆ ಹಣಕ್ಕಾಗಿ ಮಾರುವರಲ್ಲ. ಎಲ್ಲೋ ದೂರ ತೆಗೆದುಕೊಂಡು ಹೋಗಿ ಆ ಕಡೆ ಸಾಕುವವರಿಗೆ ಕೊಡುತ್ತಾರಂತೆ. ಹಾಗಾಗಿ ಹಾಲು ಕೊಡುವ ದನಗಳಿಗೆ ಮಾತ್ರ ಅವರು ಹಣ ಕೊಡುವುದು. ಆದರೆ ಈ ಗೋಪಾಲ ಹಣ ಕೊಟ್ಟು ತಗೊಂಡು ಹೋಗು ಅಂತ ಗಲಾಟೆ ಶುರು ಮಾಡಿ ಹೊಡೆಯಲು ಹೋಗಿದ್ದನಂತೆ. ಸುಮ್ಮನೆ ಗಾಡಿ ಬಾಡಿಗೆ ಹಾಳಾದ್ದು ನೋಡಿ ಸಿಟ್ಟಲ್ಲಿ ಇವರು ಕೂಡ ಸರಿಯಾಗಿ ಮಂಗಳಾರತಿ ಮಾಡಿ ಬಂದಿದ್ದರಂತೆ. ಅದೇ ಹಟದಲ್ಲಿ ಹೊಡೆಸಿ ಕೊಂದಿರಲೂ ಬಹುದು, ಈ ಗೋಪಾಲ ಅದಕ್ಕೆಲ್ಲ ರೆಡಿಯಾದವನೇ. ನಾಯಿಯಾಗಿ ಹುಟ್ಟುತ್ತಾನೆ ಇನ್ನೊಂದು ಜನ್ಮದಲ್ಲಿ, ಬೋ..ಮಗ'.


ಅಮ್ಮನ ಕೋಪ ಇಳಿಯುತ್ತಲೇ ಇರಲಿಲ್ಲ, ನಾನು ಒಳ ಹೋಗುವುದು ನೋಡಿದರು 'ಇವನು ಸಹ ಯಾವಾಗಲೂ ಅವರೊಟ್ಟಿಗೆ ಇರುತ್ತಾನೆ, ಸಾವಿರ ಸಲ ಹೇಳುತ್ತೇನೆ, ಅವರ ಹತ್ತಿರ ಎಲ್ಲ ಸೇರಬೇಡ. ಕೆಲಸ ಬಿಟ್ಟು ಸೀದಾ ಮನೆಗೆ ಬಾ ಅಂದು. ಕೇಳಬೇಕಲ್ಲ ಮೀಸೆ ಬಂದ ಮೇಲೆ ನಮ್ಮ ಮಾತನ್ನು. ಒಂದು ದಿನ ಬೇರೆ ಯಾರೋ ಬಂದು ನಾಯಿಯ ಹಾಗೆ ಹೊಡೆದು ರಸ್ತೆ ಬದಿ ಹಾಕುತ್ತಾರೆ, ಆವಾಗ ಮಾತ್ರ ಇವಕ್ಕೆಲ್ಲ ಬುಧ್ಧಿ ಬರುವುದು. ಬ್ರಾಹ್ಮಣರ ಶಾಪ ಯಾರಿಗೂ ತಟ್ಟದೆ ಇರುವುದಿಲ್ಲ. ನೋಡುತ್ತಾ ಇರಿ, ಈ ಗೋಪಾಲ ಸಹ ನಿಮ್ಮ ಕಣ್ಣೆದುರೇ ಮಾಡಿದ್ದನ್ನೆಲಾ ಅನುಭವಿಸುತ್ತಾನ ಇಲ್ಲವ ಎಂದು. ಇವತ್ತೀಗ ದುಡ್ಡು ಕೊಟ್ಟು ಆ ಪೋಲೀಸರ ಬಾಯಿ ಮುಚ್ಚಬಹುದು, ಆ ದೇವರ ಬಾಯಿ ಹೇಗೆ ಮುಚ್ಚುತ್ತಾರೆ ನಾನೂ ನೋಡುತ್ತೇನೆ'. ಅಮ್ಮನ ಕೋಪ ನಿಲ್ಲುವ ಸೂಚನೆ ಇರಲಿಲ್ಲ. ಸುಮ್ಮನೆ ಪ್ರತಿಕ್ರಿಯಸದೆ ಒಳ ನಡೆದೇ. ಅನಂತಣ್ಣ ಸತ್ತದ್ದಕ್ಕೆ ದುಃಖವಾಯಿತೋ, ಇಲ್ಲ ನಮ್ಮ ವಿಷಯ ಹೊರಬಂದಿಲ್ಲವೆಂದು ಖುಷಿಯಾಯಿತೋ ತಿಳಿಯಲಿಲ್ಲ.

Saturday, March 10, 2012

ಹರಕೆ

ಈ ಬಾರಿ ಊರಿಗೆ ಹೋದವನಿಗೆ ಯಾವ ಮದುವೆ ಊಟವೂ ಸಿಕ್ಕಿರಲಿಲ್ಲ. ಸಂಜೆಯ ಹೊತ್ತು ಅಮ್ಮನಲ್ಲಿ ಅದನ್ನೇ ಹೇಳುತ್ತಿದ್ದೆ. ಅದಕ್ಕೆ ಕಾಯುತ್ತಿದಂತೆ ಅಮ್ಮ ಶುರು ಮಾಡಿದಳು..'ಕುರಿ ಪೂಜೆ ಹೇಳಿ ವರ್ಷ ಐದು ಮೇಲಾಯಿತು. ಇನ್ನೂ ನಿನ್ನ ಅಣ್ಣನಿಗೆ ಸಮಯ ಬರಲಿಲ್ಲ. ದೇವರ ಕೆಲಸ ಎಲ್ಲ ಹಾಗೆ ಎಷ್ಟು ದಿನ ಅಂತ ಬಾಕಿ ಇಟ್ಟುಕೊಳ್ಳುವುದು. ನಾನು ಹಣ ಕೊಡ್ತೇನೆ ಹೇಳಿದರೂ  ಹಮ್ಮಿಸಿಕೊಳ್ಳಳಿಕ್ಕೆ ಇವರಿಗೆ ಏನು ದಾಡಿಯೋ'. ಅಣ್ಣನಿಗೂ ಕೇಳಿ ಕೇಳಿ ಬೇಜಾರಾಗಿತ್ತು ಅನ್ನಿಸುತ್ತೆ..ಸುಮ್ಮನೆ ಒಪ್ಪಿಕೊಂಡ. ಮತ್ತೆ ನೋಡುವಾಗ ಮೂರು ಕುರಿ ಪೂಜೆ ಬಾಕಿ ಇತ್ತಂತೆ..ಒಂದು ಅಪ್ಪ ಹೇಳಿಕೊಂಡದ್ದು..ಏಕೆ, ಏನು ಅಂತ ಯಾರಿಗೂ ಗೊತ್ತಿಲ್ಲ. ಹೇಳಿಕೊಂಡಿದ್ದಾರೆ ಅಂತ ಹೇಗೆ ಗೊತ್ತಾಯಿತೋ ನನಗೆ ತಿಳಿಯಲಿಲ್ಲ. ಇನ್ನೆರಡೂ ಅಣ್ಣ ಹೇಳಿಕೊಂಡದ್ದು. ಒಂದು ಅಕ್ಕನ ಮದುವೆ ಸಮಯದಲ್ಲಂತೆ. ಇನ್ನೊಂದು ನಮ್ಮ ಶಿಲೆಕಲ್ಲು ವ್ಯವಹಾರ ಸ್ವಲ್ಪ ಸಂಕಷ್ಟದಲ್ಲಿದ್ದಾಗ. ಅಮ್ಮ ಹೇಳುವಂತೆ ಎರಡೂ ಬಾರಿ ಚಾಮುಂಡೇಶ್ವರಿ ಹರಿಕೆ ಪಡೆದುಕೊಂಡು ಒಳ್ಳೆ ರೀತಿಯಲ್ಲಿಕೇಳಿದ್ದನ್ನು ನಡೆಸಿಕೊಟ್ಟಿದ್ದಳು.

'ಮೂರು ಕುರಿಯೆಂದರೆ ಐದು ದಿನ ಇಟ್ಟು ತಿಂದರೂ ಮುಗಿಯುವುದಿಲ್ಲ', ಖುಷಿಯಿಂದ ಹೇಳಿದೆ. 'ಆ ಹಪ್ಪುಕ್ಕೆಟ್ಟ ಬಳೆಗಾರರು ನಮಗೆಲ್ಲಿ ಬಿಡ್ತಾರೆ, ಎಷ್ಟಿದ್ದರೂ ಅವರಿಗೆ ಸಾಲುವುದಿಲ್ಲ', ಬಳೆಗಾರರಿಗೆ ಬಯ್ಯುತ್ತ ಅಕ್ಕ ಹೊರಗಡೆ ಬಂದಳು. ನಮ್ಮ ಊರ ದೇವಸ್ಥಾನಕ್ಕೆ ಪೂಜೆ ಮಾಡುವುದು ದೇವಸ್ಥಾನದ ಸಮೀಪದಲ್ಲಿ ಇರುವ ಬಳೆಗಾರರ ಮನೆಯವರು. ಎಷ್ಟು ವರ್ಷದಿಂದ ಅಂತಹ ನನಗೂ ಸರಿಯಾಗಿ ಗೊತ್ತಿಲ್ಲ. ಮಾಂಸಾಹಾರಿ ದೇವತೆಯಾದ್ದರಿಂದ ಬ್ರಾಹ್ಮಣರ ಪೂಜೆ ಇರಲಿಲ್ಲ. ಮೊದಲೆಲ್ಲ ಒಂದೇ ಮನೆಯವರ ಪೂಜೆ ಇತ್ತು, ಬಳೆಗಾರರದ್ದು ಅವಿಭಾಜ್ಯ ಕುಟುಂಬವಾಗಿರುವಾಗ. ಕೆಲ ವರ್ಷಗಳ ಹಿಂದೆ ಅವರ ಮನೆ ಪಾಲಾದಾಗ ದೇವರನ್ನೂ ಪಾಲು ಮಾಡಿಕೊಂಡಿದ್ದರು. ಹಾಗಾಗಿ ವರ್ಷಕ್ಕೊಬ್ಬರ ಪೂಜೆ ಈಗ. 'ಈಗಿರುವ ಸಂಜು ಬಳೆಗಾರರು ತುಂಬಾ ಒಳ್ಳೆಯವರು. ಉಳಿದವರ ಹಾಗಲ್ಲ. ಪೂಜೆಯೂ ಒಳ್ಳೆ ಮಾಡ್ತಾರೆ, ಊಟ ಕೂಡ ಒಳ್ಳೆಯದಾಗಿ ಹಾಕ್ತಾರೆ', ಅಮ್ಮನ ಶಿಫಾರಿಸು ಅವರಿಗೆ.

'ಮೂರು ಕುರಿ ಪೂಜೆಯೆಂದರೆ ಖರ್ಚು ಒಟ್ಟು ಎಷ್ಟಾಗಬಹುದು' ಕೇಳಿದೆ. 'ಒಂದು ಕುರಿ ಪೂಜೆಗೆ ಏನೂ ಇಲ್ಲ ಅಂದ್ರೆ ಹೆಚ್ಚು ಕಡಿಮೆ ಹದಿನೈದರಿಂದ ಇಪ್ಪತ್ತು ಸಾವಿರ ರುಪಾಯಿ ಬೇಕು. ಇದು ಮೂರು ಒಟ್ಟಿಗೆ ಕೊಡುವದರಿಂದ ನಮಗೆ ಎರಡು ಕುರಿಗಳದ್ದು ಮಾತ್ರ ಹೆಚ್ಚಿನ ಖರ್ಚು ಬರುವುದು. ಎಲ್ಲ ಒಟ್ಟು ಮೂವತ್ತು ಸಾವಿರದ ಒಳಗೆ ಖಂಡಿತ ಮುಗಿಯತ್ತೆ', ಅಮ್ಮ ಎಲ್ಲ ಮೊದಲೇ ಲೆಕ್ಕಾಚಾರ ಹಾಕಿದ್ದಳು. ನನಗೆ ಒಮ್ಮೆಲೇ ಸಿಟ್ಟು ಬಂದಿತು, ಸುಮ್ಮ ಸುಮ್ಮನೆ ಮೂವತ್ತು ಸಾವಿರ ಖರ್ಚು ಮಾಡ್ತಾರಲ್ಲ ಅಂತ. ಈ ಊರಿನ ಜನಗಳಿಗೆ ಬೇರೆ ಕೆಲಸವಿಲ್ಲ, ಎಲ್ಲದಕ್ಕೂ ಒಂದು ಹರಕೆ ಹೇಳಿ ಕೊಳ್ಳುತ್ತಾರೆ. ಅಣ್ಣನಿಗೆ ಹಾಗೆಯೇ ಹೇಳಿದೆ. ಮತ್ತೆ ನೋಡಿದರೆ ಅಣ್ಣನಿಗೂ ಅಷ್ಟು ಖರ್ಚು ಅಂತ ಗೊತ್ತಿರಲಿಲ್ಲವಂತೆ. ನಮ್ಮನೆಯಿಂದ ಪ್ರತಿ ವರ್ಷ ಊರ ಮಾರಿ ಹಬ್ಬಕ್ಕೆ ಒಂದು ಕುರಿ ಕೊಡುತ್ತಿದ್ದರು. ಅದಕ್ಕೊಂದು ಐದಾರು ಸಾವಿರ ಖರ್ಚು, ಅಷ್ಟೇ, ಹಾಗೇ ಅಂದು ಕೊಂಡು ಎರಡು ಬಾರಿ ಕುರಿ ಪೂಜೆ ಹರಿಕೆ ಹೇಳಿದ್ದ. ಮತ್ತೆ ಗೊತ್ತಾಯಿತಂತೆ ಶಬ್ದಗಳ ಎಡವಟ್ಟು. 'ಮಾರಿ ಕುರಿ' ಮತ್ತೆ 'ಕುರಿ ಪೂಜೆ' ಎರಡು ಬೇರೆ ಬೇರೆ ಸೇವೆಗಳಂತೆ, ಯಾಕಾದರೂ ಅಷ್ಟು ಗೊಂದಲಮಯ ಹೆಸರುಗಳನ್ನಿಡುತ್ತಾರೋ. ಅಮ್ಮನಂತೂ ಸುತರಾಂ ಸಿಧ್ಧಳಿರಲಿಲ್ಲ, ದೇವರ ಜೊತೆ ಚೌಕಾಶಿ ಮಾಡಲು. ಹಾಗಾಗಿ ಮೂರು ಕುರಿ ಪೂಜೆಯ ತಯಾರಿ ಮಾಡತೊಡಗಿದೆವು.

ಕುರಿ ಪೂಜೆಗೆ ನೂರ ಇಪ್ಪತ್ತೈದು ಜನರಿಗೆ ಊಟ ಅಂತ ನಿರ್ಧಾರ ಮಾಡಿದೆವು. ನಮ್ಮ ಕಡೆಯಿಂದ ೭೫ ಜನ, ಬಳೆಗಾರರ ಕಡೆಯಿಂದ  ೫೦ ಜನ. ನಮ್ಮ ಪೂಜೆಗೆ ಬಳೆಗಾರರ ಕಡೆಯಿಂದ ಅಷ್ಟು ಜನ ಯಾಕೆ ಎಂದರೆ ಅಮ್ಮನ ಉತ್ತರ ತಯಾರಾಗಿತ್ತು, 'ಇವತ್ತು ನಿನ್ನೆಯ ಕ್ರಮವಲ್ಲ ಅದು, ಹಾಗೆ ಕುರಿ ಪೂಜೆ ಕೆಲಸಕ್ಕೆಲ್ಲ ತುಂಬಾ ಜನ ಬೇಕು, ಕರೆಯಲಿ ಬಿಡಿ'. ನಮ್ಮಲ್ಲಿ ಪೂಜೆಯ ಎಲ್ಲ ಕೆಲಸಗಳು ದೇವಸ್ತಾನದಲ್ಲಿಯೇ ನಡೆಯುವುದು. ಮಧ್ಯಾಹ್ನ ಪೂಜೆ ಮುಗಿಸಿ ಕುರಿ ಕಡಿಯಲು ಹೋಗಿ ಬಂದರೆ, ಸಂಜೆ ಊಟಕ್ಕೆ ಹೋಗುವುದು. ಉಳಿದ ಎಲ್ಲ ಕೆಲಸವೂ ಅವರೇ ನೋಡಿಕೊಳ್ಳುತ್ತಾರೆ. ನಾವು ಹಣ ಕೊಟ್ಟರೆ ಸಾಕು. ಒಂತರ ಸಂಪೂರ್ಣ ಹೊರಗುತ್ತಿಗೆ.

ಈ ಬಾರಿ ನನಗೆ ಪೂರ್ತಿಯಾಗಿ ಮಧ್ಯಾಹ್ನದ ಪೂಜೆ ನೋಡಬೇಕಿತ್ತು. ಕೊನೆಯ ಬಾರಿ ನಾನು ಮಾರಿ ಪೂಜೆ ನೋಡಿದ್ದು ಎಷ್ಟೋ ವರ್ಷಗಳ ಹಿಂದೆ. ಇಪ್ಪತ್ತು ನಿಮಿಷಗಳಲ್ಲಿ ನಲವತ್ತು ಕುರಿಗಳನ್ನು ಕಚ ಕಚ ಕೊಂದಿದ್ದರು, ನೋಡಲಾರದೆ ಕಣ್ಣು ಮುಚ್ಚಿದ್ದೆ. ಈ ಬಾರಿ ನೋಡುವ ಗಟ್ಟಿ ದೈರ್ಯ ಮಾಡಿದ್ದೆ. ಪೂಜೆ ನೋಡಲು ಜಾಸ್ತಿ ಜನ ಬಂದಿರಲಿಲ್ಲ, ನಮ್ಮ ಮನೆಯ ಪೂಜೆ ಹೆಚ್ಚು ಸಮಯ ಇರುವುದೂ ಇಲ್ಲ. 'ಅಮ್ಮನವರ' ಪಾತ್ರಿ ಉಡುಗೆ ತೊಟ್ಟುಕೊಂಡು ಸಿಧ್ಧರಾಗಿ ನಿಂತರು. ಹೆಗ್ಗಡೆಯವರು ಶಿಂಗಾರ ಹೂವನ್ನು ನೀಡಿ ನೀರನ್ನು ಕೊಟ್ಟೊಡನೆ, ಅದನ್ನು ಮುಖಕ್ಕೆಲ್ಲ ತಿಕ್ಕಿತೊಂಡು ಛಂಗನೆ ಹಾರಿ ಜೋರಾಗಿ ಚೀತ್ಕರಿಸಿದರು. ಕ್ಷಣಾರ್ಧದಲ್ಲಿ ಅವರ ಮೈಮೇಲೆ ಅಮ್ಮನವರ (ಚಾಮುಂಡೇಶ್ವರಿ) ಆಹ್ವಾಹನೆಯಾಗಿತ್ತು. ಪೂಜೆಯ ವಿಷಯ ತಿಳಿದುಕೊಂಡು ಹರಕೆಯನ್ನು ಪಡೆಯಲು ದೇವರು ಹೊರಗಡೆ ಬಂತು.

ದೇವಸ್ಥಾನದ ಎದುರಿನ ಅಂಗಳದಲ್ಲಿ ಮೂರು ಕುರಿಗಳನ್ನು ನಿಲ್ಲಿಸಿದ್ದರು. ಒಂದೊಂದು ಕುರಿ ಹಿಡಿಯಲು ಇಬ್ಬಿಬ್ಬರು. ಒಬ್ಬರು ಬಲವಾಗಿ ಹಿಂದುಗಡೆ ಹಿಡಿದರೆ ಇನ್ನೊಬ್ಬರು ಕುತ್ತಿಗೆಗೆ ಹಾಕಿದ ಹಗ್ಗವನ್ನು ಎಳೆದು ಹಿಡಿಯಲಿಕ್ಕೆ. ಮೂರು ಕುರಿಗಳಲ್ಲಿ ಒಂದು ತುಂಬಾ ಚಿಕ್ಕದು, ಬಹುಶ ವರ್ಷ ಕೂಡ ಆಗಿರಲಿಕ್ಕಿಲ್ಲ. ಇನ್ನೆರಡು ದೊಡ್ಡವು. ಎಲ್ಲವುಗಳ ಕುತ್ತಿಗೆಯನ್ನು ಚನ್ನಾಗಿ ಕ್ಷೌರ ಮಾಡಲ್ಲಾಗಿತ್ತು. ಕುರಿಗಳಿಗೆ ಕುತ್ತಿಗೆ ಕ್ಷೌರ ಮಾಡುವಾಗಲೇ ತಿಳಿಯುತ್ತದಂತೆ, ಕಡಿಯಲು ಪೂರ್ವ ತಯಾರಿ ಎಂಬುದಾಗಿ.

ಮೊದಲ ಸರದಿ ಚಿಕ್ಕ ಕುರಿಯದ್ದು. ಹರಿತವಾದ ಕತ್ತಿಯ ಮೊದಲ ಏಟಿಗೆ ರುಂಡ ಮತ್ತು ಮುಂಡ ಬೇರಾಗಿತ್ತು. ಉಳಿದೆರಡು ಕುರಿಗಳು ನೋಡಿ ಜೋರಾಗಿ ಕಿರುಚಲು ತೊಡಗಿದವು. ಅವುಗಳ ಕಿರುಚಾಟಕ್ಕೆ ದೇವರ ಅರ್ಭಟವೂ ಜೋರಾಯಿತು, ಬೆಂಕಿಗೆ ತುಪ್ಪ ಎರಚಿದಂತೆ. ಕೆಲ ಕ್ಷಣಗಳಲ್ಲಿ ಇನ್ನೊಂದು ಕುರಿಯ ಕತ್ತು ತುಂಡಾಯಿತು. ದೊಡ್ಡ ಕುರಿಗೆ ಮೂರನೇ ಏಟು ಬಿತ್ತು. ಉಳಿದೆರದಕ್ಕಿಂತ ದೊಡ್ಡದಾದ ಅದಕ್ಕೆ ಆ ಏಟು ಸಾಲಲಿಲ್ಲ. ಅರ್ಧ ಮುರಿದ ಕತ್ತಿಗೆ ಇನ್ನೊಂದು ಏಟು ಬಿತ್ತು, ಮೂರು ನಿಮಿಷಗಳಲ್ಲಿ ಕುರಿಗಳೆಲ್ಲ ನೆಲಕ್ಕುರುಳಿದವು. ದೇವರೂ ವಿಚಿತ್ರ ಸಂತೋಷದಿಂದ ಆರ್ಭಟವನ್ನು ಕಡಿಮೆ ಮಾಡಿತು. ಕಡಿದವರು ಓಕುಳಿ ಚೆಲ್ಲಿ ಸಂತೋಷದಿಂದ ದೇವರೊಡನೆ ಒಳ ಹೋದರು. ಅವರ ಮನಸ್ಸಲ್ಲಿ ಕೃತಾರ್ಥರಾದ ಭಾವವಿತ್ತು. ಧರ್ಮದಿಂದ ಇದ್ದು, ದೇವರ ಕೃಪೆ ಇದ್ದಾಗ ಮಾತ್ರ ಅಷ್ಟು ಆರಾಮವಾಗಿ ಕಡಿಯಲು ಸಾಧ್ಯವಂತೆ.

ಮರಿ ಕುರಿಗೆ ಹೆಚ್ಚು ಒದ್ದಾಟವಿರಲಿಲ್ಲ, ಒಂದು ನಿಮಿಷದ ಒಳಗಾಗಿ ಅದರ ದೇಹ ನಿಶ್ಚಲವಾಗಿತ್ತು. ಆದರೆ ಉಳಿದೆರಡು ಕುರಿಗಳು ವಿಲ ವಿಲ ಒದ್ದಾಡುತ್ತ ಇದ್ದವು. ನೋಡುತ್ತಲೇ ಹೋದೆ. ತಲೆ ಬಿದ್ದ ಸ್ಥಳದಲ್ಲಿಯೇ ಇತ್ತು, ದೇಹ ಮಾತ್ರ ಅತ್ತಿಂದಿತ್ತ ಇತ್ತಿಂದತ್ತ ಹೋಗುತ್ತಿತ್ತು. ರಕ್ತ ಬಿಡದೆ ಚಿಮ್ಮುತ್ತಲೇ ಇತ್ತು. ರಕ್ತಕ್ಕೆ ಓಕುಳಿಯ ನೀರು ಸೇರಿ ಎಲ್ಲ ಕಡೆ ಕೆಂಪು ತುಂಬಿತ್ತು. ಮೂರು ನಿಮಿಷಗಳವರೆಗೂ ಆ ಒದ್ದಾಟ ಮುಂದುವರೆಯಿತು. ಮತ್ತೆ ನಿದಾನವಾಗುತ್ತ ಸಾಗಿ ಕೊನೆಗೊಮ್ಮೆ ಶಾಂತವಾಯಿತು. ನನ್ನ ಕಣ್ಣುಗಳಲ್ಲೂ ನೀರು ಬರಲು ಶುರುವಾಯಿತು. ಇಷ್ಟನ್ನೆಲ್ಲ ನೋಡಿ ಇನ್ನು ಮೇಲೆ ಕುರಿ ತಿನ್ನುವುದು ಸಾಧ್ಯವೇ ಇಲ್ಲವೆನಿಸಿತು. ಪ್ರತಿಬಾರಿ ಮಾಂಸಾಹಾರ ನೋಡಿದಾಗಲೂ ಈ ರಕ್ತದೊಕುಳಿಯೇ ಕಣ್ಣ ಮುಂದೆ ಕುಣಿಯಬಹುದು ಅಂದುಕೊಂಡೆ.

ಪೂಜೆ ಮುಗಿಸಿ ಮನೆಗೆ ಬಂದರೂ ಕೂಡ ತಲೆಯಲ್ಲೇ ಅದೇ ಕುಳಿತಿತ್ತು. ಮನೆಗೆ ಎಲ್ಲ ಬಂದ ಮೇಲೆ ಹೇಳಿದೆ, 'ಇನ್ಯಾರು ಮುಂದೆ ಕುರಿ ಪೂಜೆ ಹೇಳಬೇಡಿ. ಹರಿಕೆ ಕೊಟ್ಟು ಪುಣ್ಯ ಪಡೆಯಲು ಪಾಪದ ಕುರಿಗಳನ್ನು ಕೊಲ್ಲುವ ಪಾಪ ಯಾಕಾದ್ರೂ ಮಾಡಬೇಕು' ಅಂದೆ. ಅಮ್ಮನಿಗೆ ಅರ್ಥವಾಗಲಿಲ್ಲ, 'ಅದು ಹೇಗೆ ಪಾಪವಾಗುತ್ತದೆ? ಕೊಂದ ಪಾಪ ತಿಂದ ಪರಿಹಾರ ಅಂತ ದೊಡ್ಡವರೆಲ್ಲ ಹೇಳಿದ್ದರಲ್ಲ'. ನಾನು ನನ್ನ ಪಾಂಡಿತ್ಯ ಬಿಚ್ಚಲು ಶುರು ಮಾಡಿದೆ. 'ತಿಂದ ಪರಿಹಾರ ಎಂದರೆ ಕುರಿ ಕೊಂದು ಚೆನ್ನಾಗಿ ಸಾಂಬಾರು ಮಾಡಿ ತಿನ್ನುವುದಲ್ಲ, ಕೊಂದದ್ದು ತಪ್ಪಾಯಿತೆಂದು ಮನಸಾರೆ ಪಶ್ಚಾತ್ತಾಪ ಪಡಬೇಕು. ನೋವನ್ನು ತಿನ್ನಬೇಕು. ಮತ್ತೆ ಅದೇ ತಪ್ಪು ಮಾಡಬಾರದು' ಎಂದೆ. ಅಮ್ಮನ ಗೊಂದಲ ಇನ್ನೂ ಜಾಸ್ತಿಯಾಯಿತು. ಅಮ್ಮ ಶಾಲೆಗೆ ಹೋದವಳಲ್ಲ. 'ಹೌದಾ, ಮತ್ತೆ ಮನೆಯ ಕೋಳಿ ಮರಿಗಳನ್ನು ಕಾಗೆ ತೆಗೆದುಕೊಂಡು ಹೋಗುವಾಗ ಕೂಡ ತಪ್ಪಿಸುವುದು ಪಾಪ ಅಂತ ಹೇಳ್ತಾರಲ್ಲ, ಅದರ ಆಹಾರಕ್ಕೆ ಅಡ್ಡ ಬಂದ ಹಾಗಂತೆ ಅದು. ಇದೂ ಕೂಡ ಹಾಗೆಯೇ ಅಲ್ಲವಾ' ಅಂದಳು. ಈಗ ನನಗೂ ಸ್ವಲ್ಪ ಗೊಂದಲವಾಯ್ತು. 'ತಿಂದ ಪರಿಹಾರ' ಎಂದರೆ 'ಪ್ರಾಯಶ್ಚಿತ್ತ' ಅಂತ ನಾನು ಎಲ್ಲಿಯೂ  ಓದಿದ್ದು ನೆನಪಿಗೆ ಬರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಯಾರೋ ಅಧ್ಯಾಪಕರು ಹೇಳಿದ ನೆನಪು, ಭಟ್ಟರು ಬೇರೆ. ಯಾವುದನ್ನು ನಂಬುವುದೆಂಬ ಗೊಂದಲ ಶುರುವಾಯಿತು. ಆದರೂ ನಾನು ಹೇಳಿದ್ದೇ ವೇದ ಎಂದು ಬೇರೆಯವರ ಬಾಯಿ ಮುಚ್ಚಿಸಿದೆ, ಮತ್ತೆ ಮನಸ್ಸಲ್ಲೇ ಯೋಚಿಸಲು ಶುರು ಮಾಡಿದೆ.

ರಾತ್ರಿ ಎಂಟು ಘಂಟೆಯ ಹೊತ್ತಿಗೆ ಊಟಕ್ಕೆ ತಯಾರಾಗಿ ಹೋದೆವು, ಹತ್ತಿರ ಹತ್ತಿರ ನೂರೈವತ್ತು ಜನ ಬಂದಿದ್ದರು. ಮೊದಲ ಪಂಕ್ತಿಯಲ್ಲೇ ಕುಳಿತೆ. ಅನ್ನ ಹಾಕಿದಷ್ಟೇ ಕುರಿ ಮಾಂಸ ಸಹ ಹಾಕಿದರು. ಚೆನ್ನಾಗಿ ತೆಂಗಿನಕಾಯಿ ಹಾಕಿ ಮಾಡಿದ ಬಿಸಿಬಿಸಿ ಪದಾರ್ಥ ಒಳ್ಳೆಯ ಪರಿಮಳ ಬರಿಸುತ್ತಿತ್ತು. ಮಧ್ಯಾಹ್ನದ ನೆನಪಾಗಲಿಲ್ಲ. ಎರಡು ಪೀಸು ತಿಂದೆ. ಮೂರನೇ ಪೀಸು ಬಾಯಿಗೆ ಹಾಕುವಾಗ ಎಲ್ಲ ನೆನಪಿಗೆ ಬಂತು. ಆಶ್ಚರ್ಯವಾಯಿತು, ಏನೂ ಅನಿಸಲಿಲ್ಲ. ತಿನ್ನುತ್ತ ಹೋದೆ. ನನ್ನ ಪಾಲಿನದು ಮುಗಿಸಿ ನನ್ನ ಹೆಂಡತಿಯ ಪಾಲಿನದ್ದು ಅರ್ಧ ಮುಗಿಸಿದೆ. ಮತ್ತೆ ಮಧ್ಯಾಹ್ನದ ಘಟನೆಯನ್ನು ಎಣಿಸಿದೆ,  ಕುರಿ ಸತ್ತದ್ದು ಬೇಜಾರೆನಿಸಿತು, ಆದರೆ  ಕುರಿ ಪದಾರ್ಥ ಚೆನ್ನಗಿತ್ತೆನಿಸಿತು. ನನ್ನಲ್ಲೇ ಏನೋ ಸಮಸ್ಯೆ ಇರಬೇಕು, ಅದಕ್ಕೆ ಈ ತರ ಮನಸ್ಸು ಬದಲಾಗುತ್ತಿದೆ ಅನ್ನಿಸಿ ಮುಂದೆ ಆಲೋಚಿಸೋದು ಬಿಟ್ಟು ಬಿಟ್ಟೆ.

ಮರುದಿನ ನನ್ನನ್ನು ಸೇರಿಸಿ ಮನೆಯವರೆಲ್ಲ ಮೂರು ಮೂರು ಬಾರಿ ಶೌಚಾಲಯಕ್ಕೆ ಹೋಗುವವರೇ. ಎಲ್ಲರೂ ನನ್ನ ಹಾಗೆ ತಿಂದಿದ್ದರು. ಗಮನಿಸಿದೆ, ಅಮ್ಮ ಮಾತ್ರ ಸರಿಯಿದ್ದಳು. ಸಂಶಯ ಬಂತು ' ನೀನ್ಯಾಕಮ್ಮ ಜಾಸ್ತಿ ತಿನ್ನಲಿಲ್ವಾ' ಕೇಳಿದೆ. 'ಇಲ್ಲವಾ, ಜಾಸ್ತಿ ತಿನ್ನಲಿಕ್ಕೆ ನನ್ನ ಹಲ್ಲು ಎಷ್ಟು ಸರಿ ಇದೆ' ಅಂತ ಉತ್ತರಕ್ಕೂ ಕಾಯದೆ ಒಳಗಡೆ ಹೋದಳು. ನನ್ನ ಸಂಶಯ ನಿವಾರಣೆಯಾಗಿರಲಿಲ್ಲ. ಅವಳ ಹಲ್ಲನ್ನು ದೂಶಿಸುವುದೋ ನನ್ನ ಪಾಂಡಿತ್ಯವನ್ನೋ ತಿಳಿಯಲಿಲ್ಲ.

ವಾಪಾಸು ಬರುವ ಹಿಂದಿನ ದಿನ ನಾನು ನಮ್ಮನೆಯಲ್ಲಿ ಇದ್ದರೆ ಹೆಂಡತಿ ತಾಯಿಯ ಮನೆಗೆ ಹೋಗಿದ್ದಳು. ಮರುದಿನ ಅಲ್ಲಿಂದಲೇ ವಿಮಾನ ಹಿಡಿಯಲು ಆರಾಮ ಆಗುತ್ತದೆ ಅಂತ. ಸಂಜೆ ಎಂಟು ಘಂಟೆಗಳ ತನಕ ಸರಿಯಾಗಿ ಇದ್ದವಳಿಗೆ ಮತ್ತೆ ಒಂದೇ ಸಮನೆ ವಾಂತಿ ಶುರುವಾಯಿತು. ಸ್ವಲ್ಪ ಸ್ವಲ್ಪ ಸಂವೇದನೆ ಮೊದಲೇ ಇದ್ದುದ್ದರಿಂದ ನಾನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಸುಮ್ಮನೆ ಮನೆಯವರ ತಲೆ ಕೆಡಿಸೋದು ಬೇಡವೆಂದು ಯಾರಿಗೂ ಹೇಳಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ಮಲಗಿ ಕೊಂಡರು. ಸಮಯ ಮುಂದೆ ಹೋದಹಾಗೆ ಇವಳ ವಾಂತಿಯೂ ಮುಂದುವರಿಯುತ್ತಲೇ ಹೋಯಿತು. ಕೊನೆಗೆ ಕುಡಿದ ನೀರು ಸಹ ನಿಲ್ಲಲಿಲ್ಲ. ಹನ್ನೆರಡು ಘಂಟೆ ರಾತ್ರಿಗೆ ಅವಳ ಮನೆಯವರು ಫೋನ್ ಮಾಡಿ ಅಳತೊಡಗಿದರು. ನನಗೂ ಏನೂ ಮಾಡುವುದೆಂದು ತೋಚಲಿಲ್ಲ. ಮತ್ತೆ ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಒಂದು ಘಂಟೆಗೆ ಫೋನ್ ಮಾಡಿದಾಗಲೂ ಏನೂ ಒಳ್ಳೆಯ ಸುದ್ದಿ ಇರಲಿಲ್ಲ. ನಾಳೆ ವಿಮಾನ ಹಿಡಿಯುವುದು ಸ್ವಲ್ಪ ಕಷ್ಟವೇ ಅಂದರು. ನನ್ನ ಚಿಂತೆ ಇನ್ನೂ ಜಾಸ್ತಿಯಾಯಿತು. ದೂರದಲ್ಲಿರುವುದರಿಂದ ಅವಳ ಅನಾರೋಗ್ಯ ಯಾವ ಪ್ರಮಾಣದಲ್ಲಿದೆ ಅನ್ನುವ ಸೂಚನೆ ಸಹ ಸರಿಯಾಗಿರಲಿಲ್ಲ, ಹೋಗೋಣವೆಂದರೆ ರಾತ್ರಿ ಒಂದು ಘಂಟೆ ಬೇರೆ. ವಿಮಾನಕ್ಕುಳಿದಿರುವುದು ಬರಿಯ ಹದಿನಾರು ಘಂಟೆ ಮಾತ್ರ. ಟಿಕೇಟು ರದ್ದು ಮಾಡಿದರೆ ಸುಮ್ಮನೆ ಎರಡು ಮೂರು ದಿನ ಹೆಚ್ಚಿನ ರಜೆ, ಅದೂ ಕೂಡಲೇ ಸಿಗುವ ಖಾತರಿ ಇಲ್ಲ, ಮೇಲೆ ಹತ್ತಿರ ಹತ್ತಿರ ನಲವತ್ತು ಸಾವಿರದ ಬರೆ. ಹರಕೆ ಹೇಳಿಕೊಳ್ಳಲೇ ಅನ್ನಿಸಿತು, ಒಂತರ ನಾಚಿಕೆಯೆನಿಸಿತು. ದೇವರ ಹತ್ತಿರ ಬೇಡುವುದು ಬಿಟ್ಟು ಎಷ್ಟೋ ವರ್ಷಗಳು ಕಳೆದಿದ್ದವು. ಆದರೆ ಅದನ್ನು ಬಿಟ್ಟು ಮಾಡಲಿಕ್ಕೆ ನನ್ನ ಕೈಯಲ್ಲಿ ಬೇರೆ ಏನೂ ಇರಲಿಲ್ಲ. ನಮ್ಮ ಮನೆಯವರು ಯಾಕೆ ಹರಕೆ ಹೇಳಿ ಕೊಳ್ಳುತ್ತಾರೆ ಅಂತ ಸ್ವಲ್ಪ ಸ್ವಲ್ಪ ಅರ್ಥವಾಯಿತು. ಹರಕೆ ಹೇಳುವುದಾದರೆ ಯಾವ ಹರಕೆ ಹೇಳುವುದು. ಕುರಿ ಪೂಜೆ, ಕೋಳಿ ಪೂಜೆ ಎಲ್ಲ ಬೇಡ ಅಂತ ನಾನೇ ಮನೆಯವರಿಗೆ ಉಪದೇಶ ಮಾಡಿ ಆಗಿದೆ. ಮತ್ತೆ ಸ್ವಲ್ಪ ಹೊತ್ತು ಆಲೋಚನೆ ಮಾಡಿದೆ. ಕೊನೆಗೆ ಹತ್ತಿರದ ಶಾಲೆಯಲ್ಲಿ ಬಡ ಮಕ್ಕಳಿಗೆ ಏನಾದರೂ ಕೊಡುವುದು ಅಂತ  ನಿರ್ಧರಿಸಿದೆ. ಹರಕೆ ನಿರ್ಧಾರ ಆಯಿತು, ಆದರೆ ಎಷ್ಟು ಕೊಡಬೇಕು ಅನ್ನುವುದು ಗೊತ್ತಾಗಲಿಲ್ಲ. ದೇವರ ಹತ್ತಿರ ವ್ಯವಹಾರ ಮಾಡಿದ ಅಭ್ಯಾಸವಿರಲಿಲ್ಲ. ನಮ್ಮ ಪ್ಯಾಕ್ಟರಿ ಮಾಡುವಾಗ ಸಬ್ಸಿಡಿಯಲ್ಲಿ ಸರಕಾರೀ ಅಧಿಕಾರಿಗಳಿಗೆ ಇಪ್ಪತ್ತೈದು ಶೇಕಡಾ ಕೊಟ್ಟಿದ್ದು ನೆನಪಿಗೆ ಬಂತು. ಟಿಕೇಟಿನ ಬೆಲೆ ನಲವತ್ತು ಸಾವಿರ, ಹಾಗಾಗಿ ಹತ್ತು ಸಾವಿರ ಸರಿ ಅನ್ನಿಸಿತು. ಮತ್ತೆ ಮನಸ್ಸು ಬದಲಾಯಿಸಿ ಹರಕೆಯನ್ನು ಹದಿನ್ನೈದು ಸಾವಿರಕ್ಕೆರಿಸಿದೆ, ಆರಾಮವಾಗಿ ವಿಮಾನ ಹತ್ತುವ ಹಾಗಾದರೆ. ಸಮಾಧಾನವಾಯಿತು, ಮಲಗಿದ ಕೂಡಲೇ ನಿದ್ದೆಯೂ ಬಂತು.

ಮರುದಿನ ಬೆಳಗ್ಗೆ ಬೇಗನೆ ಎದ್ದು ಹೊರಟೆ. ದೇವರಿಗೆ ಹರಿಕೆಯ ಕರೆ ಹೋಗಿತ್ತು ಅನಿಸುತ್ತೆ, ಹನ್ನೆರಡು ಘಂಟೆ ಹೊತ್ತಿಗೆ ಆಸ್ಪತ್ರೆಯಿಂದ ಬಿಟ್ಟರು, ನಾಲ್ಕು ಬಾಟಲ ಗ್ಲುಕೋಸ್ ಹಾಕಿದ ಬಳಿಕ. ದೇವರ ಹತ್ತಿರ ವ್ಯವಹಾರ ಪರವಾಗಿಲ್ಲ ಅನ್ನಿಸಿತು.

ಕೆಲದಿನಗಳ ಬಳಿಕ ಹೆಂಡತಿಯಲ್ಲಿ ಹೇಳಿದ್ದೆ, ಹರಕೆಯ ವಿಷಯ. ಅದಕ್ಕೆ ಕಾಯುತ್ತಿದ್ದ ಹಾಗೆ ಹೇಳಿದಳು, 'ಇನ್ನೊಮ್ಮೆ ಹರಿಕೆ ಹೇಳಿಕೋ, ಡಾಕ್ಟರ್ ಮೂರು ತಿಂಗಳಲ್ಲೇ ಗುಣವಾಗುತ್ತೆ ಅಂತ ಹೇಳಿದ ವಾಕರಿಕೆ, ಸುಸ್ತು ಇನ್ನು ಸ್ವಲ್ಪ ಕೂಡ ಹೋಗಿಲ್ಲ' ಅಂತ. ನಾನು ಅಂತರ್ಜಾಲ ಎಲ್ಲ ಜಾಲಾಡಿ ಎಲ್ಲ ರೀತಿಯ ಮನೆಯೌಷಧ ಮಾಡಿದ್ದೆ, ಯಾವುದು ಉಪಯೋಗಕ್ಕೆ ಬಂದಿರಲಿಲ್ಲ. ಇದನ್ನೂ ಒಂದು ಬಾರಿ ನೋಡಿ ಬಿಡೋಣ ಅನ್ನಿಸಿತು. ಆದರೆ ಮತ್ತದೇ ಸಮಸ್ಯೆ. ಎಷ್ಟು ಹಣ ಕೊಡಬೇಕೆಂದು. ಅವಳ ನೋವಿನ ಬೆಲೆ ನನಗೆ ತಿಳಿದಿರಲಿಲ್ಲ. ಅವಳನ್ನೇ ಕೇಳಿದೆ. ನೋವಿನ ಬೆಲೆ ಕಟ್ಟುವುದು ಅವಳ ಕೈಯಲ್ಲೂ ಆಗಲಿಲ್ಲ. ಕೊನೆಗೆ ಈವರೆಗೆ ಆದ ಖರ್ಚು ಲೆಕ್ಕ ಹಾಕತೊಡಗಿದಳು. ಎರಡು ಆಕ್ಯೂ ಪ್ರೆಶರ್ ಬ್ಯಾಂಡ್, ಒಂದು ಆಡಿಯೋ ಸಿಡಿ, ಮತ್ತಿಷ್ಟು ಶುಂಟಿ, ನೆಲ್ಲಿಕಾಯಿ. ಎಲ್ಲ ಸೇರಿ ಹತ್ತಿರ ಹತ್ತಿರ ಮೂರು ಸಾವಿರ. ಹಾಗಾಗಿ ಐದು ಸಾವಿರ ಸಾಕೆಂದಳು. ಅಷ್ಟು ಕಡಿಮೆಯಾ ಅಂತ ಕೇಳಿದ್ದಕ್ಕೆ ಇನ್ನೈದು ಸೇರಿಸಿದಳು, ಜೊತೆಗೊಂದು ಷರತ್ತು ಕೂಡ. ಇನ್ನು ಮೂರು ದಿನದಲ್ಲಿ ಗುಣವಾದರೆ ಮಾತ್ರಾ ಅಂತ.  ಆಯ್ತು ಅಂದೆ. ಮೂರು ದಿನ ಆಯ್ತು, ಆರು ದಿನ ಆಯ್ತು, ಓಂಭತ್ತಾಯ್ತು. ದೇವರ ಸುದ್ದಿಯೇ ಇಲ್ಲ. ಹರಕೆ ದೇವರಿಗೆ ಕೇಳಿಸಲಿಲ್ಲವೋ, ಷರತ್ತು ಇಷ್ಟವಾಗಲಿಲ್ಲವೋ ಗೊತ್ತಾಗಲಿಲ್ಲ. ನನಗೂ ಸಾಕಾಯ್ತು, ಇನ್ನು ಮೇಲೆ ದೇವರ ಜೊತೆ ವ್ಯವಹಾರ ಸಾಕು ಎಂದು ಮನಸ್ಸಲ್ಲೇ ನಿರ್ಧರಿಸಿಕೊಂಡೆ.

Thursday, March 1, 2012

ಪ್ರಸವ

ಪ್ರಸವ ವೇದನೆ ಶುರುವಾಗುತ್ತಿದ್ದ ಹಾಗೆ ರಾಘವ್ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದ, ಜಾಸ್ತಿ ತಡ ಮಾಡದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಎಲ್ಲ ನೋವಿಗೆ ತಡೆ ಎನ್ನುವ ಅವನ ಸಾಂತ್ವನದ ಮಾತುಗಳು ನನ್ನ ಕಿವಿಯತ್ತ ತಲುಪುತ್ತಲೇ ಇರಲಿಲ್ಲ. ನಾನು ಕೂಡ ಮೊದ ಮೊದಲು ಎಷ್ಟು ಧೈರ್ಯ ತಂದುಕೊಂಡಿದ್ದೆ, ನಾನೇ ಏನೂ ಮೊದಲಲ್ಲ... ಈ ಪ್ರಪಂಚದಲ್ಲಿ ಮಗುವನ್ನು ಹೆರುವವಳು. ಎಲ್ಲರು ಅನುಭವಿಸುವ ನೋವು ನನಗೊಬ್ಬಳಿಗೆ ಮಹಾ ಎಷ್ಟು ಕಷ್ಟವಾಗಬಹುದೆಂದು. ಮೊದಲ ನಾಲ್ಕು ತಿಂಗಳಲ್ಲಿಯೇ ಹೈರಾಣಾಗಿ ಹೋಗಿದ್ದೆ...ಏನನ್ನೂ ಸರಿಯಾಗಿ ತಿನ್ನುವ ಹಾಗಿಲ್ಲ..ದಿನದ ಅರ್ಧ ಸಮಯ ತಿಂದದ್ದು ಹೊರ ಹಾಕುವುದರಲ್ಲೇ ಹೋಗುತ್ತಿತ್ತು. ಏನನ್ನೂ ತಿನ್ನಲ್ಲು ಮನಸ್ಸಾಗುತ್ತಿರಲಿಲ್ಲ..ಕೆಲವೊಮ್ಮೆ ವಾಸನೆ ನೋಡಿಯೇ ವಾಂತಿಯಾಗುತ್ತಿತ್ತು..ಅದರ ಮೇಲೆ ರಾಘವನ ಕಿರಿಕಿರಿ...ನಿನ್ನ ಹೊಟ್ಟೆಯಲ್ಲಿ ಮಗು ಬೇರೆ ಇದೆ.. ಸರಿಯಾಗಿ ತಿನ್ನು ತಿನ್ನು ಎಂದು..ಮಗುವಿರುದು ನನಗೆ ಮರೆತೇ ಹೋಗಿರುವಂತೆ..ಅದರ ಮೇಲೆ ಕಿತ್ತು ತಿನ್ನುವ ತಲೆ ನೋವು..ಸುಸ್ತು..ಮೊದಲ ವಾರ ಹೇಗೋ ಕಷ್ಟ ಪಟ್ಟು ತಡೆದುಕೊಂಡಿದ್ದೆ...ಆದರದು ಪ್ರತಿದಿನದ ಗೋಳಾದಾಗ, ಯಾಕಪ್ಪಾ ನನಗೀ ಕಷ್ಟ ಅನ್ನಿಸತೊಡಗಿತ್ತು...

ಇನ್ನು ಕೆಲವೇ ಸಮಯದಲ್ಲಿ ನಾನು ಅಮ್ಮನಾಗಲಿದ್ದೇನೆ..ಎಣಿಸಿದಾಗ ನೋವಿನಲ್ಲೂ ಏನೋ ಒಂತರ ನಲಿವು..ಬೇರೆಯವರಿಗೆ ಬಿಡಿಸಿ ಹೇಳಲಾಗದ ಭಾವನೆ..ಮೊದಲ ತಾಯ್ತನದಲ್ಲಿ ಮಾತ್ರಾ ಇಂತಹ ವಿಶೇಷ ಅನುಭೂತಿ ಸಾಧ್ಯವಂತೆ.. ಹಾಗಿದ್ದರೆ..ಅವಳೇಕೆ ನನಗಾಗಿ ನಾಲ್ಕನೇ ಬಾರಿ ಬಸುರಾದಳು..ಮೊದಲ ಮೂರು ಮಕ್ಕಳೂ ಗಂಡಾದಾಗ ಅಪ್ಪ ಸಹ ಮಗಳ ಆಶೆಯನ್ನು ಬಿಟ್ಟು ಬಿಟ್ಟಿದ್ದರನ್ತಲ್ಲ...ಮನೆಯಲ್ಲಿ ಉಳಿದ ಹಿರಿಯರಿಗಂತೂ ಹೆಣ್ಣು ಮಗು ಬೇಕಿರಲಿಲ್ಲ...ಅವರಿಗದು ಹೆಚ್ಚಿನ ಖರ್ಚು ಮಾತ್ರ...ಅಮ್ಮ ಮಾತ್ರ ಯಾರ ಮಾತು ಕೇಳದೆ, ಅಪ್ಪನನ್ನು ಕಾಡಿ ಬೇಡಿ ಒಪ್ಪಿಸಿ ನಾಲ್ಕನೇ ಬಾರಿ ಗರ್ಭ ದರಿಸಿದ್ದಳಂತೆ..ಅವಳು ಯಾವತ್ತೂ ಹೇಳುತ್ತಿದ್ದಳಲ್ಲ, ನನಗಾಗಿ ಹಾಕದ ಹರಿಕೆಯಿಲ್ಲ, ಹೋಗದೇ ಇದ್ದ ದೇವಸ್ಥಾನನವಿಲ್ಲವೆಂಬುದಾಗಿ..

ಮೊದಲ ನಾಲ್ಕು ತಿಂಗಳ ನಂತರ ಆಯಾಸ ಹಾಗೂ ತಲೆನೋವು ಸ್ವಲ್ಪ ಕಡಿಮೆಯಾಗುತ್ತ ಬಂದಿತ್ತು, ಆದರೂ ಅದು ಆರಾಮದ ಸಮಯವಾಗಿರಲಿಲ್ಲ. ಸರಿಯಾಗಿ ನಿದ್ದೆ ಬರುವುದೇ ಅಪರೂಪವಾಗಿತ್ತು..ಆದರೂ ಇಂದಿನ ನೋವು ಕಳೆದ ಒಂಭತ್ತು ತಿಂಗಳ ಕಷ್ಟಗಳನ್ನು ಕೂಡಿಸಿದರೂ ಕಡಿಮೆಯೆಂದೇ ಹೇಳಬೇಕು..ವಿಪರೀತವಾದ ನೋವು..ಈ ತರ ಕೂಡ ನೋವು ಇರಬಹುದೆಂಬ ಕಲ್ಪನೆ ಕೂಡಾ ನನಗಿರಲಿಲ್ಲ. ನಾನು ಪಡುತ್ತಿರುವ ಕಷ್ಟ ನೋಡಲಾರದೆ ರಾಘವನೂ ಒಳಗೊಳಗೇ ಒದ್ದಾಡುತ್ತಿದ್ದ.. ಬಹುಶ ಎಪಿಡ್ಯುರಲ್ ತೆಗೆದು ಕೊಂಡಿದ್ದರೆ ನೋವು ಕಡಿಮೆಯಾಗುತ್ತಿತ್ತು..ಆದರೆ ಅದರ ಬಗ್ಗೆ ನಾವು ಮೊದಲೇ  ನಿರ್ಧರಿಸಿದ್ದಾಗಿತ್ತು..ಅದರಿಂದ ಮುಂದೆ ಬೆನ್ನು ನೋವಿನ ತೊಂದರೆ ಬರುವುದಾಗಿ ಎಲ್ಲೋ ಓದಿದ್ದೆ..ಹಾಗೆ ಏನೋ ಹೇಳಿ ರಾಘವನನ್ನೂ ಒಪ್ಪಿಸಿದ್ದೆ.. ಕಾರಣ ಅದಲ್ಲ ಎಂಬುದು ನನಗೆ ಮಾತ್ರ ತಿಳಿದ ವಿಷಯ..ಬೆನ್ನು ನೋವಿನ ಪಾರ್ಶ್ವ ಪರಿಣಾಮಕಿಂತ, ನನಗೆ ಆ ನೋವನ್ನು ಅನುಭವಿಸಬೇಕಿತ್ತು..ಅಮ್ಮನ ಹಾಗೆ..ಅಮ್ಮನ ಮಾತುಗಳನ್ನು ಮರೆಯುವುದು ನನಗೆ ಸಾಧ್ಯವಿರಲಿಲ್ಲ..

'ನೀನು ಹುಟ್ಟುವಾಗ ಈಗಿನ ಹಾಗೆ ಒಳ್ಳೆ ಆಸ್ಪತ್ರೆಗಳು ಇರಲಿಲ್ಲ..ಆ ಒಂಭತ್ತು ತಿಂಗಳು ನಿನ್ನನ್ನು ಹೊಟ್ಟೆಯಲ್ಲಿಟ್ಟು ನಾ ಪಟ್ಟ  ಕಷ್ಟ ನನಗೊಬ್ಬಳಿಗೆ ಗೊತ್ತು, ದೇವರನ್ನು ಬಿಟ್ಟರೆ..ನಿನಗೆಲ್ಲಿ ಅರ್ಥವಾಗುತ್ತದೆ ಅವೆಲ್ಲ..ನೀ ಹುಟ್ಟುವ ದಿನ ಒಂಭತ್ತು ಘಂಟೆ ಕಾಲ ಹೆರಿಗೆ ನೋವಿನಲ್ಲಿ ನರಳಿದವಳು ನಾನು..ನಿನ್ನಜ್ಜಿ ಹೇಳಿದ್ದು ಸುಳ್ಳಲ್ಲ..ಹೆಣ್ಣು ಮಕ್ಕಳು ಹುಟ್ಟುವಾಗ ಗಂಡಿಗಿಂತ ಎರಡರಷ್ಟು ಕಷ್ಟ ಕೊಟ್ಟರೆ, ಮುಂದೆ ಬೆಳೆದ ಮೇಲೆ ನಾಲ್ಕರಷ್ಟು ಕೊಡುತ್ತಾರಂಥ..ಅವರ ಮಾತು ಕೇಳಿ ನಾನು ಅಂದೇ ನನ್ನ ಹಠ ಬಿಡಬೇಕಿತ್ತು..ನನ್ನ ಕರ್ಮ..ಒಂದು ಹೆಣ್ಣು, ಒಂದು ಹೆಣ್ಣು ಅನ್ನೋ ಆಸೆಯಲ್ಲಿ ಯಾರ ಮಾತಿಗೂ ಸೊಪ್ಪು ಹಾಕಲಿಲ್ಲ..ಇದು ತನಕ ನೀನು ಹೇಳಿದ್ದಕ್ಕೆಲ್ಲ ಪ್ರಶ್ನೆ ಮಾಡದೆ ತಲೆ ಅಲ್ಲಾಡಿಸುತ್ತ ಬಂದೆ, ಈಗ ಅನುಭವಿಸ ಬೇಕಾಗಿದೆ'...ಕೇಳಿ ಕೇಳಿ ನನಗೂ ಸಿಟ್ಟು ನೆತ್ತಿಗೇರಿ ಬಂದಿತ್ತು...ಸಿಟ್ಟಿನಿಂದ ಗದರಿಸಿದ್ದೆ..'ಒಂಬತ್ತು ತಿಂಗಳು ಹೆತ್ತ ಕಥೆಯನ್ನು ಕಳೆದ ಇಪ್ಪತ್ತನಾಲ್ಕು ವರ್ಷದಿಂದಲೂ ಹೇಳ್ತಾನೆ ಇದ್ದೀಯ..ನೀನೊಬ್ಬಳೆ ಅಲ್ಲ, ಈ ಪ್ರಪಂಚದಲ್ಲಿ ಹೆತ್ತವಳಿರೋದು..ಯಾರೂ ಪಡದ ಕಷ್ಟವೇನೂ ನೀನು ಪಟ್ಟಿಲ್ಲ..ಮುಂದೊಮ್ಮೆ ನಾನು ಕೂಡ ಮಗುವಿನ ತಾಯಿಯಾಗುವವಳು..ಮತ್ತೆ ಮತ್ತೆ ಅದನ್ನೇ ದೊಡ್ಡ ಕಷ್ಟ ಅಂತ ಹೇಳಬೇಡ..ನಿನ್ನ ರಾಗ ಕೇಳಿ ಕೇಳಿ ನನಗೂ ಸಾಕಾಗಿದೆ..' . ಅಮ್ಮ ಮುಂದೆ ಮಾತಾಡಲಿಲ್ಲ..ಧಾರೆ ಧಾರೆಯಾಗಿ ಹರಿಯುತ್ತಿದ್ದ ಅವಳ ಕಣ್ಣೀರು ಕಂಡೂ ಕಾಣದೆ ತೆರಳಿದ್ದೆ...

ನೋವು ಕಡಿಮೆಯಾಗುವ ಸೂಚನೆ ಕಾಣಲಿಲ್ಲ, ಹಾಗೆಯೇ ಮಗು ಹೊರ ಬರುವ ಸೂಚನೆ ಸಹ. ಇನ್ನು ನನ್ನ ಕೈಯಲ್ಲಿ ತಡೆಯುವುದು ಸಾಧ್ಯವೇ ಇಲ್ಲವೆನಿಸಿತು..ಹಿಂದೆಂದೂ ಅನುಭವಿಸದ ನೋವು..ಅದು ಯಾವ ತರಹದ ನೋವು ಎಂದು ಬೇರೆಯವಿರಿಗೆ ಹೇಳಲೂ ಸಾಧ್ಯವಿರಲಿಲ್ಲ, ಅನುಭವಿಸಿಯೇ ಅರಿವಾಗಬೇಕದು..ಅಯ್ಯೋ ದೇವರೇ ಅನ್ನುವ ನನ್ನ ಕೂಗಿಗೆ ಯಾರೂ ಕರಗಿದ ಹಾಗೆ ಕಾಣಲಿಲ್ಲ..ಅವರಿಗಿದು ಪ್ರತಿದಿನದ ಪ್ರದರ್ಶನ...ಆ ನೋವಿನಲ್ಲೂ ಆಶ್ಚರ್ಯವಾಯಿತು...ಅಷ್ಟು ಹೊತ್ತು ನೋವಿನಲ್ಲಿ ನರಳಿದರೂ, ಒಮ್ಮೆಯೂ ಅಮ್ಮಾ ಅಂದು ಕೂಗಿರಲಿಲ್ಲ..ಅಯಾಚಿತವಾಗಿ ನನ್ನ ತುಟಿಗಳು ಅಮ್ಮಾ ಅನ್ನಲೂ ಹೋದರೂ, ತಡೆದು ಅದನ್ನು ಬದಲಿಸುತ್ತಿದ್ದೆ...ಅಮ್ಮನ ಮೇಲಿನ ಕೋಪ ಇನ್ನು ಹೊಗಿರಲಿಲ್ಲವೇ..ಅಥವಾ ನನ್ನೊಳಗವಿತಿದ್ದ ಪಾಪ ಪ್ರಜ್ಞೆ ಅಮ್ಮಾ ಅನಲು ತಡೆಯುತ್ತಿತ್ತೆ.. ಸರಿಯಾಗಿ ಅರ್ಥವಾಗಲಿಲ್ಲ.

ಆ ದಿನದ ವರೆಗೆ ಅವಳು ನನಗೆ ತಾಯಿ ಮಾತ್ರಾ ಆಗಿರಲಿಲ್ಲ..ಪ್ರಾಣ ಸ್ನೇಹಿತೆ ಕೂಡ ಆಗಿದ್ದಳು.. ನನ್ನ ಪ್ರತಿಯೊಂದು ಆಸೆಗಳಿಗೆ ಅಪ್ಪನಿಂದ ಎಷ್ಟು ಬಾರಿ ಗದರಿಸಿಕೊಂಡಿದ್ದರು, ಎಷ್ಟು ಬಾರಿ ಮಾತು ಬಿಟ್ಟಿದ್ದರು ಅನ್ನುವುದು ಬಹುಶಹ ನನಗೂ ಪೂರ್ತಿಯಾಗಿ ಗೊತ್ತಿರಲಿಲ್ಲ..ನನ್ನ ಮೇಲೆ ಅಮ್ಮನಿಗೆ ಎಷ್ಟು ಅದಮ್ಯ ಪ್ರೀತಿಯಿತ್ತೋ ಅದಕ್ಕಿಂತ ಹೆಚ್ಚು ನಂಬಿಕೆಯಿತ್ತು..ಅವಳ ನಂಬಿಕೆಯಂತೆಯೇ ನಾನೂ ನಡೆದುಕೊಂಡಿದ್ದೆ..ಯಾವ ತರಗತಿಯಲ್ಲಿ ಸಹ ಮೊದಲ ಸ್ಥಾನ ಬೇರೆಯವರಿಗೆ ಬಿಟ್ಟು ಕೊಟ್ಟವಳಲ್ಲ..ಪಿಯುಸಿಯಲ್ಲಿ ಒಳ್ಳೆಯ ಅಂಕ ಗಳಿಸಿ ದೂರದ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಸೀಟು ದೊರಕಿಸಿಕೊಂಡಾಗ ಮನೆಯ ಎಲ್ಲರು ನನ್ನ ವಿರುಧ್ಧವೆ ಇದ್ದರು..ಹೆಣ್ಣು ಮಗಳು ಒಬ್ಬಳೇ ಅಷ್ಟು ದೂರ ಇರುವುದು ಯಾರಿಗೂ ಸರಿ ಬಂದಿರಲಿಲ್ಲ, ಯಾರ ಮಾತು ಕೇಳದೆ ಎರಡು ದಿನ ಊಟ ಬಿಟ್ಟಿದ್ದೆ.. ನಾನಷ್ಟು ದೂರ ಹೋಗುವುದು ಅಮ್ಮನಿಗೂ ಇಷ್ಟ ಇರಲಿಲ್ಲವೆಂದು ಅವಳ ಕಣ್ಣುಗಳೇ ಹೇಳುತ್ತಿದ್ದವು..ಆದರೂ ಅದನ್ನು ತೋರಗೊಡದೆ ಎಲ್ಲರನ್ನು ಎದುರು ಹಾಕಿಕೊಂಡು ನನ್ನ ಜೊತೆ ಉಪವಾಸ ಕುಳಿತ್ತಿದ್ದಳು..ಕೊನೆಗೂ ನಾನೇ ಗೆದ್ದಿದ್ದೆ..ದೂರದ ಬೆಂಗಳೂರಿಗೆ ನಾಲ್ಕು ವರ್ಷಗಳ ಕಾಲೇಜು ಜೀವನಕ್ಕೆ ಹೊರಟ್ಟಿದ್ದೆ..ಆ ದಿನ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ಇಳಿಯುವ ನೀರನ್ನು ಮೊದಲ ಬಾರಿ ಕಂಡಿದ್ದೆ..

'ಅಯ್ಯೋ ಅಮ್ಮಾ', ತಡೆಯಲಾಗಿರಲ್ಲ...ಜೋರಾಗಿ ಕಿರಿಚಿಕೊಂಡಿದ್ದೆ..ಹೆಚ್ಚು ಸಮಯ ತುಟಿಗಳನ್ನು ತಡೆ ಹಿಡಿಯುವುದು ನನ್ನಿಂದ ಸಾಧ್ಯವಾಗಿರಲಿಲ್ಲ..ಹೆರಿಗೆ ನೋವಿನೊಂದಿಗೆ ಅಮ್ಮನ ನೆನೆಪು ಸೇರಿ ನೋವು ಇಮ್ಮಡಿಯಾಗಿತ್ತು...ನೋವಿನಲ್ಲಿ ಅಮ್ಮನಿಗೆಸೆದ ಸವಾಲು ಅರ್ಥ ಕಳೆದುಕೊಂಡಿತ್ತು..ಡಾಕ್ಟರ್, ಪ್ಲೀಸ್ ನನಗೆ ಎಪಿಡ್ಯುರಲ್ ಕೊಡಿ, ನೋವು ತಡೆಯಲಾಗುತ್ತಿಲ್ಲ, ಪ್ಲೀಸ್..ನನ್ನ ಕಿರುಚಾಟ ಜಾಸ್ತಿಯಾಗತೊಡಗಿತ್ತು..ರಾಘವಗೂ ಆಶ್ಚರ್ಯವಾಗಿತ್ತನಿಸುತ್ತದೆ..ಅಷ್ಟು ದಿನ ಬೇಡವೇ ಬೇಡವೆಂದು ಅವನೆದುರು ವಾದಿಸಿದವಳು ಹೇಗೆ ಮನಸ್ಸು ಬದಲಾಯಿಸಿದೆ ಎಂದು..ಅವನಿಗೂ ಅಪರೂಪದ ಅನುಭವ..ಕೆಲವೇ ನಿಮಿಷಗಳಲ್ಲಿ ಡಾಕ್ಟರ್ ಎಪಿಡ್ಯುರಲ್ ಹಾಕಿಸಿದರು, ನೋವು ಮೊದಲಿಗಿಂತ ಸ್ವಲ್ಪ ಕಡಿಮೆಯಾಯಿತು.

ದೂರದ ಬೆಂಗಳೂರಿನ ಜೀವನ ಮೊದಮೊದಲು ತುಂಬಾ ಕಷ್ಟವಾಗಿತ್ತು...ಯಾವಾಗಲೂ ಮನೆಯದ್ದೆ ನೆನಪು..ಒಮ್ಮೊಮ್ಮೆ ಎಲ್ಲ ಬಿಟ್ಟು ಮನೆಗೋಡೋಣ ಎನ್ನಿಸುತ್ತಿತ್ತು...ಕಾಲಕ್ರಮೇಣ ಎಲ್ಲ ಸರಿಯಾಗಿತ್ತು..ಹೊಸ ಗೆಳೆತನ..ಹೊಸ ಜಾಗ..ಹೊಸ ವಿಷಯಗಳು ನನ್ನಲ್ಲೂ ಹೊಸತನವನ್ನು ತಂದಿತ್ತು..ಮನೆಯಿಂದ ದೂರ ಹೋದವರು ಮನಸ್ಸಿಂದಲೂ ದೂರ ಹೋಗುತ್ತಾರಂತೆ..ನಿದಾನವಾಗಿ ಅಮ್ಮನ ಪ್ರೀತಿಯ ಬಂಧನದಿಂದ ನನ್ನನ್ನು ಬಿಚ್ಚಿಕೊಂಡಿದ್ದೆ...ಹೆಚ್ಚು ಸಮಯ ಬಂಧನದಿಂದ ಹೊರಗಿದ್ದು ತಿಳಿಯದ ನಾನು ನನಗರಿವಿಲ್ಲದೆ ರಾಘವನ ಬಂಧನದಲ್ಲಿ ಸಿಲುಕ್ಕಿದ್ದೆ..ಅಮ್ಮನ ಬಂಧನಕ್ಕಿನ್ತಲೂ ತುಂಬಾ ಆಪ್ಯಾಯಮಾನವೆನಿಸಿತ್ತು..ಅದೇ ಬಂಧನದಲ್ಲಿ ಕೊನೆ ತನಕ ಇರಲೂ ನಿರ್ಧರಿಸಿದ್ದೆ..ಕಾಲೇಜು ಮುಗಿಯುವ ಮೊದಲೇ ಇಬ್ಬರಿಗೂ ಬೆಂಗಳೂರಿನ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸ ದೊರೆತಿತ್ತು..ಕೈ ತುಂಬಾ ಸಂಬಳ ಬೇರೆ..ಕಾಲೇಜು ಮುಗಿದು ಮನೆಗೆ ಹೋದಾಗ ಯಾರಿಂದಲೂ ಮೊದಲಿನ ತರ ವಿರೋಧ ವ್ಯಕ್ತವಾಗಿರಲಿಲ್ಲ..ಸಂಬಳ ಜಾಸ್ತಿಯೆಂದೋ, ನಮ್ಮ ಮಾತು ಇವಳು ಕೆಳುವವಳಲ್ಲ ಎಂದೋ ತಿಳಿದಿರಲಿಲ್ಲ..ಆದರೂ ರಾಘವನ ವಿಚಾರ ಎತ್ತುವುದು ನನ್ನಿಂದ ಸಾಧ್ಯವಾಗಿರಲಿಲ್ಲ..ನಮ್ಮದೋ ಮಡಿವಂತರ ಕುಟುಂಬ..ಅಪ್ಪ ಊರ ದೇವಸ್ತಾನದ ಪುರೋಹಿತರು ಬೇರೆ..ಪ್ರೀತಿಯ ಅಮಲಿನಲ್ಲಿ ತೇಲುವಾಗ ನನಗೆ ರಾಘವನ ಜಾತಿ ಬೇಕಿರಲಿಲ್ಲ..ಅವನು ಕೆಳಜಾತಿಯವನು ಎಂದು ತಿಳಿಯುವ ಹೊತ್ತಿಗೆ ಮೇಲೆ ಬರಲಾರದಷ್ಟು ಆಳದಲ್ಲಿ ಮುಳುಗಿದ್ದೆ...

ಎಪಿಡ್ಯುರಲ್ ಪ್ರಭಾವವೋ ಏನು, ಜಾಸ್ತಿ ನೋವು ತಿಳಿಯುತ್ತಿರಲಿಲ್ಲ..ಗರ್ಭಕೋಶದ ಸ್ನಾಯುಗಳು ಸಂಕುಚಿಸುವುದು ಅನುಭವಕ್ಕೆ ಬರುತ್ತಿತ್ತು..ಆದರೂ ಮಗು ಹೊರಗಡೆ ಬರಲು ಅದು ಸಾಲದು ಎಂದು ದಾದಿಯರು ಸುಮ್ಮನಿದ್ದರು..ಕೆಲವು ಹೊತ್ತುಗಳ ಬಳಿಕ ರಕ್ತದೊತ್ತಡ ವಿಪರೀತ ಏರು ಪೇರಾಗತೊಡಗಿತು..ಮೂರು ಘಂಟೆಗಳ ಕಾಲ ನನ್ನನ್ನು ನೋವಿನಲ್ಲಿ ನೂಕಿದವರು ಆವಾಗ ಎಚ್ಚೆತ್ತು ಅಪರೇಷನ್ ತಿಯೇಟರತ್ತ ನನ್ನನ್ನು ಕೊಂಡೊಯ್ಯಲು ಅಣಿವಾದರು..

ಕೆಲಸಕ್ಕೆ ಸೇರಿ ಒಂದು ವರ್ಷವಾಗುತ್ತಿಂದತ್ತೆ ಮನೆಯಲ್ಲಿ ನನ್ನ ಮದುವೆಗೆ ಹುಡುಗ ಹುಡುಕಲು ಆರಂಭಿಸಿದ್ದರು..ಇನ್ನು ತಡ ಮಾಡುವುದು ಸರಿಯಲ್ಲ ಎಂದು ನನಗೂ ಅನ್ನಿಸಿತ್ತು..ಯಾರು ವಿರೋಧಿಸಿದರೂ ಅಮ್ಮ ನನ್ನ ಕೈಯನ್ನು ಬಿಡಲಾರಳುಎಂಬ ಧ್ರಿಢ ನಂಬಿಕೆ ನನ್ನಲ್ಲಿತ್ತು..ನನ್ನ ಎಲ್ಲ ನಿರ್ಧಾರಗಳಲ್ಲು ಅವಳು ನನ್ನೊಂದಿಗೆ ನಡೆದವಳು..ಮನೆಯಲ್ಲಿ ಯಾರು  ವಿರೋದಿಸಿದರೂ ಎಲ್ಲರನ್ನು ಒಪ್ಪಿಸುತ್ತಾಳೆ ಎನ್ನುವ ಅಚಲವಾದ ವಿಶ್ವಾಸ..ಜಾತಿ ಒಂದು ಬಿಟ್ಟರೆ ಬೇರೆ ಯಾವುದರಲ್ಲೂ ರಾಘವ ಕಡಿಮೆ ಇರಲಿಲ್ಲ..ಊರಿಗೆ ಹೋದವಳು ಯಾರೂ ಇಲ್ಲದ ಸಮಯ ನೋಡಿ ಅಮ್ಮನಲ್ಲಿ ವಿಷಯ ಪ್ರಸ್ತಾಪಿಸಿದ್ದೆ..ಆದರೆ ನಾನು ಅಂದು ಕೊಂಡಂತೆ ಆಗಲಿಲ್ಲ..ಅಮ್ಮ ಬದಲಾಗಿದ್ದಳು..ವಿಷಯ ಕೇಳುತ್ತಿದ್ದಂತೆಯೇ ಕೋಪದಿಂದ ಅಮ್ಮನ ಮುಖ ಕೆಂಪಗಾಗಿತ್ತು..ಅವತ್ತೇ ಮೊದಲು, ಅಮ್ಮನನ್ನು ಆ ರೀತಿ ನೋಡಿದ್ದು..ಮೊದ ಮೊದಲು ಗದರಿಸಿದಳು..ಮತ್ತೆ ಗೋಗರೆದಳು..ಕೊನೆಗೆ ಅತ್ತಳು..ನನ್ನ ಮನಸ್ಸು ಕಲ್ಲಾಗಿತ್ತು..ಸಂಜೆಯ ತನಕ ಅಮ್ಮ ಯಾರೊಂದಿಗೂ ಮಾತನಾಡಲಿಲ್ಲ..ನನ್ನ ಮನಸ್ಸೂ ವ್ಯಗ್ರವಾಗಿತ್ತು..ನನಗೆ ಪ್ರಿಯವೆನಿಸಿದ ಎಲ್ಲ ವಸ್ತುಗಳನ್ನು ತುಂಬಿ ಸಂಜೆ ವೇಳೆಗೆ ಬೆಂಗಳೂರಿನ ಬಸ್ಸನ್ನು ಏರಿದ್ದೆ..ಹಿಂದಿರುಗುವ ಆಲೋಚನೆ ನನ್ನಲ್ಲಿ ಇರಲಿಲ್ಲ..ಅಮ್ಮನೂ ಬಂದಿದ್ದಳು..ಬಸ್ಸು ಹತ್ತುವ ಮುಂಚೆ ನೀರು ತುಂಬಿದ ಕಂಗಳಲ್ಲಿ ಹೇಳಿದ್ದಳು..'ಮಗಳೇ, ನಾನೀಗ ಅನುಭವಿಸುತ್ತಿರುವ ನೋವು ನಿನಗೂ ಒಂದು ದಿನ ಅರ್ಥವಾಗುತ್ತದೆ, ಆದರೆ ಆ ನೋವನ್ನು ಹಂಚಿಕೊಳ್ಳಲು ಆವಾಗ ನಾನಿರುವುದಿಲ್ಲ್ಲ'..ಅಮ್ಮನ ಮಾತುಗಳು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ..ಅಮ್ಮನ ಕಣ್ಣುಗಳಲ್ಲಿ ಸುರಿಯುತ್ತಿರುವ ನೀರಿಗೆ ನನ್ನ ಪ್ರೇಮದ ಬಿಸಿಯೊಡನೆ ಸೆಣೆಸುವ ಶಕ್ತಿಯೂ ಇರಲಿಲ್ಲ..

ಆಪರೇಶನ್ ಅವಾಗಲೇ ಶುರುವಾಗಿತ್ತು..ಅರಿವಳಿಕೆ ಇಂಜೆಕ್ಷನ್ ನಿಂದಾಗಿ ನನಗೆ ಏನೂ ಸರಿಯಾಗಿ ತಿಳಿಯುತ್ತಿರಲಿಲ್ಲ..ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಹೊಟ್ಟೆಯನ್ನು ಬಗೆದು ಹೊಸ ಜೀವವೊಂದು ಹೊರಬರಲಿದೆ..ಏನೋ ವಿಚಿತ್ರವಾದ ಅನುಭವ..ಅಪರೇಷನ್ ಕತ್ತರಿ ಹೊಟ್ಟೆಯನ್ನು ಕತ್ತರಿಸಲು ಆರಂಬಿಸಿದೆ ಅನಿಸುತ್ತಿತ್ತು..ನನಗೆ ನೋಡಲು ಸಾಧ್ಯವಿರಲಿಲ್ಲ..ಆದರೆ ಅನುಭವವಾಗುತ್ತಿತ್ತು.. ರಾಘವ ಪಕ್ಕದಲ್ಲೇ ನಿಂತು ನನಗೆ ದೈರ್ಯ ತುಂಬುತ್ತಿದ್ದ..ಅಂದಿನಂತೆ...

ವಾಪಾಸು ಬಂದವಳಿಗೆ ಅಮ್ಮನದೇ ಚಿಂತೆ..ಅಮ್ಮನ ಕೊನೆಯ ಮಾತುಗಳು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ..ಅಮ್ಮ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ..ರಾಘವನಿಗೆ ಅದೇನು ದೊಡ್ಡ ವಿಷಯವೆನಿಸಲಿಲ್ಲ..'ಅಂತರ್ಜಾತಿ ವಿವಾಹ ಎಂದರೆ ಎಲ್ಲ ಹೆತ್ತವರೂ ಹೀಗೆಯೇ ಮಾಡುತ್ತಾರೆ..ಮಕ್ಕಳ ಮನಸ್ಸು ಬದಲಾಗಲಿ ಎಂದು'..ಹಾಗೆಯೇ ಕೇಳಿದ್ದ..'ನನ್ನನ್ನು ಬಿಟ್ಟು ಬೇರೆಯವರನು ಮದುವೆಯಾಗಿ ನೀನು ಬದುಕಿರಬಲ್ಲೆಯ' ಎಂದು...ಅವನನ್ನು ಬಿಟ್ಟಿರುವ ಆಲೋಚನೆಯೇ ನನ್ನಲ್ಲಿ ಇದುವರೆಗೆ ಬಂದಿರಲಿಲ್ಲ..ಅವನನ್ನು ಬಿಟ್ಟು ನಾನು ಸುಖವಾಗಿರಬಲ್ಲೆನೆ..ಇಲ್ಲ..ಕನಿಷ್ಠ ಬದುಕಿರಬಲ್ಲೆನೆ..ಹೃದಯ ಇಲ್ಲ ಇಲ್ಲ ಎಂದು ಬಡಿದುಕೊಳ್ಳತೊಡಗಿತು..ಮುಂದಿನ ತಿಂಗಳಲ್ಲಿಯೇ ರಾಘವನ ಊರಿನಲ್ಲಿ ಸರಳವಾಗಿ ಮದುವೆಯಾದೆವು..ನಮ್ಮ ಮನೆಯಲ್ಲಿ ಹೇಳುವ ಧೈರ್ಯವಿರಲಿಲ್ಲ..ನಾನೇ ತಿಳಿಸುವ ಅನಿವಾರ್ಯತೆಯೂ ಇರಲಿಲ್ಲ...ವಿಷಯ ನಮ್ಮ ಊರಿಗೂ ಹೋಗಿತ್ತು..ರಾಘವ ಹೇಳಿದಂತೆ ಅಮ್ಮ ಸಾಯಲಿಲ್ಲ..ಮಗಳು ತಮ್ಮ ಪಾಲಿಗೆ ಸತ್ತಳೆಂದು ಎಲ್ಲರೂ ಸೇರಿ ನಾನು ಬದುಕಿರುವಾಗಲೇ ನನ್ನ ಪುಣ್ಯ ಕ್ರಿಯೆಗಳನ್ನು ಮಾಡಿ ಉಂಡು ಕೈ ತೊಳೆದುಕೊಂಡರು..

ಹೊಟ್ಟೆಯ ಒಳಗೆ ಎರಡು ಮೂರು ಕೈಗಳು ಓಡಾಡಿದ ಅನುಭವ..ಬಹುಶಹ ಮಗುವನ್ನು ಹೊರ ತೆಗೆಯುತ್ತಿದ್ದಾರೆ..ಇನ್ನೇನು ಒಂಭತ್ತು ತಿಂಗಳ ಯಮಯಾತನೆಯ ಸಿಹಿ ಫಲವನ್ನು ನೋಡುವ ಸಮಯ..ಎದೆ ಜೋರಾಗಿ ಬಡಿದುಕೊಳ್ಳತೊಡಗಿತು..ಹೊಟ್ಟೆಯೊಳಗಿನ ಭಾರವೆಲ್ಲ ಒಮ್ಮೆಲೇ ಹೋದ ಅನುಭವ..ನನ್ನ ಮಗು ನನ್ನನ್ನು ನೋಡಲು ಬಂತೆನಿಸುತ್ತದೆ..ಮಗುವಿನ ಕೂಗು ಕೇಳಿಸಿತು..ಮನಸ್ಸಲ್ಲಿ ಏನೇನೋ ವಿಚಿತ್ರ ಭಾವನೆಗಳು..ಸಾವಿರ ವರ್ಷಗಳ ಕನಸು ನನಸಾದ ಹಾಗೆ..ಕೆಲಕ್ಷಣಗಳಲ್ಲಿ ಮಗುವನ್ನು ನನ್ನ ಸಮೀಪ ತಂದರು..ಸುಂದರವಾದ ಹೆಣ್ಣುಮಗು..ಕಣ್ಣಲ್ಲಿ ನೀರು ತುಂಬಿ ಬಂದಿತು..ರಾಘವ ಹೇಳುತ್ತಿದ್ದ..'ಮಗಳು ನಿನ್ನ ತದ್ರೂಪ' ಎಂದು..ಇನ್ನೊಮ್ಮೆ ನೋಡಿದೆ....ನನ್ನಂತೆಯೇ ಇದ್ದಾಳೆಯೇ.. ಇಲ್ಲ ಎನಿಸಿತು..ಮತ್ತೊಮ್ಮೆ ನೋಡಿದೆ..ಸಂದೇಹವೇ ಇಲ್ಲ..ನನ್ನ ಮಗಳು ನನ್ನಮ್ಮನ ತದ್ರೂಪ..ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು...

ರಾಘವನೆಂದಂತೆ ನಮ್ಮ ಮದುವೆ ಸುದ್ದಿ ಕೇಳಿದೊಡನೆ ಅಮ್ಮ ಸಾಯಲಿಲ್ಲ...ಆದರೆ..ಅವಳು ಬದುಕಲೂ ಇಲ್ಲ..ಅವಳ ಪಾಲಿಗೆ ನಾನು ಸತ್ತ ಒಂಭತ್ತು ತಿಂಗಳಲ್ಲಿ ಅಮ್ಮನೂ ವಿಧಿವಶಳಾಗಿದ್ದಳು..ಬಹುಶ ಆ ಒಂಭತ್ತು ತಿಂಗಳು ಅವಳು ಮತ್ತೆ ನನ್ನ ಹೆರಿಗೆಯ ನೋವನ್ನು ಅನುಭವಿಸಿರಬೇಕು..ಅಮ್ಮ ಸತ್ತು ನನ್ನ ಮಗಳಾಗಿ ಹುಟ್ಟಿದಳೇ...ಅಳು ತಡೆಯಲಾಗಲಿಲ್ಲ..ಮತ್ತೆ ಹೆರಿಗೆಯ ನೋವು  ಶುರುವಾದ ಹಾಗಾಯಿತು..ಇಲ್ಲ..ಅದಕ್ಕಿಂತ ತೀವ್ರವಾಗಿದೆ...ತಡೆಯಲಾಗಲಿಲ್ಲ...ನನ್ನ ನೋವನ್ನು ತಡೆಯುವ ಶಕ್ತಿ ಈಗ ಯಾವ ಅರಿವಳಿಕೆಗೂ ಇರಲಿಲ್ಲ...  

Friday, February 10, 2012

ಪರಿತ್ಯಕ್ತ

ಗೋಡೆಯ ಮೇಲಿನ ಸುಂದರವಾದ ಗಡಿಯಾರ ಒಂಭತ್ತು ಘಂಟೆಯನ್ನು ಸೂಚಿಸುತ್ತಿತ್ತು. ನನ್ನ ಜನ್ಮ ದಿನಕ್ಕೆ ಭೂಮಿಕ ಇವತ್ತಷ್ಟೇ ಕೊಟ್ಟ ಅನಿರೀಕ್ಷಿತ ಉಡುಗೊರೆ. ಅದರೊಂದಿಗೆ ದೂರದ ಸರೋವರದಲ್ಲಿ ದೋಣಿ ವಿಹಾರ ಬೇರೆ. ನನಗದು ಇಷ್ಟ ಅಂತ ಅವಳಿಗೆ ಯಾರು ಹೇಳಿದರೋ ಗೊತ್ತಿಲ್ಲ, ಅವಳ ಇಷ್ಟವೇ ನನ್ನ ಇಷ್ಟ ಅಂತ ಮಾಡಿರಬೇಕು, ಪಾಪ.

ದಿನವಿಡೀ ಸುತ್ತಿದ್ದರಿಂದ ಸುಸ್ತಾಗಿ ಆವಾಗಲೇ ಮಲಗಿದ್ದಳು. ನನಗೆ ನಿದ್ದೆ ಮಾಡೋ ಸಮಯವಲ್ಲ, ನಿದ್ದೆ ಬರುವ ಹಾಗೂ ಇರಲಿಲ್ಲ. ಇಂದು ನನ್ನ ಜನುಮ ದಿನ...ಆದರೂ ಕಿತ್ತು ತಿನ್ನುವ ಬೇಸರ. ಎಲ್ಲ ಇದ್ದರೂ ಏನನ್ನೋ ಕಳೆದುಕೊಂಡ ಭಾವನೆ. ಮನೆಯವರನ್ನು ಬಿಟ್ಟರೆ ಶುಭಾಷಯ ಕೋರಿದ ಗೆಳೆಯರು ಯಾರೊಬ್ಬರೂ ಇರಲಿಲ್ಲ, ಕಳೆದ ವರ್ಷದಂತೆ...

ಅವರನ್ನು ದೂಷಿಸುವಂತಿಲ್ಲ, ಇವತ್ತು ನನ್ನ ಜನ್ಮ ದಿನ ಅನ್ನುವ ಬಗ್ಗೆ ಅವರಿಗೆ ಗೊತ್ತಿರುವುದೇ ಅನುಮಾನ. ಕಳೆದ ವರ್ಷವಷ್ಟೇ ಪರಿಚಯವಾದ ಅವರಿಗೆ ಇವೆಲ್ಲ ಹೇಗೆ ಗೊತ್ತಾಗಬೇಕು. ಬೇರೆಯವರಂತೆ ಫೆಸ್ ಬುಕ್, ಆರ್ಕುಟಲ್ಲಿಹಾಕಿಕೊಂಡಿದ್ದರೆ ತಾನೇ ಗೊತ್ತಾಗಿರೋದು...

ಅಂದ ಹಾಗೆ ನಾನ್ಯಾಕೆ ಫೇಸ್ ಬುಕ್ಕಲ್ಲಿ ಅಕೌಂಟ್ ಮಾಡ ಹೋಗಲಿಲ್ಲ... ಮದುವೆ ಸಮಯದಲ್ಲಿ ಭೂಮಿಕ ಪರಿ ಪರಿಯಾಗಿ ಕೇಳಿಕೊಂಡಳಲ್ಲ... ಅದರಲ್ಲೆಲ್ಲ ನನಗೆ ಆಸಕ್ತಿ ಇಲ್ಲ ಅಂತ ತಪ್ಪಿಸಿಕೊಂಡಿದ್ದೆ. ನಿಜವಾಗಲೂ ನನಗದರಲ್ಲಿ ಆಸಕ್ತಿ ಇರಲಿಲ್ಲವೇ? ಅಥವಾ... ನನ್ನ 'ಭೂತ'ವನ್ನು ಅವಳಿಗೆ ಪರಿಚಯಿಸಲು ನನಗಿಷ್ಟವಿರಲಿಲ್ಲವೇ... ಗೆಳೆಯರೆನಿಸಿಕೊಂಡವರನ್ನೆಲ್ಲಮರೆತು ಹೊಸ ಬದುಕು ಆರಂಭಿಸಲು ಅದಾಗಲೇ ನಾನು ನಿಶ್ಚಯಿಸಿದ್ದೆನೆಲ್ಲ...ಮತ್ತೆ ಅಂತರ್ಜಾಲದಲ್ಲಿ ಕ್ರಿಯಾಶೀಲನಾಗುವುದು ಬೀದಿಯ ಮಾರಿಯನ್ನು ಮನೆಗೆ ಕರೆ ತಂದಂತೆ ಅಂದು ಹೆದರಿದೆನೆ... ಎಲ್ಲಾ ಗೋಜಲು ಗೋಜಲೆನಿಸುತ್ತಿದೆ... 

ಇಪ್ಪತ್ತು ವರುಷಗಳಿಗೂ ಹೆಚ್ಚು ಕಾಲ ಜೊತೆಯಾಗಿದ್ದವರಿಂದ ದೂರವಾಗಿ ಬದುಕುವುದು ಸುಲಭವಲ್ಲವೆಂದು ನನಗೂ ತಿಳಿದಿತ್ತು... ಕಳೆದ ಹತ್ತು ವರುಷಗಳಿಂದ ಎಲ್ಲ ಒಳ್ಳೆ ಕೆಟ್ಟ ಕೆಲಸಗಳನ್ನು ಜೊತೆ ಜೊತೆಯಾಗಿಯೇ ಮಾಡಿರಲಿಲ್ಲವೇ... ನಾವು ಆರು ಜನರೂ ಸೇರಿ. ಅದೆಷ್ಟು ಬಾರಿ ಬೆಳಗ್ಗೆ ಎರಡು ಮೂರು ಘಂಟೆಯವರೆಗೂ ಕುಡಿಯುತ್ತಾ ಕುಳಿತಿರಲಿಲ್ಲ. ಯಾವ ವಾರಂತ್ಯದಲ್ಲಾದರು ಒಬ್ಬರನ್ನು ಬಿಟ್ಟು ಮಜಾ ಉಡಾಯಿಸಲು ಹೊರಟಿದ್ದುದು ಸರಿಯಾಗಿ ನೆನಪಿದೆಯೇ... ಖಂಡಿತಾ ಇಲ್ಲ. ಎಲ್ಲವೂ ಜೊತೆ ಜೊತೆಗೆ...ಯಾಕೆ ಅವೆಲ್ಲ ಬದಲಾಯಿತು.. ಅಷ್ಟು ವೇಗವಾಗಿ..

ನನ್ನ ಜೀವನದಲ್ಲಿ ಮೆಲುವಾಗಿ ಬಂದ 'ಸಂಗೀತ' ಯಾಕೆ ಅವರಿಗೆ ಅಪಸ್ವರವಾದಳು? ಅವರಿಗೆ ಬಹುಷಃ ಯಾವತ್ತು ಅರ್ಥವಾಗಲಾರದು, ಸಂಗೀತಳಂಥವಳನ್ನು ಪಡೆಯಲು ಯಾವ ರೀತಿಯ ತಪಸ್ಸು ಮಾಡಬೇಕೆಂದು. ಯಾವ ಕೋನದಿಂದ ನೋಡಿದರೂ ಯಾವ ಸಿನಿಮಾ ನಟಿಯರಿಗಿಂತ ಕಡಿಮೆಯಿರಲಿಲ್ಲ ನನ್ನ ಸಂಗೀತ...ಅಂತಹವಳು ನನ್ನ ಪ್ರೀತಿ ಬಯಸಿ ಬಂದರೆ ಇವರಿಗ್ಯಾಕೆ ಕುಟುಕಿದಂತಾಗುತ್ತಿತ್ತು... ಯಾರೋ ಹೇಳಿದ್ದ ಮಾತು, ನಿಜವಾದ ಗೆಳೆಯರು ಗೊತ್ತಾಗುವುದು ಪರೀಕ್ಷೆಯ ನಂತರವೇ ಅಂತೆ. ಯಾವ ಕಷ್ಟವೂ ಇಲ್ಲದೆ ಆರಾಮವಾಗಿ ತಿಂದು ಕುಡಿಯುವಾಗ ಎಲ್ಲರೂ ಗೆಳೆಯರೇ...

ಮೊದಲ ಬಾರಿ ಸಂಗೀತಳ ಬಗ್ಗೆ ಅವರಲ್ಲಿ ಹೇಳಿದಾಗ ಎಷ್ಟು ಖುಷಿಯಾಗಿದ್ದರು... ಮೊದಲ ಮಾಡಿ ಅವಳನ್ನು ಭೇಟಿ ಮಾಡಿಸಿದಾಗಲೂ ಅಷ್ಟೇ ಸಂತೋಷವಾಗಿರಲಿಲ್ಲವೇ... ಅಥವಾ ಖುಷಿಯಾಗಿರುವ ಹಾಗೆ ನಟಿಸಿದರೆ? ಮೊದಮೊದಲು ಸರಿಯಾಗಿಯೇ ಇದ್ದ ಸಂಬಂದ ದಿನಗಳೆದಂತೆ ಹೇಗೆ ಬದಲಾಗುತ್ತ ಹೋಯಿತು... ಆರಂಭದಲ್ಲಿ ನನಗೆ ಬೇಕಾದ ಸಹಕಾರ ಕೊಡುತ್ತಿದ್ದವರು ಬರಬರುತ್ತ ಯಾಕೆ ಅಷ್ಟು ಸ್ವಾರ್ಥಿಗಳಾದರು...ಎಲ್ಲ ಉತ್ತರವಿಲ್ಲದ ಪ್ರಶ್ನೆಗಳು.

ನನಗಾದರೂ ಸಂಗೀತಳ ಜೊತೆ ಸ್ವಚ್ಚಂದವಾಗಿ ಸಮಯ ಕಳೆಯಲು ನಮ್ಮ ಮನೆಯಲ್ಲದೆ ಬೇರೆಲ್ಲಿ ಆಗುತ್ತಿತ್ತು. ಈ   ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಜಿಗಿ ಜಿಗಿ ಅನ್ನುವ ಜನ. ದಿನಕ್ಕೊಂದು ಘಂಟೆ ಆರಾಮವಾಗಿ ಅವಳೊಡನೆ ಪ್ರೇಮ ಸಲ್ಲಾಪ ಮಾಡೋಣವೆಂದರೆ ಇವರಿಗೆ ನನ್ನ ಸಮಸ್ಯೆ ಅರ್ಥವಾಗದೆ? ಬೇರೆ ಸಮಯದಲ್ಲಿ ರಾತ್ರಿ ಹತ್ತು ಹನ್ನೊಂದು ಘಂಟೆಯವರೆಗೆ ಆಫೀಸಿನಲ್ಲಿರುವವರಿಗೆ  ನನಗೋಸ್ಕರ ಒಂದು ಘಂಟೆ ತ್ಯಾಗ ಮಾಡಲು ಆಗುತ್ತಿರಲಿಲ್ಲವೇ?

ಒಮ್ಮೊಮ್ಮೆ ಸಂಗೀತ ಹೇಳಿದ್ದೆ ಸರಿ ಅನ್ನಿಸುತ್ತಿತ್ತು. ಅವಳಂಥವಳು ಸಿಕ್ಕಿದುದು ಇವರೆಲ್ಲರಿಗೆ ಒಳಗೊಳಗೇ ಹೊಟ್ಟೆ ಉರಿ. ನಿಜವಾಗಿಯೂ ಗೆಳೆಯರಾಗಿದ್ದರೆ ನನ್ನ ಅಗತ್ಯ ಅವರಿಗೆ ಅರ್ಥವಾಗದಿರುತ್ತಿತ್ತೆ? ಅದಕ್ಕೊಸ್ಕರವಲ್ಲವೇ ಅವಳೂ ಕೂಡ ಇವರಿಂದ  ಆದಷ್ಟು ದೂರ ಇರಲು ಬಯಸುತ್ತಿದ್ದುದು.

ಸಂಗೀತ ನನ್ನ ಜೊತೆಯಲ್ಲಿರುವಾಗ ನನಗವರ ಯೋಚನೆಯೇ ಇರಲಿಲ್ಲ ಎಂದು ಆರೋಪಿಸಿದರಲ್ಲ..ನಿಜವೇ? ಕೆಲವು ಬಾರಿ ಅವರು ಕರೆದಾಗ ಹೋಗಲಾಗಲಿಲ್ಲವೆಂದ ಮಾತ್ರಕ್ಕೆ ನಾನವರಿಂದ ದೂರವಾಗಿದ್ದೆನೆ.. ನನಗನ್ನಿಸಿರಲಿಲ್ಲವಲ್ಲ..ಸ್ನೇಹ, ಪ್ರೇಮ ಎರಡನ್ನು ನಿಬಾಯಿಸುವ ಕಷ್ಟದ ಬಗ್ಗೆ ಅವರಿಗೆಲ್ಲಿಂದ ಅರಿವಾಗಬೇಕು...ಸಂಗೀತಳಿಗೆ ಅವರ ಸ್ನೇಹ ಇಷ್ಟವಾಗದಿದ್ದರೆ ಅದರಲ್ಲಿ ನನ್ನದೇನು ತಪ್ಪಿದೆ... ನನಗೆ ಸಂಗೀತಳ ಸಾಮೀಪ್ಯ ಅವರ ಸ್ನೇಹಕ್ಕಿಂತ ಹೆಚ್ಚಾದರೆ ಅದು ತಪ್ಪೇ? ನನ್ನ ಸ್ಥಾನದಲ್ಲಿ ಅವ ರ್ಯಾರಾದರೂ ಇದ್ದಿದ್ದರೆ ಬೇರೆ ತರ ನಡೆಯುತ್ತಿದ್ದರೆ.. ಆ ವಯಸ್ಸೇ ಹಾಗಂತ ಅವರಿಗೆ ತಿಳಿದಿರದ ವಿಷಯವೇ?

ಇಪ್ಪತ್ತು ವರ್ಷಗಳ ಕಾಲ ಜೊತೆ ಜೋತೆಯಾಗಿದ್ದರೂ ನನ್ನನ್ನವರು ಅರ್ಥೈಸಿಕೊಳ್ಳಲು ಯಾಕೆ ವಿಫಲರಾದರು? ಅಥವಾ...ಸಂಗೀತಳ ಮೋಹದಲ್ಲಿ ನಾನೇ ಸ್ನೇಹದ ಎಲ್ಲೆಯನ್ನು ದಾಟಿ ಹೋಗಿದ್ದೆನೇ...ತಿಳಿಯದಾಗಿದೆ...ಎರಡು ವರುಷಗಳ ಕಾಲ ಜೊತೆಯಿದ್ದವಳು ಒಳ್ಳೆಯ ಮದುವೆ ಸಂಬಂಧ ಬಂತೆಂದು ಕಾಲ ಕೆಸರಂತೆ ದೂರ ಸರಿಸಿದಾಗ ಮೊದಲಿನಂತೆ ಅವರ ಬಳಿಯೇ  ಹೋದೆನೆಲ್ಲ... ಎಲ್ಲವನ್ನು ಮರೆತು ಮತ್ತೆ ಅವರೊಳಗೊಬ್ಬನಾದೆನಲ್ಲ...ಅವರೂ ಅಷ್ಟೇ ಆತ್ಮೀಯತೆಯಿಂದ ನನ್ನನ್ನು ಬಳಿ ಸೇರಿಸಿದ್ದರಲ್ಲ..

ನಿಜವಾಗಲೂ ಸೇರಿಸಿದ್ದರೆ? ಅದೂ ಸರಿಯಾಗಿ ತಿಳಿಯದಾಗಿದೆ...ನಮ್ಮ ಸಂಬಂಧ ಮೊದಲಿನಂತೆಯೇ ತಿಳಿಯಾಗಿತ್ತೆ? ಅವಕಾಶ ಸಿಕ್ಕಾಗಲೆಲ್ಲ ಸಂಗೀತಳ ವಿಷಯವೆನ್ನೆತ್ತಿ ಹರಿತವಾದ ಮುಳ್ಳಿನಂತೆ ಚುಚ್ಚುತ್ತಿರಲಿಲ್ಲವೇ? ಎಷ್ಟೋ ಬಾರಿ ಅದಕ್ಕೋಸ್ಕರವೇ ಮತ್ತೆ ನನ್ನ ಜೊತೆ ಸೇರಿದ್ದಾರೆ ಅನಿಸುತ್ತಿತ್ತಲ್ಲ. ಒಮ್ಮೊಮ್ಮೆ ಬೇಜಾರಾಗಿ ಹೇಳಿದಾಗ ಎಷ್ಟು ಆರಾಮದಲ್ಲಿ ತಪ್ಪಿಸಿಕೊಳ್ಳುತ್ತಿದ್ದರು, ನಾನೂ ಕೂಡ ಅವರ ಹಾಗೆ ತಮಾಷೆ ಮಾಡುತ್ತಿದ್ದೆ ಎಂದು. ಹೌದು..ನಾನೂ ತಮಾಷೆ ಮಾಡುತ್ತಿದ್ದೆ, ಆದರೆ ಈ ರೀತಿಯಲ್ಲಿ ಚುಚ್ಚುತ್ತಿದ್ದೆನೆ..ಅನ್ನಿಸಲಿಲ್ಲ..ಎಷ್ಟು ಕಷ್ಟವಾದರೂ ಕೂಡ ಹೇಗೆ ಸಹಿಸಿಕೊಂಡಿದ್ದೆ..ಸಹಿಸಿಕೊಳ್ಳದೆ ಬೇರೆ ಯಾವ ಮಾರ್ಗ ತಾನೇ ಇತ್ತು, ಅವರನ್ನು ಬಿಟ್ಟು ಇರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ...ಅದೂ ಸಂಗೀತಳ ನಶೆ ಇಳಿದ ಮೇಲೆ.. ಈ ಸ್ನೇಹ ಕೂಡಾ ಒಂದು ರೀತಿಯ ಚಟ ಇದ್ದ ಹಾಗೆ ..ಒಮ್ಮೆ ಅದರಲ್ಲಿ ಸಿಕ್ಕಿದರೆ ಮತ್ತೆ ಹೊರ ಬರುವುದು ಕಟಿಣ...

ಎಲ್ಲರು ಒಬ್ಬೊಬ್ಬರಾಗಿ ಮದುವೆಯಾದ ಮೇಲೆ ಅರಿದ್ದ ನಮ್ಮ ತಂಡ ಹನ್ನೊಂದಕ್ಕೇರಿತ್ತು...ತವರನ್ನು ಬಿಟ್ಟು ಬಂದವರು  ಹಳೆಯ ಗೆಳೆತನವನ್ನೂ ಬಿಟ್ಟು ನಮ್ಮ ತಂಡದಲ್ಲೇ ಎಷ್ಟು ಸಲೀಸಾಗಿ ಬೆರೆತು ಬಿಟ್ಟಿದ್ದರು... ಒಂದೊಂದು ಸಲ ಎನಿಸುತ್ತಿತ್ತಲ್ಲ, ಸಂಗೀತಳೇಕೆ ಇವರಂತಾಗಲಿಲ್ಲ ಎಂದು...ನಾನೇ ಯಾಕೆ ಇವರನ್ನು ಬಿಟ್ಟು ಅವಳ ಜೊತೆ ಅವಳ ಗುಂಪಿನಲ್ಲಿ ಸೇರಬೇಕಾಯಿತು? ಉತ್ತರವಿರಲಿಲ್ಲ ನನ್ನ ಪ್ರಶ್ನೆಗಳಿಗೆ...

ಗುಂಪು ದೊಡ್ಡದಾದ ಹಾಗೆ ನನ್ನ ಸಮಸ್ಯೆಯೂ ದೊಡ್ಡದಾಯಿತು...ಐದು ಜನಕ್ಕೆ ತಿಳಿದಿದ್ದ ಸತ್ಯಗಳು ಈಗ ಹತ್ತು ಜನರಲ್ಲಿ ಹಂಚಿ ಹೋಗಿತ್ತು...ಕಾಲೆಳೆಯುವವರ ಜೊತೆ ಕಾಲು ಕೊಟ್ಟು ಬೀಳಿಸುವವರೂ ಸೇರಿದ್ದರು...ಅಷ್ಟಕ್ಕೇ ಅದು ನಿಂತಿದ್ದರೆ ಸಾಕಿತ್ತು...ನಾನೂ ಖುಷಿಯಾಗಿಯೇ ಅವರ ಜೊತೆ ಇರುತ್ತಿದ್ದೆ...ಆದರೆ...

ಎಲ್ಲರಂತೆ ಮದುವೆಯಾಗಿ ಹಿಂದಿನದನ್ನೆಲ್ಲ ಮರೆಯಲು ನಾನು ತಯಾರಾಗಿದ್ದೆ. ಆವಾಗಲೇ ಬಂದಿತ್ತಲ್ಲ ಸಂಧ್ಯಾಳ ಸಂಬಂಧ..ಜಾತಕವೆಲ್ಲ ಕೂಡಿ ಬಂದು ಮನೆಯವರೆಲ್ಲರ ಒಪ್ಪಿಗೆ ಪಡೆದ ಮೇಲೆ ನಾನು ತಿಳಿಸಿದ್ದು, ನನ್ನ ಗೆಳೆಯರ ಬಳಗದಲ್ಲಿ...ಅದಾದ ಕೆಲವೇ ದಿನಗಳಲ್ಲಿ ಮುರಿದು ಬಿದ್ದಿತ್ತಲ್ಲ ಸಂಧ್ಯಾಳ ಸಂಬಂಧ...ಅಲ್ಲಿಯ ತನಕ ಚೆನ್ನಾಗಿಯೇ ಮಾತನಾಡಿದ ಸಂಧ್ಯಾಳಿಗೆ ಇದ್ದಕ್ಕಿದ್ದ ಹಾಗೆ ಏನಾಯಿತು...ನನಗೆ ತಿಳಿಯದಾಯಿತಲ್ಲ ಕೆಲ ದಿನಗಳ ತನಕ..ನನ್ನ 'ಭೂತ'ದ ಬಗ್ಗೆ ಅವಳಿಗೆ ಯಾರಾದರೂ ಚುಚ್ಚಿರಬಹುದೇ...ಹಾಗೆನಾದಲೂ ಇದ್ದಲ್ಲಿ ನಮ್ಮದೇ ಗುಂಪಿನ ಶಾಂತಿಯಲ್ಲದೆ ಇನ್ನಾರು ಮಾಡಿರಲು ಸಾಧ್ಯ? ನಮ್ಮಿಬ್ಬರ ಪರಿಚಯವಿದ್ದುದು ಅವಳೊಬ್ಬಳಿಗೆ ತಾನೇ?...

ನನಗಿದು ಮೊದಲು ಹೊಳೆಯಲೇ ಇಲ್ಲವಲ್ಲ...ಅವರ ಚುಚ್ಚುಮಾತುಗಳ ನೋವಿನಲ್ಲಿ ಸೇಡೂ ಸೇರಿರುವುದು ನನಗರಿವಾಗದೆ ಹೋಯಿತಲ್ಲ..ಸಂಧ್ಯಾಳ ಸಂಬಂಧ ಮುರಿಯಲು ಶಾಂತಿಯಲ್ಲದೆ ಬೇರಾರು ಕಾರಣವಾಗಿರಲು ಸಾಧ್ಯ..ಒಂದೊಮ್ಮೆ ಅವಳಿಂದಾಗಿ ಈ ಸಂಬಂಧ ಮುರಿದು ಬಿದ್ದಿಲ್ಲ ಅಂದರೂ, ಮುಂದೊಮ್ಮೆ ನನ್ನ ಪತ್ನಿಯೊಡನೆ ನನ್ನ 'ಭೂತ'ವನ್ನು ಕೆದಕದೆ  ಇರಬಲ್ಲುರೆ...ಮಾಡುವುದನ್ನು ಮಾಡಿ ಕೊನೆಗೆ ತಮಾಷೆಗೆ ಹೇಳಿದೆ ಅಂತ ಕೈ ತೊಳೆದುಕೊಂಡರೆ...ನನ್ನ ಭವಿಷ್ಯದ ಗತಿ...ಯೋಚನೆಯಲ್ಲಿ ಏನು ಮಾಡುವುದೆಂದೇ ತೋಚಿರಲಿಲ್ಲ...

ಕ್ರಮೇಣ ನನಗರಿವಿಲ್ಲದೆ ನಾನು ಅವರಿಂದ ದೂರವಾಗತೊಡಗಿದ್ದೆ...ಅಲ್ಲ..ಬೇಕಂತಲೇ ನನ್ನ ಭವಿಷ್ಯದ ಭದ್ರತೆಗಾಗಿ ಅವರಿಂದ ದೂರ ಸಾಗತೊಡಗಿದೆನ...ಹೌದೆನಿಸುತ್ತಿದೆ..ಹಳೆಯದೆಲ್ಲವ ಮರೆಯಲು ನನ್ನ ಗೆಳೆಯರಿಂದ ದೂರ ಹೋಗದೆ ಬೇರೆ ಯಾವ ಮಾರ್ಗ ತಾನೇ ನನ್ನಲ್ಲಿ ಉಳಿದಿತ್ತು?

ನನ್ನ ಮನಸ್ಸಿನ ಕೋಲಾಹಲ ಇವರಿಗೆ  ಯಾಕೆ ಅರ್ಥವಾಗುತ್ತಿಲ್ಲ...ಉಪಯೋಗಕಿಲ್ಲದ ಸ್ನೇಹ ಬೇಡವೆಂದು ದೂರ ಹೊರಟರೂ ಜಿಗಣೆಯಂತೆ ಕಚ್ಚಿ ಮತ್ತೆ ಯಾಕೆ ನನ್ನ ಬೆನ್ನ ಹಿಂದೆ ಬೀಳುತ್ತಿದ್ದರು...ನನ್ನ ಮೇಲಿನ ಪ್ರೀತಿಯಿಂದಲೇ..ಅಥವಾ ನಾನು ಮತ್ತೆ ಸಂತೋಷವಾಗಿರುವುದು ಅವರಿಗೆ ಬೇಡವಾಗಿಯೇ..ಆ ಎರಡು ವರ್ಷಗಳಲ್ಲಿ ನನ್ನಿಂದ ತಪ್ಪಾಗಿದ್ದರೂ ಕ್ಷಮೆಯಿರದ ತಪ್ಪೇ ಅದು?

ಮುಂದೆ ಕೆಲ  ದಿನಗಳಲ್ಲಿ ಭೂಮಿಕಾಳ ಸಂಬಂಧ ಬಂದಾಗ ನನ್ನಿಂದಾದಷ್ಟು ಜಾಗ್ರತೆ ವಹಿಸಿದ್ದೆ...ಹಳೆಯ ಗೆಳೆಯರನ್ನು ನನ್ನ ಹೊಸ ಸಂಬಂಧದಲ್ಲಿ ತರಬಾರದೆಂದು...ಆದರೆ..ಅವರಿಗ್ಯಾಕೆ ಅದು ಅರ್ಥವಾಗಲೇ ಇಲ್ಲ...ಅದೆಷ್ಟು ಬಾರಿ ಫೋನ್ ಮಾಡಿಲ್ಲ..ಒಮ್ಮೆಯೂ ಎತ್ತುವ ಪ್ರಯತ್ನ ಮಾಡಿರಲಿಲ್ಲ, ನನ್ನ ಫೋನ್ ನಂಬರನ್ನು ಸಹ ಬದಲಾಯಿಸಿದ್ದೆ..ಆದರೂ ನನ್ನ ಮನಸಿನ ಇಚ್ಛೆ ಅವರಿಗೆ ಅರ್ಥವಾಗದೆ ಹೋಯಿತೇ..ನನ್ನ ಮದುವೆಗೆ ಎರಡು ವಾರ ಇರುವಂತೆ ಎಲ್ಲಿಂದಲೋ ಭೂಮಿಕಳ e-ವಿಳಾಸ  ಪತ್ತೆ ಹಚ್ಚಿ ನನಗೂ ಸೇರಿ ಶುಭಾಶಯದ ಇಮೇಲ್ ಕಳಿಸಿದರಲ್ಲ...ಶುಭಾಶಯ ಹೇಳುವುದೇ ಅವರ ಉದ್ದೇಶವಾಗಿತ್ತೆ..ಇಲ್ಲ ನನ್ನ ಮದುವೆ ಮುರಿಯುವ ನಕ್ಷೆ ಅದಾಗಿತ್ತೆ...ಶುಭಾಷಯ ಕಳಿಸಲು ಯಾವತ್ತೋ ಹಿಂದೆ ನಾವೆಲ್ಲಾ ಒಟ್ಟಾಗಿ ಕುಡಿಯಲು ಉಪಯೋಗಿಸಿದ ಸಂದೇಶವನ್ನೇಕೆ ಬಳಸಿದರು...ಮೊದಲ ನೋಟದಲ್ಲಿ ನನಗೂ ಏಕೆ ಅದು ಹೊಳೆಯಲಿಲ್ಲ..ಭೂಮಿಕ ಫೋನ್ ಮಾಡಿ ಸುಳ್ಳು ಹೇಳಿ ಮದುವೆಯಾಗುತ್ತಿದ್ದಿಯ ಎಂದು ಗದರಿಸಿದ ಮೇಲಲ್ಲವೇ ನನಗದು ಅರಿವಾಗಿದ್ದುದು...ಮತ್ತೆ ಅವಳ ಕೋಪ ತಣಿಸಲು ನಾನು ಜೀವಮಾನದಲ್ಲಿ ಕಲಿತಿದ್ದನ್ನೆಲ್ಲ ಉಪಯೋಗಿಸಬೇಕಾಯಿತಲ್ಲ..

ಅವತ್ತು ನನಗೆ ಬಂದಷ್ಟು ಕೋಪ ಬಹುಷಃ ಜೀವಮಾನದಲ್ಲಿ ಮುಂದೆ ಯಾವತ್ತೂ ಬರಲಿಕ್ಕಿಲ್ಲ..ಮೊದಲೇ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಹಾಕುವ ಕೆಲಸವೇಕೆ ಮಾಡಿದರವರು...ಮದುವೆಯ ತಯಾರಿಯೆಲ್ಲ ಮುಗಿಯುತ್ತ ಬಂದರೂ ತಮಗೆ ತಿಳಿಸಲಿಲ್ಲವೆಂದೇ?  ಕೋಪದಲ್ಲಿ ಪ್ರತಿಯೊಬ್ಬರಿಗೂ ಫೋನ್ ಮಾಡಿ ಮನಸ್ಸು ತ್ರಪ್ತಿಯಾಗುವಷ್ಟು ಉಗುಳಿದಾಗ ಹೇಗೆ ಬೆಕ್ಕಿನಂತೆ ಕಣ್ಣು ಮುಚ್ಚಿಕೊಂಡರು..ಕುಡಿಯುವ ವಿಷಯ ಇರುವ ಸಂದೇಶ ಅದರಲ್ಲಿದ್ದುದು ತಿಳಿದಿಲ್ಲ ಎಂಬುದಾಗಿ...ನಂಬಬೇಕಿತ್ತೆ ನಾನು ಅದನ್ನೆಲ್ಲ..ಇಷ್ಟಾದ ಮೇಲೂ...ಮತ್ತೊಮ್ಮೆ ನನ್ನ ತಂಟೆಗೆ ಬರಬೇಡಿ ಅಂದು ಕಟುವಾಗಿ ಎಚ್ಚರಿಸಬೇಕಾಯಿತಲ್ಲ..ಇಪ್ಪತ್ತೆರಡು ವರುಷ ನನ್ನ ಜೊತೆ ಜೋತೆಯಾಗಿದ್ದವರನ್ನು...

ಇದೀಗ ಎರಡು ವರ್ಷಗಳಾಯಿತು...ಯಾರ ಕಿರಿಕಿರಿಯೂ ಇರದೆ..ಭೂಮಿಕಳ ಜೊತೆ ನಮ್ಮದೇ ಹೊಸ ಲೋಕ ನಿರ್ಮಿಸಿಕೊಂಡು...ಆದರೆ ನಾನು ಬಯಸಿದ್ದು ಪಡೆದು ಕೊಂಡೆನೆ..ತಿಳಿಯುತ್ತಿಲ್ಲ.. ಎಲ್ಲ ಇದ್ದರೂ ಕೂಡ ಏನೋ ಅಮೂಲ್ಯವಾದದನ್ನು ಕಳೆದುಕೊಂಡ ಅನುಭವ...ಮತ್ತೆ ಅವರೊಡನೆ ಹೋಗೋಣವೆಂದರೂ ಹೋಗಲಾರದ ಅಸಹಾಯಕತೆ..ಪರಿಸ್ಥಿತಿಯ ಕೈಗೊಂಬೆಯಾಗಿ ಪರಿತ್ಯಕ್ತನಾದೆನೆ, ಇಲ್ಲ ಅಂತಹ ಪರಿಸ್ಥಿತಿಯಲ್ಲಿತಳ್ಳಲ್ಪಟ್ಟೆನೆ...ಇನ್ನೂ ನಿರ್ಧರಿಸಲಾಗದ ಗೊಂದಲ...  

Monday, November 7, 2011

ಟೆಲಿಫೋನ್ ಗೆಳತಿ


ಮೂಲೆಯಲ್ಲಿರುವ ನನ್ನ ಸೀಟಿನಲ್ಲಿ ಕುಳಿತುಕೊಂಡು ಕಂಪ್ಯೂಟರನ್ನೇ ದಿಟ್ಟಿಸುತ್ತಿದ್ದೆ, ಸುಟ್ಟು ಬಿಡುವ ಹಾಗೆ. 'ಟ್ರಿನ್ ಟ್ರಿನ್ ಟ್ರಿನ್ ಟ್ರಿನ್', ಪಕ್ಕದಲ್ಲಿ ಕುಳಿತ್ತಿದ್ದ ಗಿರೀಶ್ ಫೋನು ಜೋರಾಗಿ ರಿಂಗಾಗುತ್ತ ಇತ್ತು. ಗಿರೀಶ್ ಹಲೋ ಎನ್ನುವಾಗಲೇ ಆ ಕಡೆಯಿಂದ ಇಂಪಾದ ಧ್ವನಿ, ಕಂಪ್ಯೂಟರ್ ಮೇಲಿದ್ದ ನನ್ನ ಸಿಟ್ಟೆಲ್ಲ ಒಮ್ಮೆಲೇ ಕರಗಿ ಹೋಗಿತ್ತು ಆ ಸ್ವರದ ಮಾಧುರ್ಯಕ್ಕೆ. 'ಗುಡ್ ಮಾರ್ನಿಂಗ್ ಸರ್, ದಿಸ್ ಈಸ್ ಪ್ರಿಯಾ ಫ್ರಂ ಎಬಿಎನ್ ಬ್ಯಾಂಕ್' ಎನ್ನುವಂತೆಯೇ ಫೋನೆತ್ತಿ ಕೊಂಡು ಹೊರಗಡೆ ನಡೆದಿದ್ದ ಗಿರೀಶ್. ಲೋನ್ ಬೇಕಿಲ್ಲ ಅಂದರೂ ಕೂಡ ಹದಿನೈದು ನಿಮಿಷಗಳ ಕಾಲ ಪ್ರಿಯಾಳ ಹತ್ತಿರ ಏನೇನೋ ಪ್ರೀತಿಯಿಂದ ಮಾತನಾಡಿ ಬಂದ. ನನಗಂತೂ ಕರಗಿದ ಸಿಟ್ಟೆಲ್ಲ ದುಪ್ಪಟ್ಟಾಗಿ ಬಂದಿತ್ತು. ಸಾಲ ಬೇಕಿಲ್ಲ ಅಂದರೂ ಸಾಲು ಸಾಲಾಗಿ ಗಿರಿಶನಿಗೆ ಕರೆ ಮಾಡುವ ಪ್ರಿಯಾ, ರಮ್ಯ, ಅಮೂಲ್ಯರು ನಿಜವಾಗಲು ಸಾಲ ಬೇಕಿದ್ದ ನನಗೆ ಒಮ್ಮೆಯೂ ಕರೆ ಮಾಡುವ ಪ್ರಯತ್ನ ಮಾಡಿರಲಿಲ್ಲ. ಖುಷಿಯಲ್ಲಿ ತೇಲಾಡುತ್ತ ಬಂದ ಗಿರೀಶನಿಗೂ ಅದನ್ನೇ ಹೇಳಿದೆ, 'ಅಯ್ಯೋ ಅದಕ್ಯಾಕ್ಕೆ ಅಳ್ತೀಯಪ್ಪಾ, ನನಗೂ ಎಲ್ಲರನ್ನು ಮೈಂಟೈನ್ ಮಾಡಕ್ಕಾಗಲ್ಲ, ಇನ್ನು ಮೇಲೆ ಬಂದ ಮೊದಲ ನಂಬರಿಗೆ ನಿನ್ನನ್ನೇ ರೆಫರ್ ಮಾಡ್ತೇನೆ' ಅಂದ. 

ಗಿರೀಶನ ಜೊತೆ ಕಷ್ಟ ಹೇಳಿಕೊಂಡ ಮರುದಿನವೇ ನನ್ನ ಮೊಬೈಲ್ ಟ್ರಿನ್ ಟ್ರಿನ್ ಟ್ರಿನ್ ಅನ್ನ ತೊಡಗಿತ್ತು. ಫೋನೆತ್ತಿದೊಡನೆ ಅತ್ತ ಕಡೆಯಿಂದ ಮಧುರವಾದ ಧ್ವನಿ, 'ಗುಡ್ ಮಾರ್ನಿಂಗ್ ಸರ್, ದಿಸ್ ಇಸ್ ಕಾವ್ಯ ಫ್ರಂ ಎಬಿಎನ್ ಅಮ್ರೋ ಬ್ಯಾಂಕ್. ಆಂ ಐ ಸ್ಪೀಕಿಂಗ್ ಟು ಕಿರಣ್?'. ಫೋನನ್ನು ಬಾಯಿಯ ಹತ್ತಿರ ತಂದು ನಿದಾನವಾಗಿ 'ಎಸ್ ಎಸ್' ಎನ್ನುತ್ತಲೇ ಹೊರಗಡೆ ಓಡಿದೆ. ಸುತ್ತಿ ಬಳಸದೆ ನೇರವಾಗಿ ವಿಷಯಕ್ಕೆ ಬಂದ ಕಾವ್ಯ, ಸಾಲದ ವಿವರಗಳನ್ನು ಕೇಳುತ್ತ ಹೋದಳು. ಸೂತ್ರದ ಬೊಂಬೆಯಂತೆ ಅವಳ ಪ್ರಶ್ನೆಗಳಿಗೆಲ್ಲ ಉತ್ತರ ನೀಡುತ್ತ ನಾನು ಹೋಗಿದ್ದೆ. ನನಗೆ ಬೇಕಿದ್ದ ಮೂರು ಲಕ್ಷಕ್ಕೆ ಬದಲಾಗಿ ನಾಲ್ಕು ಲಕ್ಷ ತೆಗೆದುಕೊಳ್ಳಿ, ಬಡ್ಡಿ ದರ ಕಡಿಮೆ ಇದೆ ಎಂದು ಮೂರ್ ನಾಲ್ಕು ಸಲ ಒತ್ತಾಯದಿಂದ ಹೇಳಿದ್ದು ಬಿಟ್ಟರೆ ಬೇರೆ ಯಾವ ವಿಷಯವನ್ನು ತೆಗೆಯಲಿಲ್ಲ. ಸದ್ಯಕ್ಕೆ ನಾಲ್ಕು ಲಕ್ಷದ ಅಗತ್ಯವಿಲ್ಲ ಎಂದು ಹೇಳೋದು ಬಿಟ್ಟರೆ ಹೇಗೆ ಸಂಭಾಷಣೆ ಮುಂದುವರಿಸುವುದೆಂದೂ ನನಗೂ ತೋಚಲಿಲ್ಲ. ಮೊದಲ ಕರೆ ಐದೇ ನಿಮಿಷಗಳಲ್ಲಿ ಮುಗಿಯಿತು. ನನ್ನ ಮೇಲೆ ನನಗೆ ಸಿಟ್ಟು, ಉಳಿದವರೆಲ್ಲ ಸಾಲ ತೆಗೆದುಕೊಳ್ಳದೆ ಗಂಟೆಗಟ್ಟಲೆ ಮಾತನಾಡುವಾಗ ನಾನು ಸಾಲ ತೆಗೆದು ಕೊಳ್ಳುವವ ಐದೇ ನಿಮಿಷದಲ್ಲಿ ಫೋನ್ ಇಟ್ಟೆನಲ್ಲ ಅಂತ. ಅವಳಿಗಾದರೂ ಬೇರೆ ಏನಾದರು ವಿಷಯ ಎತ್ತಿ ಸ್ವಲ್ಪ ಮಾತು ಮುಂದುವರಿಸಬಹುದಿತ್ತಲ್ಲ, ಅಷ್ಟು ಬೇಗ ಸಾಲಕ್ಕೆ ಒಪ್ಪಿಗೆ ಕೊಟ್ಟಿಲ್ಲವ ನಾನು ಅಂತನಿಸುತ್ತಿತ್ತು. ಬಹುಶ ಸ್ವಲ್ಪ ಒಳ್ಳೆಯ ಮನೆತನದವಳಿರಬೇಕು, ಸ್ವರ ಕೇಳಿದರೆ ಸುಮ್ಮ ಸುಮ್ಮನೆ ಯಾರ್ಯಾರ ಜೊತೆಗೆ ಮಾತನಾಡುವ ಹುಡುಗಿಯರಂತಿಲ್ಲ ಅಂದು ನನ್ನನ್ನೇ ಸಮಾದಾನಿಸಿಕೊಂಡೆ. ಬಂದ ನಂಬರಿಗೆ ಮತ್ತೊಮ್ಮೆ ಕರೆ ಮಾಡೋಣ ಅನ್ನಿಸಿತು, ಆದರೆ ಹೇಗೆ ಮಾತು ಮುಂದುವರಿಸಬೇಕೆಂದು ಇವಾಗಲೂ ತೋಚುತ್ತಿರಲಿಲ್ಲ. ನಿದಾನವಾಗಿ ನನ್ನ ಸೀಟಿನತ್ತ ವಾಪಾಸು ಹೋಗಿ ಮತ್ತೆ ಗಿರೀಶನ ಶರಣು ಹೋದೆ. 

ಮರುದಿನ ಮತ್ತೆ ಕಾವ್ಯಳ ಕರೆ ಬಂತು. ನಿನ್ನೆಗಿಂತ ಜಾಸ್ತಿ ದೈರ್ಯವಿತ್ತು ಇಂದು, ಹಾಗೆ ಗಿರೀಶನ ಅನುಭವದ ಸಲಹೆಗಳೂ ಜೊತೆಗಿದ್ದವು. 
'ಸರ್, ಫೋರ್ ಲ್ಯಾಕ್ಸ್ ತಗೊಳ್ಳಿ ಸರ್, ತುಂಬಾ ಕಡಿಮೆ ಇದೆ ಇಂಟರೆಸ್ಟ್'
'ನಂಗೆ ಮೂರೇ ಸಾಕು, ಬೇಕಿದ್ರೆ ಒಂದು ನಿಮ್ಮ ಹೆಸರಲ್ಲಿ ತಗೊಳ್ಳೋಣ' ಅಂದೆ
'ಅಯ್ಯೋ, ಅಷ್ಟೆಲ್ಲ ಸಾಲ ತೀರಿಸೋಕೆ ನನ್ನ ಕೈಲಿ ಆಗಲ್ಲಪ್ಪ'
'ಯಾಕ್ರೀ, ಬೇರೆಯವರಿಗೆ ಅಷ್ಟೊಂದೆಲ್ಲ ಸಾಲ ಕೊಡಿಸ್ತ ಇದ್ದೀರಾ'
'ಇಲ್ಲ ಸರ್, ಇವಾಗಿನ್ನು ನನ್ನ ಕಾಲೇಜೆ ಮುಗಿದಿಲ್ಲ'
'ಸರ್ ಅಂತ ಕರೀಬೆಡ್ರಿ, ಬೈಯ್ತ ಇದ್ದಾಗೆ ಅನ್ಸತ್ತೆ, ಕಿರಣ್ ಅಂತಾನೆ ಕರೀರಿ. ಅಂದ್ ಹಾಗೆ ನೀವು ಇನ್ನು ಓದ್ತಾನೆ ಇದ್ದೀರಾ'?

ಹಾಗೆ ಮಾತಾಡ್ತಾ ಆಡ್ತಾ ಅರ್ಧ ಗಂಟೆ ಆಗಿದ್ದೆ ಗೊತ್ತಾಗಿರಲಿಲ್ಲ. ಗಿರೀಶ್ ಒಳಗಡೆಯಿಂದ ಸನ್ನೆ ಮಾಡಿದಾಗಲೇ ಗೊತ್ತಾಗಿದ್ದುದು, ಮೀಟಿಂಗ್ ಟೈಮ್ ಆಯಿತು ಅಂತ. ಒಲ್ಲದ ಮನಸ್ಸಿಂದ ಕಾವ್ಯಳಿಗೆ ಬೈ ಹೇಳಿದೆ, ಹೇಳಿದಂತೆ ಒಂದೇ ನಿಮಿಷದಲ್ಲಿ ಮೆಸೇಜ್ ಬಂದಿತು, ಅವಳ ಮೊಬೈಲ್ ನಿಂದ. ಎಲ್ಲೋ ಗಾಳಿಯಲ್ಲಿ ಹಾರಿದ ಅನುಭವ. ಕಾಲೇಜಿನಲ್ಲಿ ಸಹ ಯಾವ ಹುಡುಗಿಯರೊಂದಿಗು ಮಾತಾಡದ ನಾನು, ಮೊದಲ ಬಾರಿ ಯಾರೋ ಅಪರಿಚಿತ ಹುಡುಗಿಯೊಂದಿಗೆ ಅರ್ಧ ಗಂಟೆ ಮಾತನಾಡಿದ್ದೆ, ಒಂಥರಾ ಬೇರೆ ಲೋಕದಲ್ಲಿ ಸಂಚರಿಸಿದ ಅನುಭವ.

ಸಂಜೆ ರೂಮಿಗೆ ಹೋದೊಡನೆ ಹೊಸ ಅನುಭವವನ್ನ ಎಲ್ಲರ ಜೊತೆ ಮಸ್ಸಾಲೆ ಹಾಕಿ ಹಂಚಿ ಕೊಂಡೆ, ಕಾವ್ಯಳಿಗೆ ಕಳಿಸೋಕೆ ಬೇಕಿದ್ದ ಎಸ್ಸೆಮ್ಮೆಸ್ ಗಳು ಅವರುಗಳು ತಾನೇ ಕಳಿಸಬೇಕು, ನನಗೆ ಕಳಿಸೋಕೆ ಇದು ತನಕ ಯಾರೂ ಸಿಕ್ಕಿರಲಿಲ್ಲ. ಗುಡ್ ನೈಟ್ ಎಸ್ಸೆಮ್ಮೆಸ್ ಕಳಿಸೋದರಲ್ಲಿ ಅಷ್ಟೊಂದು ಕಾತರ ಇರುತ್ತೆಂತ ನನಗಾವಾಗಲೇ ಗೊತ್ತಾಗಿದ್ದುದು. ನನ್ನ ಮೆಸೇಜ್ ಹೋದ ಐದೇ ನಿಮಿಷಗಳಲ್ಲಿ ಬಂದಿತ್ತು ಕಾವ್ಯಳ ಉತ್ತರ. ಒಬ್ಬಳು ಹುಡುಗಿ ನನಗೆ ಕಳಸಿದ ಮೊತ್ತ ಮೊದಲ ಮೆಸೇಜ್. ಎಷ್ಟು ಬಾರಿ ಓದಿದರೂ ತ್ರಪ್ತಿಯಿರಲಿಲ್ಲ. ಕಾವ್ಯ ಎಂಬ ಹೆಸರೇ ನನಗೆ ತುಂಬಾ ಕುತೂಹಲ ಹಿಡಿಸಿತ್ತು, ಹೆಸರು ಕೇಳಿದರೆ ನೋಡಲೂ ಕೂಡ ಚೆನ್ನಾಗೆ ಇರುತ್ತಾಳೆ ಅಂತ ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು.

ಮುಂದಿನ ಮೂರು ದಿನಗಳಲ್ಲೇ ನನ್ನ ಲೋನ್ ವ್ಯವಹಾರವೆಲ್ಲ ಮುಗಿದಿತ್ತು, ಹಾಗೆ ಕಾವ್ಯಳ ಜೊತೆಗಿನ ಹೊಸ ಫೋನ್ ವ್ಯವಹಾರ ಶುರುವಾಗಿತ್ತು. ಪ್ರತಿ ದಿನ ಎರೆಡೆರಡು ಘಂಟೆ ಮಾತಾಡಿದರೂ ಮರುದಿನ ಮತ್ತೆ ಮಾತನಾಡಲಿಕ್ಕೆ ವಿಷಯ ಎಲ್ಲಿಂದ ಬರುತ್ತೆ ಅಂತ ನನಗೆ ಆಶ್ಚರ್ಯವಾಗುತ್ತಿತ್ತು. ಹಿಂದೆ ಮನಸೋ ಇಚ್ಛೆ ಗಿರೀಶನಿಗೆ ಬಯ್ಯುತ್ತಿದ್ದ ನಾನು ಈವಾಗ ಅವನ ದಾರಿಯನ್ನೇ ಅನುಸರಿಸೋದು ನೋಡಿ ಆಶ್ಚರ್ಯ ಅನಿಸುತ್ತಿತ್ತು. ಎಟುಕದ ದ್ರಾಕ್ಷಿ ಬೇರೆಯವರಿಗೆ ಹುಳಿ ಎಂಬ ಸತ್ಯ ಅರಿವಾಗಿತ್ತು.

ಹತ್ತಿರ ಹತ್ತಿರ ಮೂರು ತಿಂಗಳಾಗಿತ್ತು, ಇನ್ನೂರು ರೂಪಾಯೀ ತುಂಬಿಸುತ್ತಿದ್ದ ಫೋನಿಗೆ ಸಾವಿರ ರುಪಾಯೀ ತುಂಬಿಸಲು ಶುರು ಮಾಡಿ. ಆದರೂ ಮುಖತಃ ಕಾವ್ಯಳನ್ನು ಭೇಟಿಯಾಗಲು ಆಗೇ ಇರಲಿಲ್ಲ. ಎರಡು ಮೂರು ಬಾರಿ ಪ್ರಯತ್ನಿಸಿದಾಗಲೆಲ್ಲ ಏನಾದರು ನೆಪ ಮಾಡಿ ತಪ್ಪಿಸಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ನನ್ನಲ್ಲೆಭಯ, ಎಲ್ಲಾದರೂ ನಾನು ಅಂದು ಕೊಂಡಷ್ಟು ಚೆನ್ನಾಗಿರಲಿಲ್ಲ ಅಂದರೆ ಏನು ಮಾಡೋದು ಅಂತ, ದಿನಾ ಎರೆಡೆರಡು ಘಂಟೆ ಮಾತಾಡುವವರು ಹೇಗೆ 'ಸ್ನೇಹ' ಕಳೆದುಕೊಳ್ಳೋದು ಅಂತ. ಒಮ್ಮೆ ಅವಳಲ್ಲಿ ನೇರವಾಗಿಯೂ ಕೇಳಿದ್ದೆ. ಕೋಪಿಸಿಕೊಳ್ಳದೆ ನಗುತ್ತ ಹೇಳಿದ್ದಳು 'ಒಮ್ಮೆ ನೋಡಿದರೆ, ಪ್ರತಿ ದಿನಾ ಕೂಡ ಬರ್ತೀರಿ, ಅದಕ್ಕೆ ಸ್ವಲ್ಪ ಕಾಯಿಸುತ್ತಾ ಇರೋದು' ಅಂತ. ಆ ದಿನವಂತೂ ರಾತ್ರಿಯೆಲ್ಲ ಅವಳದೇ ಕನಸು, ಬಿಳಿಯ ಬಟ್ಟೆಯಲಿ ಅಪ್ಸರೆಯಂತೆ ನನ್ನ ಸುತ್ತ ಸುತ್ತಾಡಿದಂತೆ.

ಮತ್ತೆ ಕೆಲ ದಿನಗಳು ಹಾಗೆ ಕಳೆದವು. ಪ್ರತಿದಿನದಂತೆ ಮಧ್ಯಾಹ್ನ ಊಟದ ಬಳಿಕ ಕಾವ್ಯಳಿಗೆ ಕರೆ ಮಾಡಿದೆ. ಕಾವ್ಯಳ ಸ್ವರದಲ್ಲಿ ಏನೋ ಸಣ್ಣ ಬದಲಾವಣೆ
'ಕಿರಣ್, ನಾನು ಏನೋ ಕೇಳಿದರೆ ಬೇಜಾರ್ ಮಾಡಲ್ಲ ತಾನೇ'
'ಇಲ್ಲ ಕಣೆ, ಕೇಳು'
'ನನ್ನ ಎಕ್ಷಾಮ್ ಹತ್ತಿರ ಬಂತು, ಹತ್ತು ಸಾವಿರ ಫೀ ಕೊಡಬೇಕು, ಐದುಸಾವಿರ ಒಟ್ಟು ಮಾಡಿದ್ದೇನೆ, ಇನ್ನೈದು ಸಾವಿರ ಆಗ್ತಾ ಇಲ್ಲ, ಐದಾರು ದಿನದಲ್ಲಿ ನನ್ನ ಸಂಬಳ ಬರುತ್ತೆ, ತೀರಿಸಿಬಿಡುತ್ತೇನೆ, ಪ್ಲೀಸ್' ಅಂದಳು.
'ಅರೆ ಐದೇಕೆ, ಹತ್ತು ಕೇಳಿದ್ದರೂ ಕೊಡುತ್ತಿದ್ದೆ', ಕ್ಷಣವೂ ಯೋಚಿಸದೆ ಹೇಳಿದೆ 'ಆದರೆ, ಒಂದು ಕಂಡಿಶನ್ ಮೇಲೆ'
'ತುಂಬಾ ಥ್ಯಾಂಕ್ಸ್ ಕಿರಣ್, ಆದರೆ ಕಂಡಿಶನ್ ಏನು?'
'ಹಣ ಮಾತ್ರ ನಿಮ್ಮ ಕೈಯಲ್ಲೇ ಕೊಡೋದು' 
ಸ್ವಲ್ಪ ಯೋಚನೆಗಿಟ್ಟುಕೊಂಡಳನ್ನಿಸುತ್ತೆ, ಸ್ವಲ್ಪ ಹೊತ್ತಿನ ಮೇಲೆ ಹೇಳಿದಳು 'ಆಯಿತು ಕಿರಣ್, ನಾಳೆ ಸಿಗ್ತೀನಿ ನಿಮಗೆ, ನಮ್ಮ ಆಫೀಸ್ ಹತ್ತಿರ 'ನಂದಿನಿ' ಹೋಟೆಲ್ ಇದೆಯಲ್ಲ, ಅಲ್ಲಿ ಬರ್ತೇನೆ ಮಧ್ಯಾಹ್ನ' 
ನನಗೋ ಆಕಾಶ ನಾಲ್ಕೇ ಗೇಣು ಅನಿಸಿತ್ತು.

ಮರುದಿನ ಸ್ವಲ್ಪ ಬೇಗನೆ ಎದ್ದೆ. ಕಾವ್ಯಳ ಭೇಟಿ ಮಧ್ಯಾಹ್ನವಾದರೂ ಕೂಡ ಹೊತ್ತಿಗೆ ಮುಂಚೆಯೇ ಎಚ್ಚರವಾಗಿತ್ತು. ಇರುವುದರಲ್ಲೇ ಚೆನ್ನಾಗಿರೋ ಬಟ್ಟೆ ಹಾಕಿಕೊಂಡು ಬೇಗನೆ ಹೊರಟೆ. ಕಂಪ್ಯೂಟರ್ ಮುಂದೆ ಕೂತಿದ್ದರೂ ಕೂಡ ಯೋಚನೆಯೆಲ್ಲ ಮಧ್ಯಾಹ್ನದ ನನ್ನ ಪ್ರಥಮ ಭೇಟಿಯ ಮೇಲೆಯೇ ಇತ್ತು. ನಂದಿನಿ ಹೋಟೆಲ್ ನಮ್ಮ ಕಂಪನಿಯಿಂದ ಬರಿ ಹತ್ತು ನಿಮಿಷದ ದಾರಿ, ಆದರೂ ಕೂಡ ಅರ್ಧ ಘಂಟೆ ಮುಂಚೆಯೇ ಹೊರಟು ಮುಟ್ಟಿದೆ. ಚೆನ್ನಾಗಿರೋ ಯಾವ ಹುಡುಗಿ ಬಂದಾಗಲೆಲ್ಲ ಇವಳೇ ಆಗಿರಬಾರದೆ ಕಾವ್ಯ ಎಂದು ಮನಸ್ಸು ಹಂಬಲಿಸುತ್ತಿತ್ತು. ಎರಡು ಘಂಟೆಗೆ ಹತ್ತು ನಿಮಿಷವಿರುವಾಗ ಪಕ್ಕದ ಬಸ್ಸು ನಿಲ್ದಾಣದಲ್ಲಿ ಸ್ವಲ್ಪ ಕಂದು ಬಣ್ಣದ ಹುಡುಗಿಯೊಬ್ಬಳು ಬಂದು ನಿಂತದನ್ನು ನೋಡಿದೆ.  ನನ್ನ ಕಾವ್ಯ ಇವಳಾಗದಿರಲಿ ಇವಳಾಗದಿರಲಿ ಅಂತ ಮನಸ್ಸು ಕೂಗುತ್ತಿತ್ತು. ಸ್ವಲ್ಪ ಆ ಕಡೆ ಈ ಕಡೆ ನೋಡಿ ತನ್ನ ಮೊಬೈಲ್ ಎತ್ತಿ ಯಾರಿಗೋ ಕರೆ ಮಾಡತೊಡಗಿದಳು. ನನ್ನ ದುರಾದ್ರಷ್ಟಕ್ಕೆ ನನ್ನ ಮೊಬೈಲೇ ಕಂಪಿಸ ತೊಡಗಿತ್ತು. ಒಮ್ಮೇಲೆ ಏನೂ ಮಾಡುವುದೆಂದೇ ತೋಚಲಿಲ್ಲ. ಅಲ್ಲಿಂದ ಓಡಿ ಬಿಡೋಣ ಅಂತ ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು, ಆದರೆ ಕಾಲು ಮನಸ್ಸು ಮಾಡುತ್ತಿರಲಿಲ್ಲ. ಯಾಂತ್ರಿಕವಾಗಿ ಫೋನೆತ್ತಿ ಅವಳ್ಲಿದ್ದಲ್ಲಿಗೆ ನಡೆದೆ, ಒಲ್ಲದ ಕಾಲನ್ನು ಎಳೆಯುತ್ತ. 'ಹಾಯ್, ಅಯ್ ಯಾಮ್ ಕಿರಣ್' ಅಂತ ಪರಿಚಯ ಹೇಳಿದೆ. ಮುಂದೆಲ್ಲ ಅವಳೇ ಮಾತನಾಡಿದಳು, ನನಗೆ ಮಾತನಾಡಲೂ ಏನೂ ಉಳಿದಿರಲಿಲ್ಲ. ಒಲ್ಲದ ಮನಸ್ಸಿನಿಂದ ನನ್ನಲ್ಲಿದ ಐದು ಸಾವಿರ ರುಪಾಯಿಯನ್ನು ಕೊಟ್ಟು ಬಂದೆ.

ವಾಪಾಸ್ ಬಂದವನಿಗೆ ಮುಂದೆ ಹೇಗೆ ಅವಳಿಂದ ತಪ್ಪಿಸಿಕೊಳ್ಳುವುದೆಂಬುದೆ ದೊಡ್ಡ ಚಿಂತೆಯಾಗಿತ್ತು. ಇಷ್ಟು ದಿನಗಳ ತನಕ ಹಾಳುಮಾಡಿದ ಸಮಯ ಸಾಯಲಿ, ಇನ್ನು ಮುಂದೆಯಾದರೂ ಹೇಗಾದರೂ ಮಾಡಿ ಅವಳೊಂದಿಗೆ ಮಾತನಾಡುವುದು ನಿಲ್ಲಿಸ ಬೇಕೆನಿಸಿತ್ತು. ಆದರೆ ಒಮ್ಮೆಲೇ ಹೇಗೆ ಮಾಡಲಿ, ಈವತ್ತಷ್ಟೇ ದಾನಶೂರನಂತೆ ಐದು ಸಾವಿರ ಕೊಟ್ಟಿದ್ದೆ, ಐದು ದಿನಗಳ ನಂತರ ಅದನ್ನು ವಾಪಸು ತಗೆದುಕೊಳ್ಳಬೇಕಲ್ಲ. ಹಾಗೆಯೇ ಏನೋ ಒಂದು ತರ ಪಾಪಪ್ರಜ್ಞೆ ಕಾಡುತ್ತಿತ್ತು, ಕಾವ್ಯಳಿಗೆ ಮೊಸಮಾಡುತ್ತಿರುವ ನನ್ನ ಬಗ್ಗೆಯೇ ಜಿಗುಪ್ಸೆ ಬರುತ್ತಿತ್ತು. ನಾನಾಗಿಯೇ ಅವಳ ಸ್ನೇಹಕ್ಕೆ ಹಾತೊರೆದಿದ್ದೆ ಮೊದಲಿಗೆ, ಅವಳು ಸುಮ್ಮನೆ ನನ್ನ ಸ್ನೇಹಕ್ಕೆ ಸ್ಪಂದಿಸಿದ್ದಳಷ್ಟೇ. ಪ್ರತಿದಿನ ಕೂಡ ಎರೆಡೆರಡು ಘಂಟೆ ಮಾತನಾಡುತ್ತಿದ್ದ ನಾನು ಅವಳನ್ನು ನೋಡಿದ ನಂತರ ಎರಡು ನಿಮಿಷ ಸಹ ಮೊದಲಿನಂತೆ ಮಾತನಾಡಲು ತಡಪಡಿಸಿದ್ದೆ. ನಾಳೆ ಅವಳು ಕರೆ ಮಾಡಿದಾಗ ಹೇಗೆ ಉತ್ತರಿಸಬೇಕೆಂಬುದೆ ಹೊಳೆಯುತ್ತಿರಲಿಲ್ಲ. ಮೂರು ತಿಂಗಳ ಸೆಳೆತವನ್ನೆಲ್ಲ ಮುಖ ನೋಡಿದ ಮೂರೇ ಸೆಕೆಂಡುಗಳಲ್ಲಿ ಕೊಡವಿದ ನನ್ನ ಮೇಲೆಯೇ ಅಸಹ್ಯವಾಗಲು ಶುರುವಾಗಿತ್ತು. ನನ್ನ ಹೊಸ ರೂಪ ನೋಡಿದಾಗ ಅವಳಿಗೆ ಹೇಗನ್ನಿಸಬೇಡ? ಆದರೂ ಕೂಡ ನನ್ನ ನಿರ್ಧಾರ ಅಚಲವಾಗಿತ್ತು, ಆದಷ್ಟು ಬೇಗ ಅವಳ ಸ್ನೇಹ ಕಳೆದುಕೊಳ್ಳಲು ನಿರ್ಧರಿಸಿದ್ದೆ. ಒಂದೇ ಸಲ ಮಾತಾನಾಡುವುದು ನಿಲ್ಲಿಸಿ ತುಂಬಾ ನೋಯಿಸುವುದು ಬೇಡವೆಂದು  ಐದು ನಿಮಿಷ ಮಾತನಾಡಿ ಮುಗಿಸೋಣವೆಂದು ಮರುದಿನ ಕರೆ ಮಾಡಿದೆ, ಆ ಕಡೆಯಿಂದ ಯಾವ ಪ್ರತಿಕ್ರಿಯೆ ಸಹ ಬರಲಿಲ್ಲ. ಒಂದು ಘಂಟೆ ಬಿಟ್ಟು ಮತ್ತೆ ಕರೆಮಾಡಿದೆ, ಆಗಲೂ ಸಹ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಕಾವ್ಯಳ ಕಡೆಯಿಂದ. ಮರುದಿನ ಇನ್ನೊಮ್ಮೆ ಕರೆ ಮಾಡಿದೆ. ನಿಬ್ಬೆರೆಗಾಗಿ ಮೌನವಾದ ನನ್ನ ಫೋನನ್ನೇ ದಿಟ್ಟಿಸುತ್ತ ನಿಂತೆ. ಯಾರು ಯಾರಿಗೆ ಮೋಸ ಮಾಡಿದರೆನ್ನುವುದೇ ತಿಳಿಯಲಿಲ್ಲ. 

Thursday, April 24, 2008

ರಂಗಯ್ಯನ ಕತೆ

ಆಗಿನ್ನೂ ನಾನು ತುಂಬಾ ಚಿಕ್ಕವನು. ಯಾರ ಮಾತು ಕೇಳದ ವಯಸ್ಸು, ಯಾರಿಗೂ ಹೆದರದ ಮನಸ್ಸು. ಇಡೀ ರಾತ್ರಿ ಅಳೋ ಸ್ವಭಾವ ಬೇರೆ. ಆದ್ರೆ ರಂಗಯ್ಯನ ಹೆಸರು ಕೇಳಿದ್ರೆ ಮಾತ್ರ ಗಪ್ ಚುಪ್. ರಂಗಯ್ಯ ನನಗಾಗಲಿ ನಮ್ಮ ಮನೆಯವರಿಗಾಗಲಿ ಏನೂ ತೊಂದರೆ ಮಾಡಿದವನಲ್ಲ, ಆದರೂ ರಂಗಯ್ಯನ ಭಯ ನಮಗೆ ಮಾತ್ರವಲ್ಲ, ಇಡೀ ಊರವರಿಗೆ ಇತ್ತು. ಅದಕ್ಕೆ ತಾನೆ, ಸಂಜೆ ಆರು ಗಂಟೆಗೆ ಎಲ್ಲ ಊಟ ಮಾಡಿ ಬಾಗಿಲು ಮುಚ್ಚಿ ಮಲಗಕ್ಕೆ ರೆಡಿ ಆಗ್ತ ಇದ್ದಿದ್ದು.

ರಂಗ ಪಂಡಿತರ ಮನೆಯವನು, ನಮ್ಮ ಮೇಷ್ಟ್ರ ಕೊನೆಯ ತಮ್ಮ. ಅವರು ನಮ್ಮ ಊರಿನವರಲ್ಲವಂತೆ, ದೂರದ ವೇಣೂರಿನಿಂದ ಬಂದು ನಮ್ಮ ಊರಿನಲ್ಲಿ ನೆಲೆ ನಿಂತವರು. ಉಳಿದವರಿಗೆ ಹೋಲಿಸಿದರೆ ತುಂಬಾ ದೊಡ್ಡ ಶ್ರೀಮಂತರು. ನೂರಾರು ಎಕರೆ ಭೂಮಿಯನ್ನು ಗೇಣಿ ಕೊಟ್ಟವರು. ಅದಕ್ಕೆ ರಂಗ ಎಲ್ಲರು ಬಾಯಲ್ಲು ರಂಗಯ್ಯ ಆಗಿದ್ದು.

ರಂಗಯ್ಯನ ಮನೆಯವರು ಶ್ರೀಮಂತರು ಮಾತ್ರ ಅಲ್ಲ, ವಿದ್ಯಾವಂತರು ಕೂಡ. ಪಂಡಿತರ ಮಕ್ಕಳ್ಳೆಲ್ಲ ಕೆಲಸದಲ್ಲಿ ಇದ್ದವರೆ, ರಂಗಯ್ಯನೊಬ್ಬನನ್ನು ಬಿಟ್ಟು. ಕಲಿತಿದ್ದರೂ ಕೂಡ ಯಾವ ಕೆಲಸಕ್ಕೂ ಸೇರದ ರಂಗಯ್ಯ, ಒಂದು ರೀತಿ ಉಂಡಾಡಿ ಗುಂಡನಾಗಿ ಬೆಳೆದಿದ್ದ. ಹಗಲ್ಲೆಲ್ಲ ಹುಡುಗರ ಜೊತೆ ಸೇರಿ ಊರೆಲ್ಲ ಸುತ್ತೋದು, ಹೊತ್ತು ಮುಳುಗೋ ಸಮಯ ಹೊಟ್ಟೆ ಹಸಿವೆ ಶುರು ಆದಾಗ ಮನೆ ದಾರಿ ನೋಡೋದು. ಊರೆಲ್ಲ ಸುತ್ತೊ ರಂಗಯ್ಯ ಸ್ವಲ್ಪ ಹುಡುಗು ಬುದ್ದಿ ಪುಂಡಾಟ ಮಾಡಿರಬಹುಡು, ಆದ್ರೆ ಯಾರಿಗೂ ಕೆಟ್ಟದ್ದು ಮಾಡಿದವನಂತು ಅಲ್ಲವೆ ಅಲ್ಲ. ನಾಲ್ಕು ಜನರ ಕೈಲಿ ಒಳ್ಳೆ ಹುಡ್ಗ ಅಂತಾನೆ ಅನ್ನಿಸ್ಕೊಂಡೊವ್ನು. ಆದ್ರೆ ಅವ್ನ ದುರದ್ರಷ್ಟ, ಒಂದು ದಿನಾನು ಮನೆಯವರ ಹತ್ರ ಒಂದು ಒಳ್ಳೆ ಮಾತು ಕೇಳಿಸ್ಕೊಂಡವನಲ್ಲ.ಒಂತರ ಊರಿಗೆ ಉಪಕಾರಿ ಮನೆಗೆ ಮಾರಿ ಅನ್ನೊ ಹಾಗೆ. ಎಲ್ಲ ಉದ್ಯೋಗದಲ್ಲೆ ಇರುವ ಮನೆಯಲ್ಲಿ ಇವನೊಬ್ಬ ಯಾರಿಗೂ ಬೇಡದವನಾಗಿದ್ದ. ಪ್ರತಿ ದಿನಾನು ಕೂಳಿಗೆ ದಂಡ ಎಂದು ಅಣ್ಣ ಅತ್ತಿಗೆಯವರ ಕೈಲಿ ಬೈಸಿ ಕೊಳ್ಳೋದೆ ರಂಗಯ್ಯನ ಜೀವನವಾಗಿತ್ತು.

ಮೊದ ಮೊದಲು ಸ್ವಲ್ಪ ದಿನ ಕ್ಯಾರೇ ಅನ್ನದ ರಂಗಯ್ಯ, ಕ್ರಮೇಣ ಸ್ವಲ್ಪ ಚಿಂತೆ ಮಾಡೋಕೆ ಶುರು ಮಾಡ್ಕೊಂಡ. ಬರುತ್ತ ಬರುತ್ತ ಅತ್ತಿಗೆಯವರ ಬಯ್ಗುಳ ಕೇಳಿ ಕೇಳಿ ಬೇಸರ ಪಟ್ಟು ಕೊಂಡ ರಂಗಯ್ಯ ಒಂತರ ಜೀವನದ ಮೇಲೆ ಜಿಗುಪ್ಸೆ ತಂದು ಕೊಂಡಿದ್ದ. ಒಂದು ದಿನ ಅಂತೂ ಜಗಳ ವಿಪರೀತಕ್ಕೆ ಹೋಗಿ ತಡೀಲಾರದೆ ಹಿತ್ತಲ ಮನೆಗೆ ಹೋಗಿ ಕುತ್ತಿಗೆಗೆ ನೇಣು ಹಾಕೊಂಡೇ ಬಿಟ್ಟ. ಮನೆಯವರು ಬಂದು ನೋಡೋದರ ಒಳಗೆ ಅರ್ಧ ಪ್ರಾಣ ಹೋಗಿತ್ತು. ಗಾಬರಿ ಬಿದ್ದ ಮನೆಯವರು ಪೋಲಿಸ್ಗೆ ಗೊತ್ತಾಗೋದು ಬೇಡಾ ಅಂತಾನೊ ಅಥವಾ ರಗಳೆ ಹೋಯ್ತು ಅಂತಾನೋ ಹೆಣ ಸುಡೋಕೆ ರೆಡಿ ಮಾಡೇ ಬಿಟ್ಟರು. ಗಡಿಬಿಡಿಯಲ್ಲಿ ಸುಡೋಕೆ ತೋಟದಲ್ಲೆ ಏರ್ಪಾಡು ಮಾಡಿದ್ರು. ಚಟ್ಟದ ಎದುರಿಗೆ ಕಲ್ಲು ಕುಟಿಗ ದೈವದ ಕಲ್ಲಿರುವುದು ನೋಡಿದ್ರೊ, ನೋಡಿನೂ ಸುಮ್ನೆ ಇದ್ದರೊ ಯಾರಿಗೂ ಗೊತ್ತಿಲ್ಲ. ಎಲ್ಲ ರೆಡಿಯಾಗುವಾಗ ಮಧ್ಯಾನ್ನ ಮಟ ಮಟ ಬಿಸಿಲು, ಇನ್ನೇನು ಚಟ್ಟಕ್ಕೆ ಬೆಂಕಿ ಇಟ್ಟರು ಎನ್ನುವಾಗ ಹೆಣ ಅಲುಗಾಡಕ್ಕೆ ಶುರು ಆಯ್ತು! ಹೆಣ ನಿಜವಾಗಿ ಅಲುಗಿತ್ತೆ, ರಂಗಯ್ಯ ಬದುಕಿದ್ದನೆ ಇಲ್ಲವೆ ಎಂದು ನೋಡಕ್ಕೆ ಯಾರೂ ಹೋಗದೆ ಬೆಂಕಿ ಇಟ್ಟೆ ಬಿಟ್ಟರು. ಕಲ್ಲು ಕುಟಿಗ ದೇವರ ಎದುರಿಗೇನೆ ಅರೆ ಸತ್ತ ರಂಗಯ್ಯನ ತಲೆ ಬುರುಡೆ ಫಳಾರ್ ಎಂದು ಸಿಡಿದು ಹೋಯ್ತು, ದೇಹ ಬೂದಿ ಆಗಿ ಹೋಯ್ತು.

ರಂಗಯ್ಯನ ಮೇಲೆ ಮನೆಯವರಿಗೆ ನಿಜವಾಗ್ಲೂ ದ್ವೇಷವಿತ್ತೊ, ಇಲ್ಲ ಹೆಣ ಅಲುಗಾಡೋದು ನೋಡಿ ಭಯ ಆಯ್ತೊ ಯಾರಿಗೂ ಗೊತ್ತಿಲ್ಲ, ಆದ್ರೆ ಸುಡೋವಾಗ ರಂಗಯ್ಯ ಸತ್ತಿರಲಿಲ್ಲ ಅನ್ನೊದು ಎಲ್ಲಾರಿಗೂ ಗೊತ್ತಾಗಿ ಹೋಯ್ತ್ತು. ಯಾಕಂದ್ರೆ ರಂಗಯ್ಯ ಎರಡೇ ದಿನದಲ್ಲಿ ವಾಪಾಸು ಬಂದು ಬಿಟ್ಟಿದ್ದ.

ಭೂತವಾಗಿ!

ಮೊದ ಮೊದಲು ರಂಗಯ್ಯ ವಾಪಸ್ಸು ಬಂದಿದ್ದ ಅಂದ್ರೆ ಯಾರೂ ನಂಬ್ತಾನೆ ಇರ್ಲಿಲ್ಲ. ಬಾರ್ಕೂರಿನ ಬೀಡಿ ವ್ಯಾಪಾರಿ ಅಂತೂ 'ರಂಗಯ್ಯನ ಪೆಂಗಯ್ಯನ' ಅಂದು ಗೇಲಿ ಮಾಡಿದ್ದ. ಚೌಳಿ ಕೆರೆ ಹತ್ರ ಒಬ್ಬನೆ ರಾತ್ರಿ ಹೋಗುವಾಗ ಹಿಂದುಗಡೆಯಿನಂದ ನಾಲ್ಕು ಬಿದ್ದಾಗಲೆ ಅವ್ನಿಗೆ ಗೊತ್ತಾಗಿದ್ದು, ರಂಗಯ್ಯ ನಿಜವಾಗ್ಲೂ ಇದ್ದಾನೆ ಅಂದು. ನಮ್ಮ ಚಿಕ್ಕಪ್ಪನಿಗೆ ಒಂತರ ಮೊಂಡು ದೈರ್ಯ ಆವಾಗ, ಸಂಜೆ ಏಳೂವರೆ ಹೊತ್ತಿಗೆ ನಾಲ್ಕು ಜನಾನ ಒಟ್ಟು ಮಾಡಿಕೊಂಡು ಹೊರಟೇ ಬಿಟ್ಟರು, ಟಾರ್ಚ್ ಹಿಡಕ್ಕೊಂಡು ಅಂಗಯ್ಯನ ಹುಡುಕೋಣ ಅಂತ. ಒಂದು ಅರ್ಧ ಗಂಟೆ ಪಂಡಿತರ ಮನೆ ಕಡೆ ಎಲ್ಲ ಹುಡುಕಿ, ಇನ್ನೇನು ರಂಗಯ್ಯ ಇಲ್ಲ ಅಂತ ವಾಪಾಸು ತೊಟದ ದಾರಿಯಲ್ಲಿ ಬರ್ತ ಇದ್ದಿದ್ರಂತೆ, ಅಲ್ಲಿ ನೇರಳೆ ಮರದ ಮೇಲೆ ಏನೋ ಚಿಕ್ಕ ಬೆಳಕು, ಬೆಳಕಿನ ಜೊತೆಗೆ ರಂಗಯ್ಯನ ಕೀರಲು ದ್ವನಿ, ತುಳುವಿನಲ್ಲಿ 'ಎನನ ನಾಡೆರೆಗ್ ಅಲ್ಪ ಪೂರ ದಾಯೆಗ್ ಪೋಪ, ನಿನ ಎದುರೆ ಉಲ್ಲೆ, ಸರೀ ತೂಲ' ಅಂತ. ಎದ್ದೆನೊ ಬಿದ್ದೆನೊ ಅಂತ ಒಂದೇ ಉಸಿಲರಲ್ಲಿ ಮನೆಗೆ ಬಂದ ಚಿಕ್ಕಪ್ಪನಿಗೆ ಐದು ನಿಮಿಷ ಆದ ಮೇಲೇ ಗೊತ್ತಾಗಿದ್ದು, ಟಾರ್ಚ್ ತೊಟದಲ್ಲೆ ಬಿಟ್ಟು ಬಂದೆ ಅಂದು.

ಆವಾಗಷ್ಟೆ ಇಂದಿರ ಗಾಂಧಿಯವರು ಡಿಕ್ಲರೇಷನ್ ಕಾನೂನು ಜಾರಿಗೆ ತಂದಿದ್ದರು, ಉಳುವವನೆ ಹೊಲದೊಡೆಯ ಅಂತ. ಆ ಕಾನೂನು ಪ್ರಕಾರ ಪಂಡಿತರ ಮನೆಯ ಅರ್ದಕ್ಕಿಂತ ಜಾಸ್ತಿ ಭೂಮಿ ಅವರ ಒಕ್ಕಲುಗಳಿಗೆ ಹೋಗ ಬೇಕಿತ್ತು. ನಮ್ಮ ಮನೆ ಸಮೀಪಾನೆ ಇರೋ ಬೋಳು, ಕಾಳು ಹಾಗು ಚೀರು ಅನ್ನುವವರು ಅದಕ್ಕಾಗಿ ಡಿಕ್ಲರೇಷನ್ ಅಪ್ಲಿಕೇಷನ್ ಬೇರೆ ಹಾಕಿದ್ದರು. ಆದ್ರೆ ರಂಗಯ್ಯ ಬಿಡಬೇಕಲ್ಲ, ಅಪ್ಲಿಕೇಷನ್ ಹಾಕಿದವ್ರಿಗೆ ಸಾಕೋ ಬೇಕೋ ಅನ್ನುವ ಹಾಗೆ ಮಾಡಿ, ಹೊಸ ಪಂಚಾಯ್ತಿ ಸೇರಿಸಿ ಪಂಡಿತರಿಗೆ ಅರ್ಧ ಜಮೀನು ವಾಪಾಸು ತರಿಸೇ ಬಿಟ್ಟ.

ಈ ಘಟನೆ ಆದ ಮೇಲೆ, ರಂಗಯ್ಯನಿಗೆ ಜಾಸ್ತಿ ಪಬ್ಲಿಸಿಟಿ ಸಿಕ್ಕಿದ್ದು. ಎಲ್ಲೆಲ್ಲಿಂದಲೊ ರಂಗಯ್ಯನ ನೊಡ್ಬೇಕು ಅಂತ ಜನಾ ಬರ್ತ ಇದ್ದಿದ್ರು. ಒಂದು ಸಲ ಜಿಲ್ಲಾಧಿಕಾರಿಗಳು ಬಂದಿದ್ರಂತೆ. ಕೆಲವೊಮ್ಮೆ ಅಂತು ಬಾರಕೂರು ಬ್ರಿಡ್ಜ್ ತನಕ ಜನ ಇರ್ತಿದ್ರಂತೆ. ಕಳ್ಳ ಚಂದ್ರನ್ ಇದ್ದಿದ್ದು ಕೂಡ ಅದೇ ಟೈಮಲ್ಲಿ. ರಂಗಯ್ಯ ವಾಪಾಸ್ ಬಂದಿದ್ದು ಒಂದು ರೀತೀಲಿ ಜನರಿಗೆ ಒಳ್ಳೇದೆ ಆಗಿತ್ತು. ಏನೋ ಒಂದು ಧೈರ್ಯ, ರಂಗಯ್ಯ ಇರೋವಾಗ ಚಂದ್ರನ್ ಕೈಲಿ ಎನೂ ಮಾಡಕ್ಕಾಗಲ್ಲ ಅಂತ. ರಂಗಯ್ಯ ಸತ್ತ ಮೇಲೂ ಕೂಡ ಊರವರಿಗೆ ಅಷ್ಟೇನೂ ತೊಂದರೆ ಕೊಟ್ಟಿರಲ್ಲಿಲ್ಲ. ಎಷ್ಟೋ ಸಲ ಒಬ್ಬೊಬ್ಬರೆ ರಾತ್ರಿ ಹೋಗುವಾಗ ಚೌಳಿ ಕೆರೆ ತನಕ ರಂಗಯ್ಯ ಟಾರ್ಚ್ ಹಿಡಕ್ಕೊಂಡು ಬಿಟ್ಟದ್ದು ಉಂಟು.

ನಮ್ಮಮ್ಮ ತುಂಬಾ ಸಲ ರಂಗಯ್ಯ ಮಾತಾಡೊದನ್ನ ಕೇಳಿದ್ರಂತೆ. ಪಂಡಿತರ ಮನೆಯವ್ರನ್ನ ಬಿಟ್ರೆ ತುಳು ಬರ್ತ ಇದ್ದಿದ್ದು ನಮ್ಮೂರಲ್ಲಿ ನಮ್ಮಮ್ಮನಿಗೆ ಮಾತ್ರ. ಹಾಗಾಗಿ ರಂಗಯ್ಯ ಅಂದ್ರೆ ನಮ್ಮಮ್ಮನಿಗೆ ಸ್ವಲ್ಪ ವಿಶೇಷ ಆಸ್ತೆ. ಒಂದೆರಡು ಸಲ ಮಾತಡಿದ್ದೂ ಉಂಟು. ನಮ್ಮನೆಯಲ್ಲಿ ಒಂದು ಸಲ ಹರಿಕೆ ಬಯಲಾಟ ಮಾಡಿದ್ರು. ಮಾರನೆ ದಿನ ಬೆಳಿಗ್ಗೆ ಪಂಡಿತರ ಮನೆಯಲ್ಲಿ ರಂಗಯ್ಯ ಹೇಳ್ತ ಇದ್ನಂತೆ 'ತಮ್ಮಯ್ಯನ ಮನೆ ಆಟ ಏನೇನೂ ಚೆನ್ನಾಗಿರಲ್ಲಿಲ್ಲ. ನಾನು ನೇರಳೆ ಮರದಲ್ಲಿ ಕೂತು ಸ್ವಲ್ಪ ನೋಡಿ, ಬೇಜಾರಾಗಿ ಮಲಗಿ ಬಿಟ್ಟೆ' ಅಂತ.

ಪಂಡಿತರ ಕೆಲವು ಬಂಧುಗಳು ಮುಂಬೈಯಲ್ಲಿ ಇದ್ರಂತೆ. ಇದ್ದಕ್ಕಿದ್ದಂತೆ ರಂಗಯ್ಯ ಒಂದು ದಿನ ಮನೆಗೆ ಬಂದು ಹೇಳಿದ್ನಂತೆ. 'ನಂಗೆ ಇಲ್ಲಿ ಸ್ವಲ್ಪ ಬೋರಾಗ್ತ ಇದೆ, ಸ್ವಲ್ಪ ದಿನ ಬಾಂಬೆಗೆ ಹೋಗಿ ಬರ್ತೇನೆ. ಟಿಕೆಟಿಗೆ ಇಪ್ಪತ್ತು ರುಪಾಯಿ ಕೊಡಿ ಅಂತ'. ಮನೆಯವ್ರು ಇಪ್ಪತ್ತು ರುಪಾಯಿ ತೆಗೆದು ಉಪ್ಪರಿಗೆ ಮೆಟ್ಟಿಲ ಹತ್ರ ಇಟ್ರು. ಮಾರನೆ ದಿನ ನೋಡ್ತಾರೆ, ಉಪ್ಪರಿಗೆ ಹತ್ರ ಇದ್ದ ಇಪ್ಪತ್ತು ರುಪಾಯಿ ಇಲ್ಲ, ಹಾಗೆಮೂರು ದಿನ ರಂಗಯ್ಯನ ಸುದ್ದೀನೂ ಇಲ್ಲ. ನಾಲ್ಕನೆ ದಿನ ಎದ್ದು ನೋಡ್ತಾರೆ, ಉಪ್ಪರಿಗೆ ಮೆಟ್ಟಿಲ ಪಕ್ಕದಲ್ಲಿ ಇಪ್ಪತ್ತು ರುಪಾಯಿ ವಾಪಾಸು ಬಂದು ಬಿದ್ದಿದೆ, ಸ್ವಲ್ಪ ಹೊತ್ತಲಿ ರಂಗಯ್ಯನ ಕೀರಲು ದ್ವನಿ 'ಬಾಂಬೆಗೆ ಹೋಗಿ ಬಂದೆ, ಆದ್ರೆ ಬಸ್ಸಲ್ಲಿ ಯಾರೂ ಟಿಕೆಟ್ಟೆ ಕೇಳ್ಲಿಲ್ಲ. ನಿಮ್ಮ ಇಪ್ಪತ್ತು ರುಪಾಯಿ ವಾಪಾಸ್ಸು ತಗೊಳ್ಳಿ' ಅಂತ.

ಹೀಗೆ ತುಂಬಾ ಕೆಲಸ ಮಾಡಿದ್ದ ರಂಗಯ್ಯ ಭೂತವಾಗಿ, ಆದ್ರೆ ಯಾರಿಗೂ ಸುಮ್ನೆ ಸುಮ್ನೆ ಹೇಳಿ ಕೊಳ್ಳುವಂತ ತೊಂದ್ರೆ ಏನೂ ಕೊಟ್ಟಿರಲ್ಲಿಲ್ಲ. ಡಿಕ್ಲರೇಷನ್ ವಿಷ್ಯದಲ್ಲಿ ಸ್ವಲ್ಪ ಗಲಾಟೆ ಮಾಡಿದ್ದು ಬಿಟ್ರೆ, ಮನೆಯವರಿಗೆ ಸ್ವಲ್ಪ ಹೆದ್ರಿಸ್ತಿದ್ದ, ಅಷ್ಟೆ. ಯಾರಿಗೂ ಪ್ರಾಣ ಹಾನಿ ಮಾಡಿರ್ಲಿಲ್ಲ. ಮನೆಯವ್ರು ಕೊಟ್ಟ ಮಾನಸಿಕ ಹಿಂಸೆಯೆಲ್ಲ ರಂಗಯ್ಯ ಸ್ವಲ್ಪ ಮರ್ತಿದ್ದಾನೆ ಅಂದ್ಕೊಂಡಿದ್ರು. ಆದ್ರೆ ಎಲ್ಲ ಸುಳ್ಳಾಗಿತ್ತು, ಮನುಷ್ರೇ ಮರಿಯಲ್ಲ, ಇನ್ನು ಭೂತಗಳು ಮರೀತಾವ? ಸ್ವಲ್ಪ ವರ್ಷದಲ್ಲೆ ತನಗಾದ ನೋವಿಗೆ ಬಡ್ಡಿ ಹಾಕಿ ರಂಗಯ್ಯ ಪ್ರತೀಕಾರ ತೀರಿಸ್ಕೊಂಡಿದ್ದ. ಶಾಲೆ ಬಿಟ್ಟು ಕೈ ಕಾಲು ತೊಳೆದು ಕೊಂಡು ಬರ್ತೀವಿ ಅಂತ ಕೆರೆಗೆ ಹೋಗಿದ್ದ ಅತ್ತಿಗೆಯವ್ರ ಮೂರು ಮಕ್ಳೂ ವಾಪಾಸು ಬರ್ಲೇ ಇಲ್ಲ. ಮೂರು ಜನರನ್ನು ನೀರಲ್ಲೆ ಮುಳುಗಿಸಿ ಮುಗಿಸಿ ಬಿಟ್ಟಿದ್ದ ರಂಗಯ್ಯ!

ಆಗ್ಲೇ ಗೊತ್ತಾಗಿದ್ದು ಮನೆಯವ್ರಿಗೆ, ಭೂತ ಯಾವತ್ತಿದ್ರೂ ಭೂತಾನೆ ಅಂತ. ಈ ಘಟನೆ ಆದ ಕೂಡ್ಲೆ ಮಂತ್ರವಾದಿಗಳನ್ನ ಕರೆಸಿ ಕೂಡಲೆ ರಂಗಯ್ಯನಿಗೆ ದಿಗ್ಭಂದನ ಹಾಕಿಸಿ ಬಿಟ್ರು. ಆವತ್ತಿಂದ ಇವತ್ತಿನ ತನಕ ರಂಗಯ್ಯ ಯಾರಿಗೂ ಕಾಣಿಸಿ ಕೊಂಡಿಲ್ಲ.